ಕಣದಿಂದ ಹಿಂದೆ ಸರಿದ ಬಿಜೆಪಿ: ಮುಂಬೈ ಮೇಯರ್ ಪಟ್ಟ ಮತ್ತೆ ಶಿವಸೇನಾ ಪಾಲಿಗೆ
ಮುಂಬೈ, ನವೆಂಬರ್ 19: ಬೃಹತ್ ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಮೇಲಿನ ತನ್ನ ಹಿಡಿತವನ್ನು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಮರಳಿ ಪಡೆಯಲಿದೆ. ಪಾಲಿಕೆಯಲ್ಲಿ ಅಗತ್ಯ ಸಂಖ್ಯಾಬಲವಿಲ್ಲದ ಕಾರಣ ಮೇಯರ್ ಹುದ್ದೆಯ ಪೈಪೋಟಿಯಿಂದ ಹಿಂದೆ ಸರಿದಿರುವುದು ಶಿವಸೇನಾ ಹಾದಿಯನ್ನು ಸುಗಮಗೊಳಿಸಿದೆ.
ನ. 22ರಂದು ಬಿಎಂಸಿ ಮೇಯರ್ ಮತ್ತು ಉಪ ಮೇಯರ್ ಚುನಾವಣೆ ನಡೆಯಲಿದೆ. ಆದರೆ ಶಿವಸೇನಾದ ಕಿಶೋರಿ ಪೆಡ್ನೇಕರ್ (56) ಮತ್ತು ಸುಹಾಸ್ ವಾಡ್ಕರ್ (44) ಮಾತ್ರ ನಿರ್ದಿಷ್ಟು ಹುದ್ದೆಗಳಿಗೆ ನಾಮಪತ್ರ ಸಲ್ಲಿಸಿದ್ದು, ಎದುರಾಳಿಗಳೇ ಇಲ್ಲದ ಕಾರಣ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ.
ಮಹಾರಾಷ್ಟ್ರದಲ್ಲಿ ಕೈಕೊಟ್ಟ ಎನ್ಸಿಪಿ, ಶಿವಸೇನಾ ಕಕ್ಕಾಬಿಕ್ಕಿ
ಪ್ರಸಕ್ತ ಹಣಕಾಸು ವರ್ಷದಲ್ಲಿ 30,000 ಕೋಟಿ ರೂ ಬಜೆಟ್ ಮಂಡಿಸಿರುವ ಬಿಎಂಸಿ, ಏಷ್ಯಾದ ಅತ್ಯಂತ ಶ್ರೀಮಂತ ಸ್ಥಳೀಯ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹೀಗಾಗಿ ಬಿಎಂಸಿ ಆಡಳಿತದ ಚುಕ್ಕಾಣಿ ಹಿಡಿಯಲು ಪಕ್ಷಗಳ ನಡುವೆ ತೀವ್ರ ಪೈಪೋಟಿಯಿದೆ. 227 ಸೀಟುಗಳ ಪಾಲಿಕೆಯಲ್ಲಿ ಮೇಯರ್ ಹುದ್ದೆಗೇರಲು ಬಿಜೆಪಿಯು ಕಾಂಗ್ರೆಸ್ ಬೆಂಬಲ ಪಡೆದುಕೊಳ್ಳಲು ಪ್ರಯತ್ನಿಸಿದೆ ಎಂದು ವರದಿಯಾಗಿತ್ತು. ಬಿಜೆಪಿಗೆ ಬೆಂಬಲ ನೀಡುವ ಪ್ರಸ್ತಾಪವನ್ನು ತಿರಸ್ಕರಿಸಿದ್ದಾಗಿ ಕಾಂಗ್ರೆಸ್ ನಾಯಕ ರವಿರಾಜ ತಿಳಿಸಿದ್ದಾರೆ.
23 ವರ್ಷದಿಂದ ಸೇನಾಕ್ಕೆ ಮೇಯರ್ ಸ್ಥಾನ
1996ರಿಂದಲೂ ಮುಂಬೈ ಪಾಲಿಕೆಯಲ್ಲಿ ಶಿವಸೇನಾ ಇದುವರೆಗೂ ಒಮ್ಮೆಯೂ ಮೇಯರ್ ಸ್ಥಾನವನ್ನು ಬೇರೆ ಪಕ್ಷಕ್ಕ ಬಿಟ್ಟುಕೊಟ್ಟಿಲ್ಲ. ಅದು 2017ರಲ್ಲಿ ಮಾತ್ರ ಬಿಎಂಸಿಯಲ್ಲಿ ಸಂಪೂರ್ಣ ಬಹುಮತದೊಂದಿಗೆ ಅಧಿಕಾರ ಹಿಡಿಯುವಲ್ಲಿ ವಿಫಲವಾಗಿತ್ತು. 114ರ ಮ್ಯಾಜಿಕ್ ಸಂಖ್ಯೆಯನ್ನು ತಲುಪಲು 2017ರ ಪಾಲಿಕೆ ಚುನಾವಣೆಯಲ್ಲಿ ಶಿವಸೇನಾ ವಿಫಲವಾಗಿತ್ತು. ಆದರೆ 84 ಸೀಟುಗಳನ್ನು ಪಡೆದಿದ್ದ ಸೇನಾ, 82 ಕ್ಷೇತ್ರಗಳಲ್ಲಿ ಗೆದ್ದಿದ್ದ ಬಿಜೆಪಿಯ ಬಾಹ್ಯ ಬೆಂಬಲದೊಂದಿಗೆ ಮತ್ತೆ ಮೇಯರ್ ಪಟ್ಟವನ್ನು ಗಿಟ್ಟಿಸಿಕೊಂಡಿತ್ತು.
ಪಕ್ಷಗಳ ಬಲಾಬಲದ ವಿವರ
ಕಳೆದ ಎರಡು ವರ್ಷಗಳಲ್ಲಿ ಮಹಾರಾಷ್ಟ್ರ ನವನಿರ್ಮಾಣ ಸೇನಾದ (ಎಂಎನ್ಎಸ್) ಏಳು ಸದಸ್ಯರು ಶಿವಸೇನಾ ಸೇರಿಕೊಂಡಿದ್ದರಿಂದ ಮತ್ತು ಉಪ ಚುನಾವಣೆಗಳಲ್ಲಿ ಗೆಲುವು ಸಾಧಿಸಿದ್ದರಿಂದ ಶಿವಸೇನಾದ ಬಲ 94ಕ್ಕೆ ಏರಿದೆ. ಪ್ರಸ್ತುತ ಬಿಜೆಪಿ 83 ಸದಸ್ಯರೊಂದಿಗೆ ಎರಡನೆಯ ಸ್ಥಾನದಲ್ಲಿದೆ. ಕಾಂಗ್ರೆಸ್-29, ಎನ್ಸಿಪಿ-8, ಸಮಾಜವಾದಿ ಪಕ್ಷ-6, ಎಂಎನ್ಎಸ್-1 ಮತ್ತು ಎಐಎಂಐಎಂ-2 ಸದಸ್ಯರನ್ನು ಹೊಂದಿವೆ.
ಸಾಮ್ನಾದಲ್ಲಿ ಹಳೇ ದೋಸ್ತಿ ಬಿಜೆಪಿ ವಿರುದ್ಧ ಶಿವಸೇನೆ ಗಂಭೀರ ಆರೋಪ
ಶಿವಸೇನಾಗೆ ಬೆಂಬಲ ಎಂದರ್ಥವಲ್ಲ
ಮೇಯರ್ ಮತ್ತು ಉಪ ಮೇಯರ್ ಸ್ಥಾನಕ್ಕೆ ಅಭ್ಯರ್ಥಿಗಳನ್ನು ಇಳಿಸದ ಪಕ್ಷದ ತೀರ್ಮಾನವನ್ನು ಶಿವಸೇನಾಕ್ಕೆ ನೀಡುತ್ತಿರುವ ಬೆಂಬಲ ಎಂದು ಭಾವಿಸಬಾರದು ಎಂಬುದಾಗಿ ಪಾಲಿಕೆಯ ವಿಪಕ್ಷ ನಾಯಕ ರವಿರಾಜ ತಿಳಿಸಿದ್ದಾರೆ.
'ನಮ್ಮ ಬಳಿ ಅಗತ್ಯ ಸಂಖ್ಯಾಬಲವಿಲ್ಲ. ಹೀಗಾಗಿ ನಾವು ಮೇಯರ್ ಮತ್ತು ಉಪ ಮೇಯರ್ ಎರಡೂ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಹಾಕುತ್ತಿಲ್ಲ. ಇದರ ಅರ್ಥ ನಾವು ಯಾವುದೇ ಪಕ್ಷವನ್ನು ಬೆಂಬಲಿಸುತ್ತಿದ್ದೇವೆ ಎಂದಲ್ಲ. ನಮ್ಮ ಬಳಿ ಸಂಖ್ಯೆಯ ಕೊರತೆಯಿದೆ ಎಂದಷ್ಟೇ ಅರ್ಥ' ಎಂದು ಹೇಳಿದ್ದಾರೆ.
ನರ್ಸ್ನಿಂದ ಮೇಯರ್ ಹುದ್ದೆಗೆ
ಮೇಯರ್ ಮತ್ತು ಉಪ ಮೇಯರ್ ಹುದ್ದೆಗಳಿಗೆ ನಾಮಪತ್ರ ಸಲ್ಲಿಸಲು ಶುಕ್ರವಾರ ಕೊನೆಯ ದಿನವಾಗಿತ್ತು. ಶಿವಸೇನಾದ ಇಬ್ಬರು ಅಭ್ಯರ್ಥಿಗಳನ್ನು ಹೊರತುಪಡಿಸಿ ಬೇರೆ ಯಾವ ಪಕ್ಷದವರೂ ಅಭ್ಯರ್ಥಿಗಳನ್ನು ಇಳಿಸದ ಕಾರಣ ಶಿವಸೇನಾ ಅಭ್ಯರ್ಥಿಗಳ ಅವಿರೋಧ ಆಯ್ಕೆ ನಿಶ್ಚಿತವಾಗಿದೆ. 2002, 2012 ಮತ್ತು 2017ರಲ್ಲಿ ಸ್ಪರ್ಧಿಸಿ ಪಾಲಿಕೆ ಸದಸ್ಯರಾಗಿರುವ ಕಿಶೋರಿ ಪೆಡ್ನೇಕರ್, ವೃತ್ತಿಯಿಂದ ನರ್ಸ್ ಆಗಿದ್ದಾರೆ. ಬಿಎಂಸಿಯಲ್ಲಿ 1931ರಿಂದ ಚುನಾವಣೆಗಳು ನಡೆಯುತ್ತಿದ್ದು, ಕಿಶೋರಿ ಅವರು 77ನೇ ಮೇಯರ್ ಆಗಲಿದ್ದಾರೆ.