ಚುನಾವಣೆಗೆ ನಿಂತು ದಾಖಲೆ ಬರೆಯಲಿದ್ದಾರೆ ಆದಿತ್ಯ ಠಾಕ್ರೆ
ಮುಂಬೈ, ಆಗಸ್ಟ್ 01: ಇನ್ನು ಕೆಲವೇ ತಿಂಗಳುಗಳಲ್ಲಿ ನಡೆಯಲಿರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಶಿವಸೇನೆ ನಾಯಕ ಆದಿತ್ಯ ಠಾಕ್ರೆ ಅವರು ಸ್ಪರ್ಧಿಸುವುದು ಬಹುತೇಕ ಖಚಿತವಾಗಿದ್ದು, ಈ ಮೂಲಕ ಅವರು ಹೊಸ ದಾಖಲೆ ಬರೆಯಲಿದ್ದಾರೆ.
ಮಹಾರಾಷ್ಟ್ರ ರಾಜಕೀಯದಲ್ಲಿ ಶಿವಸೇನೆ ಸಕ್ರಿಯವಾಗಿದ್ದರೂ, ಶಿವಸೇನೆಯ ಸಂಸ್ಥಾಪಕಾರದ ಠಾಕ್ರೆ ಕುಟುಂಬದಿಂದ ಯಾರೊಬ್ಬರೂ ಇದುವರೆಗೆ ಚುನಾವಣೆಗೆ ನಿಂತಿರಲಿಲ್ಲ. ಬಾಳ್ ಠಾಕ್ರೆ, ಉದ್ಧವ್ ಠಾಕ್ರೆ ಅವರು ಸಹ ರಾಜಕಾರಣದಲ್ಲಿ ಸಕ್ರಿಯರಾಗಿದ್ದರೂ, ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಯೋಚಿಸಿರಲಿಲ್ಲ. ಕುಟುಂಬದಿಂದ ಯಾರೂ ಚುನಾವಣೆಗೆ ಸ್ಪರ್ಧಿಸಬಾರದು ಎಂಬುದು ಬಾಳ ಠಾಕ್ರೆ ಅವರ ನಿಲುವಾಗಿತ್ತು. ಆದರೆ ಇದೇ ಮೊದಲ ಬಾರಿಗೆ ಠಾಕ್ರೆ ಕುಟುಂಬದ ವ್ಯಕ್ತಿಯೊಬ್ಬರು ಚುನಾವಣೆಗೆ ಸ್ಪರ್ಧಿಸಲಿದ್ದಾರೆ.
ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿ ಬಗ್ಗೆ ಆದಿತ್ಯ ಠಾಕ್ರೆ ಹೇಳಿದ್ದೇನು?
28 ವರ್ಷ ವಯಸ್ಸಿನ ಆದಿತ್ಯ ಠಾಕ್ರೆ ಈಗಾಗಲೇ ಮಹಾರಾಷ್ಟ್ರದಾದ್ಯಂತ 'ಜನ್ ಆಶೀರ್ವಾದ ಯಾತ್ರೆ' ನಡೆಸುತ್ತಿದ್ದಾರೆ. 'ಲೋಕಸಭೆ ಚುನಾವಣೆಯಲ್ಲಿ ಶಿವಸೇನೆಯನ್ನು ಜನ ಆಶೀರ್ವದಿಸಿರುವುದರಿಂದ ಅವರಿಗೆ ಧನ್ಯವಾದ ಹೇಳಲು ಈ ಯಾತ್ರೆ' ಎಂದು ಅವರು ಹೇಳಿದ್ದರೂ, ವಿಧಾನಸಭೆ ಚುನಾವಣೆಯನ್ನೂ ದೃಷ್ಟಿಯಲ್ಲಿಟ್ಟುಕೊಂಡೇ ಈ ಯಾತ್ರೆ ನಡೆಸಲಾಗುತ್ತಿದೆ.
ಈ ಬಾರಿ ಮಹಾರಾಷ್ಟ್ರ ಮುಖ್ಯಮಂತ್ರಿ ಶಿವಸೇನೆ ಪಕ್ಷದವರೇ ಆಗೇಕು ಎಂದು ಶಿವಸೇನೆ ಒತ್ತಡ ಹೇರುತ್ತಿದ್ದು, ಆದಿತ್ಯ ಠಾಕ್ರೆ ಅವರನ್ನೇ ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂಬ ಮಾತುಗಳು ಕೇಳಿಬರುತ್ತಿವೆ.
ಬಾಳಾ ಠಾಕ್ರೆ ಮೊಮ್ಮಗ, 29 ವರ್ಷದ ಆದಿತ್ಯ ಮಹಾರಾಷ್ಟ್ರ ಸಿಎಂ ಸ್ಥಾನಕ್ಕೆ
ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಪತ್ರಕರ್ತರು, 'ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿ ಬಗ್ಗೆ ಏನು ಹೇಳುತ್ತೀರಿ? ಯಾರಾಗಬಹುದು ಮುಖ್ಯಮಂತ್ರಿ?' ಆದಿತ್ಯ ಠಾಕ್ರೆ ಅವರನ್ನು ಕೇಳಿದ್ದರು. ಅದಕ್ಕೆ ಉತ್ತರ ನೀಡಿದ್ದ ಠಾಕ್ರೆ, 'ಈ ಯಾತ್ರೆ ಮುಖ್ಯಮಂತ್ರಿ ಯಾರು ಎಂಬುದನ್ನು ನಿರ್ಧರಿಸುವುದಕ್ಕಲ್ಲ,ಜನರೊಂದಿಗೆ ಸಂಪರ್ಕ ಸಾಧಿಸುವುದಕ್ಕೆ, ಅವರಿಗೆ ಧನ್ಯವಾದ ಅರ್ಪಿಸುವುದಕ್ಕೆ. ಜನರು ಇಷ್ಟಪಟ್ಟರೆ ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ' ಎಂದು ಜಾಣತನದ ಉತ್ತರ ನೀಡಿದ್ದರು.