ಬಿಜೆಪಿ ತಂತ್ರಗಳಿಗೆ ತಕ್ಕ ಫಲ; ಪಶ್ಚಿಮ ಬಂಗಾಳ ಫಲಿತಾಂಶಕ್ಕೆ ಶಿವಸೇನೆ ಪ್ರತಿಕ್ರಿಯೆ
ಮುಂಬೈ, ಮೇ 3: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಫಲಿತಾಂಶದ ಕುರಿತು ಶಿವಸೇನೆ ಪ್ರತಿಕ್ರಿಯೆ ನೀಡಿದ್ದು, ಬಂಗಾಳದ ಈ ಫಲಿತಾಂಶ, ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅಜೇಯರಲ್ಲ ಎಂಬುದನ್ನು ಸಾಬೀತುಪಡಿಸಿದೆ ಎಂದಿದೆ.
ಪಕ್ಷದ ಸಂಪಾದಕೀಯ ಸಾಮ್ನಾದಲ್ಲಿ ಪಶ್ಚಿಮ ಬಂಗಾಳ ಚುನಾವಣಾ ಫಲಿತಾಂಶದ ಕುರಿತು ಪ್ರಸ್ತಾಪಿಸಲಾಗಿದೆ.
ಚುನಾವಣಾ ಆಯೋಗ ಬಿಜೆಪಿ ಏಜೆಂಟ್ ಇರಬಹುದು; ಶಿವಸೇನೆ
ನಾಲ್ಕು ರಾಜ್ಯಗಳು (ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು ಹಾಗೂ ಕೇರಳ), ಒಂದು ಕೇಂದ್ರಾಡಳಿತ ಪ್ರದೇಶ (ಪುದುಚೇರಿ)ದಲ್ಲಿ ಚುನಾವಣೆ ನಡೆದಿದ್ದು, ಎಲ್ಲರ ಕಣ್ಣುಗಳು ಪಶ್ಚಿಮ ಬಂಗಾಳ ಚುನಾವಣಾ ಫಲಿತಾಂಶದ ಮೇಲಿದ್ದವು.
"ದೇಶದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಭಯಾನಕವಾಗಿ ಏರಿಕೆಯಾಗುತ್ತಿರುವುದರ ಕುರಿತು ತಲೆ ಕೆಡಿಸಿಕೊಳ್ಳುವುದರ ಬದಲು, ಪ್ರಧಾನಿ ನರೇಂದ್ರ ಮೋದಿಯವರು ಪಶ್ಚಿಮ ಬಂಗಾಳದಲ್ಲಿ ಸಿಎಂ ಮಮತಾ ಬ್ಯಾನರ್ಜಿ ಅವರನ್ನು ಸೋಲಿಸುವ ಕುರಿತೇ ಯೋಚಿಸುತ್ತಿದ್ದರು. ಅದಕ್ಕೆ ತಕ್ಕ ಫಲಿತಾಂಶ ಸಿಕ್ಕಿದೆ" ಎಂದು ಶಿವಸೇನೆ ದೂರಿದೆ.
ಟಿಎಂಸಿ ಸೋಲಿಸಲು ಬಿಜೆಪಿಯ ಎಲ್ಲಾ ಕಾರ್ಯತಂತ್ರಗಳ ಹೊರತಾಗಿಯೂ ಮೋದಿ ಹಾಗೂ ಅಮಿತ್ ಶಾ ಅಜೇಯರಲ್ಲ ಎಂಬುದನ್ನು ಫಲಿತಾಂಶ ಸಾಬೀತುಪಡಿಸಿದೆ ಎಂದು ಹೇಳಿದೆ.
ಎನ್ಸಿಪಿ ಹಾಗೂ ಕಾಂಗ್ರೆಸ್ ಬೆಂಬಲದಲ್ಲಿ ಮಹಾರಾಷ್ಟ್ರದಲ್ಲಿ ಆಡಳಿತದಲ್ಲಿರುವ ಶಿವಸೇನೆ, ಪಶ್ಚಿಮ ಬಂಗಾಳದಲ್ಲಿ ಸ್ಪರ್ಧಿಸಿಲ್ಲ. ಬದಲಾಗಿ ಮಮತಾ ಬ್ಯಾನರ್ಜಿಗೆ ಬೆಂಬಲ ವ್ಯಕ್ತಪಡಿಸಿತ್ತು.
ಪಶ್ಚಿಮ ಬಂಗಾಳದಲ್ಲಿ 294 ಕ್ಷೇತ್ರಗಳಿಗೆ ಎಂಟು ಹಂತಗಳಲ್ಲಿ ಚುನಾವಣೆ ನಡೆದಿದ್ದು, ಮೇ 2ರಂದು ಚುನಾವಣಾ ಫಲಿತಾಂಶ ಪ್ರಕಟಗೊಂಡಿದೆ. ತೃಣಮೂಲ ಕಾಂಗ್ರೆಸ್ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದು, 213 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. 77 ಕ್ಷೇತ್ರಗಳನ್ನು ಬಿಜೆಪಿ ಗೆದ್ದಿದೆ.