ಕನ್ನಡಿಗರ ವಿರುದ್ಧ 'ಉದ್ಧವ್' ಉದ್ಧಟತನ ಮಾತು
ಮುಂಬೈ, ಜು.28: ಬೆಳಗಾವಿಯಲ್ಲಿ ಮರಾಠಿಗರಿಗೆ ರಕ್ಷಣೆ ನೀಡುವಲ್ಲಿ ಕರ್ನಾಟಕ ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ. ಮಹಿಳೆಯರು ಮಕ್ಕಳ ಮೇಲೆ ಪೊಲೀಸರು ದೌರ್ಜನ್ಯ ಎಸಗಿದ್ದಾರೆ. ಕನ್ನಡಿಗರ ಬೂಟಿನಡಿಯಲ್ಲಿ ಮರಾಠಿಗರನ್ನು ತುಳಿಯಲಾಗುತ್ತಿದೆ ಎಂದು ಶಿವಸೇನೆಯ ಮುಖವಾಣಿ ಸಾಮ್ನಾದಲ್ಲಿ ಕನ್ನಡಿಗರ ವಿರುದ್ಧ ಉದ್ಭವ್ ಠಾಕ್ರೆ ಕಿಡಿಕಾರಿದ್ದಾರೆ.
ಮಹಾರಾಷ್ಟ್ರದಲ್ಲಿ ಅಸೆಂಬ್ಲಿ ಚುನಾವಣೆಗೆ ಮೂರು ತಿಂಗಳು ಇರುವ ಮುನ್ನವೇ ವಿವಿಧ ಪಕ್ಷಗಳು ಕರ್ನಾಟಕ-ಮಹಾರಾಷ್ಟ್ರ ಗಡಿ ಸಮಸ್ಯೆಯನ್ನು ಕೆದಕಿ ಲಾಭ ಪಡೆಯಲು ಯತ್ನಿಸುತ್ತಿವೆ. ಮರಾಠಿ ನಾಮ ಫಲಕ ತೆರವು ಘಟನೆಯ ಲಾಭ ಪಡೆಯಲು ಶಿವಸೇನೆ ಕೂಡಾ ಯತ್ನಿಸುತ್ತಿದ್ದು ಸಾಮ್ನಾದಲ್ಲಿ ಈ ಬಗ್ಗೆ ಬರೆದುಕೊಳ್ಳಲಾಗಿದೆ.
ಒಂದು ವೇಳೆ ಮುಂಬೈನಲ್ಲಿ ಇದೇ ರೀತಿ ಕನ್ನಡಿಗರ ವಿರುದ್ಧ ಪ್ರತೀಕಾರ ತೀರಿಸಿಕೊಂಡರೆ ಹೇಗೆ? ಮಹಿಳೆಯರ ಮೇಲೆ ಹಲ್ಲೆ ನಡೆದರೂ ಯಾರೂ ಬಾಯ್ಬಿಟ್ಟಿಲ್ಲ ಏಕೆ? ಮಹಾರಾಷ್ಟ್ರ ಮುಖ್ಯಮಂತ್ರಿ ಪೃಥ್ವಿರಾಜ್ ಸಿಂಗ್ ಚೌಹಾಣ್ ಈ ಸಂಬಂಧ ಕರ್ನಾಟಕ ಸಿಎಂ ಸಿದ್ದರಾಮಯ್ಯ ಜೊತೆ ಮಾತನಾಡುವುದಾಗಿ ಹೇಳಿದ್ದಾರೆ. ಅದಷ್ಟು ಬೇಗ ಪರಿಹಾರ ಕಂಡುಕೊಳ್ಳದಿದ್ದರೆ ಶಿವಸೇನೆ ಅಖಾಡಕ್ಕೆ ಇಳಿಯಬೇಕಾಗುತ್ತದೆ ಎಂದು ಉದ್ಧವ್ ಠಾಕ್ರೆ ಎಚ್ಚರಿಸಿದ್ದಾರೆ.[ಗಡಿಭಾಗದಲ್ಲಿ ಗಡಿಬಿಡಿ, ಬೆಳಗಾವಿಯಲ್ಲಿ ಏನಾಗುತ್ತಿದೆ?]
ಮಹಾರಾಷ್ಟ್ರ ಹಾಗೂ ಕರ್ನಾಟಕದ ಮುಖ್ಯಮಂತ್ರಿಗಳು ತಕ್ಷಣವೇ ಮರಾಠಿಗರ ರಕ್ಷಣೆಗೆ ಮುಂದಾಗಬೇಕಿದೆ. ಇಲ್ಲದಿದ್ದರೆ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸುವುದು ಅನಿವಾರ್ಯ. ಪ್ರಾದೇಶಿಕ ಸಮಾನತೆ ಕಾಯ್ದುಕೊಳ್ಳಬೇಕಿದೆ ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ. ಈ ನಡುವೆ ಮರಾಠಿ ನಾಮಫಲಕ ತೆರವು ನಂತರ ಎಂಇಎಸ್ ಕಾರ್ಯಕರ್ತರು ಸೋಮವಾರ ಕೂಡಾ ಬೆಳಗಾವಿಯ ಎಳ್ಳೂರಿನಲ್ಲಿ ಘರ್ಷಣೆ ಮುಂದುವರೆಸಿದ್ದಾರೆ.