ಚಿಕನ್ ಮತ್ತು ಮೊಟ್ಟೆ ಕೂಡ ಸಸ್ಯಾಹಾರ ಎಂದು ಪರಿಗಣಿಸಿ: ಶಿವಸೇನಾ ಸಂಸದ
ಮುಂಬೈ, ಜುಲೈ 18: ಕೋಳಿ ಮಾಂಸ ಮತ್ತು ಮೊಟ್ಟೆಯನ್ನು ಕೂಡ ಸಸ್ಯಾಹಾರ ಎಂದು ಪರಿಗಣಿಸಬೇಕು ಎಂದು ರಾಜ್ಯಸಭಾ ಸಂಸದ, ಶಿವಸೇನಾ ಮುಖಂಡ ಸಂಜಯ್ ರಾವತ್ ಒತ್ತಾಯಿಸಿದ್ದಾರೆ.
ಸೋಮವಾರ ರಾಜ್ಯಸಭೆಯಲ್ಲಿ ಆಯುರ್ವೇದದ ಕುರಿತು ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಅವರು ಈ ವಿಚಿತ್ರ ಬೇಡಿಕೆ ಮುಂದಿಟ್ಟಿದ್ದಾರೆ.
ಭಾರತದಲ್ಲಿ ಎಲ್ಲರೂ ಶಾಕಾಹಾರಿಗಳಾಗಬೇಕೇ? : ಸುಪ್ರೀಂ ಪ್ರಶ್ನೆ
ಚಿಕನ್ ಸಸ್ಯಾಹಾರವೋ ಅಥವಾ ಮಾಂಸಾಹಾರವೋ ಎಂಬುದನ್ನು ನಿರ್ಧರಿಸಲು ಆಯುಷ್ ಸಚಿವಾಲಯವು ಗಮನ ಹರಿಸಬೇಕು ಎನ್ನುವ ಮೂಲಕ ಅವರು ಸದನವನ್ನು ಅಚ್ಚರಿಗೆ ನೂಕಿದರು.
'ನಾನು ಒಮ್ಮೆ ನಂದುರ್ಬಾರ್ ಪ್ರದೇಶದ ಸಣ್ಣ ಹಳ್ಳಿಯೊಂದಕ್ಕೆ ಹೋಗಿದ್ದೆ. ಅಲ್ಲಿನ ಆದಿವಾಸಿ ಸಮುದಾಯದವರು ನಮಗೆ ಆಹಾರ ನೀಡಿದರು. ಇದೇನು ಎಂದು ಅವರನ್ನು ಕೇಳಿದೆ. ಇದು ಆಯುರ್ವೇದಿಕ್ ಚಿಕನ್. ಇದನ್ನು ತಿಂದರೆ ನಿಮ್ಮ ಎಲ್ಲ ಕಾಯಿಲೆಗಳೂ ದೂರವಾಗುತ್ತದೆ. ಆ ಕೋಳಿಯನ್ನು ಹಾಗೆ ಬೆಳೆಸಿದ್ದೇವೆ ಎಂದರು ಎಂದು ರಾವತ್ ಹೇಳಿದ್ದಾರೆ.
'ಆಯುರ್ವೇದಿಕ್ ಆಹಾರವನ್ನು ನೀಡಿದರೆ ಕೋಳಿಯೂ ಆಯುರ್ವೇದಿಕ್ ಮೊಟ್ಟೆ ಇಡುತ್ತದೆ ಎಂದು ಚೌಧರಿ ಚರಣ್ ಸಿಂಗ್ ವಿಶ್ವವಿದ್ಯಾಲಯದ ಸಂಶೋಧಕರು ನನಗೆ ತಿಳಿಸಿದ್ದರು' ಎಂದೂ ಅವರು ಹೇಳಿಕೆ ನೀಡಿದ್ದಾರೆ.
ನಾನ್ ವೆಜ್ ಪ್ರಿಯ ಸಿದ್ದರಾಮಯ್ಯ ಈಗ ಪಕ್ಕಾ ಸಸ್ಯಹಾರಿ!
ಆಯರ್ವೇದಿಕ್ ಆಹಾರವನ್ನು ಮಾತ್ರ ನೀಡಿದರೆ ಕೋಳಿ ಆಯುರ್ವೇದಿಕ್ ಮೊಟ್ಟೆಯನ್ನೇ ನೀಡುತ್ತದೆ. ಹೀಗಾಗಿ ಸಸ್ಯಾಹಾರಿಗಳು ಪ್ರೋಟೀನ್ ಪಡೆದುಕೊಳ್ಳಲು ಈ ರೀತಿಯ ಆಯುರ್ವೇದಿಕ್ ಕೋಳಿಗಳನ್ನು ಆಹಾರವಾಗಿ ಸೇವಿಸಬಹುದು ಎಂದು ಹೇಳಿದ್ದಾರೆ.
ಸಂಜಯ್ ರಾವತ್ ಅವರ ಹೇಳಿಕೆ ವಿಪರೀತ ಟ್ರೋಲ್ಗೆ ಒಳಗಾಗಿದೆ. ನೆಟ್ಟಿಗರು ಅವರ ಹೇಳಿಕೆಯನ್ನು ಆಧರಿಸಿ ತಮಾಷೆಯ ಮೀಮ್ಗಳನ್ನು ಮಾಡುತ್ತಿದ್ದಾರೆ.
ಚಿಕನ್ ಮತ್ತು ಮೊಟ್ಟೆ ಮಾತ್ರ ಏಕೆ? ಮಟನ್ ಹಾಗೂ ಬೀಫ್ ಅನ್ನೂ ಈ ಪಟ್ಟಿಯಲ್ಲಿ ಸೇರಿಸಬೇಕು. ಈ ಪ್ರಾಣಿಗಳು ಸಸ್ಯವನ್ನೇ ಆಹಾರವಾಗಿ ಸೇವಿಸುವುದರಿಂದ ಅವು ಕೂಡ ಆಯುರ್ವೇದಿಕ್ ಪ್ರಾಣಿಗಳಾಗಿರುತ್ತವೆ ಎಂದು ಕಾಲೆಳೆದಿದ್ದಾರೆ.
ಆರೋಗ್ಯ ಇಲಾಖೆಯ ಟ್ವೀಟ್ ಅವಾಂತರಕ್ಕೆ ತಪರಾಕಿ
ಈ ರೀತಿಯ ಮನೋಭಾವದ ಜನರು ನಮ್ಮ ದೇಶವನ್ನು ಆಳುತ್ತಿದ್ದಾರೆ, ಕ್ಷಮಿಸಿ ಹಾಳು ಮಾಡುತ್ತಿದ್ದಾರೆ. ನಮ್ಮ ದೇಶವನ್ನು ದೇವರೇ ರಕ್ಷಿಸಬೇಕು ಎಂದು ಟ್ವೀಟ್ ಮಾಡಿದ್ದಾರೆ.
ಹಾಗಾದರೆ, ಇನ್ನು ಮುಂದೆ ವೆಜ್ ಬಿರಿಯಾನಿಯಲ್ಲಿ ಲೆಗ್ ಪೀಸ್ಗಳೂ ಸಿಗುತ್ತವೆಯೇ? ಎಂದು ಒಬ್ಬರು ಪ್ರಶ್ನಿಸಿದ್ದಾರೆ.