"ಅರ್ನಬ್ ವಿರುದ್ಧ ದೂರು ನೀಡಿದ್ದರೆ ನಿಮ್ಮದು ನಿಜವಾದ ಪೌರುಷವಾಗುತ್ತಿತ್ತು"
ಮುಂಬೈ, ಜನವರಿ 23: ಹಿಂದೂ ಭಾವನೆಗಳಿಗೆ ಧಕ್ಕೆ ತಂದ ಆರೋಪದಲ್ಲಿ "ತಾಂಡವ" ವೆಬ್ ಸಿರೀಸ್ ತಂಡದ ಮೇಲೆ ಪ್ರಕರಣ ದಾಖಲಿಸಿ ಬಿಜೆಪಿ ನಾಯಕರು ಒಳ್ಳೆ ಕೆಲಸ ಮಾಡಿದ್ದಾರೆ. ಆದರೆ ಹುತಾತ್ಮ ಭಾರತೀಯ ಸೈನಿಕರನ್ನು ಅವಮಾನಿಸಿರುವ ರಿಪಬ್ಲಿಕ್ ಟಿ.ವಿ ಮಾಲೀಕ ಅರ್ನಬ್ ಗೋಸ್ವಾಮಿ ವಿರುದ್ಧವೂ ಪ್ರಕರಣ ದಾಖಲಿಸಿದ್ದರೆ, ನೀವು ನಿಜವಾದ ಪುರುಷರು ಎನಿಸಿಕೊಳ್ಳುತ್ತಿದ್ದಿರಿ ಎಂದು ಶಿವಸೇನೆ ಟೀಕಿಸಿದೆ.
ಈಚೆಗೆ ರಿಪಬ್ಲಿಕ್ ಟಿ.ವಿ. ಮಾಲೀಕ ಅರ್ನಬ್ ಗೋಸ್ವಾಮಿ ಹಾಗೂ ಬಾರ್ಕ್ ಮಾಜಿ ಸಿಇಒ ಪಾರ್ಥೋ ದಾಸ್ ಗುಪ್ತಾ ನಡುವಿನ ವಾಟ್ಸಪ್ ಸಂದೇಶ ಸೋರಿಕೆಯಾಗಿದ್ದು, ಅದರಲ್ಲಿ ಪುಲ್ವಾಮಾ ದಾಳಿಯ ಉಲ್ಲೇಖವನ್ನೂ ಮಾಡಲಾಗಿತ್ತು. ವೈಮಾನಿಕ ದಾಳಿ ಮಾದರಿಯ ದೊಡ್ಡ ದಾಳಿ ನಡೆಯಬಹುದು ಎಂಬ ಬಗ್ಗೆ ಅರ್ನಬ್ ಉಲ್ಲೇಖಿಸಿದ್ದಾಗಿ ತಿಳಿದುಬಂದಿತ್ತು. ಪುಲ್ವಾಮಾ ದಾಳಿಯಲ್ಲಿನ ಯೋಧರ ಬಲಿ ಹಿಂದೆ ರಾಜಕೀಯ ಹುನ್ನಾರವಿತ್ತು. ಚುನಾವಣಾ ಹಿನ್ನೆಲೆಯಲ್ಲಿ ಪ್ರಚಾರಕ್ಕೆ ಈ ತಂತ್ರ ಮಾಡಲಾಗಿತ್ತು ಎಂಬರ್ಥದ ಸಂದೇಶ ಕಳುಹಿಸಲಾಗಿತ್ತು.
ಮಸೀದಿಗಳಲ್ಲಿ ಧ್ವನಿವರ್ಧಕ ಬಳಕೆ ನಿಷೇಧಕ್ಕೆ ಶಿವಸೇನಾ ಆಗ್ರಹ
ಈ ಬಗ್ಗೆ ಪ್ರಶ್ನೆ ಎತ್ತಿರುವ ಶಿವಸೇನೆ, ಅರ್ನಬ್ ಗೋಸ್ವಾಮಿ ಮೇಲೆ ಯಾವುದೇ ಕ್ರಮ ಕೈಗೊಳ್ಳದ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದೆ. "ಹಲವು ಬಿಜೆಪಿ ನಾಯಕರು ಹಿಂದೂ ದೇವರನ್ನು ಅಪಹಾಸ್ಯ ಮಾಡಲಾಗಿದೆ ಎಂದು ಉತ್ತರ ಪ್ರದೇಶ ಹಾಗೂ ಬಿಹಾರದಲ್ಲಿ ತಾಂಡವ ವೆಬ್ ಸಿರೀಸ್ ವಿರುದ್ಧ ದೂರು ದಾಖಲಿಸಿರುವುದು ಒಳ್ಳೆಯ ವಿಚಾರ. ಆದರೆ ಗೋಸ್ವಾಮಿ ವಿರುದ್ಧವೂ ದೂರು ದಾಖಲಿಸಿದ್ದರೆ ನಿಮ್ಮನ್ನು ನಿಜವಾದ ಪುರುಷರು ಎನ್ನಬಹುದಿತ್ತು" ಎಂದಿದೆ.
ಮಾಧ್ಯಮದ ಕುರಿತೂ ಪ್ರಸ್ತಾಪಿಸಿ, "100 ಗ್ರಾಂ ಗಾಂಜಾ ಸಿಕ್ಕರೆ ದೊಡ್ಡ ಸುದ್ದಿ ಮಾಡುವ ಮಾಧ್ಯಮ, ಅರ್ನಬ್ ಗೋಸ್ವಾಮಿ ಮಾಡಿರುವ ಈ ರಾಷ್ಟ್ರದ್ರೋಹದ ಕೆಲಸವನ್ನು ಯಾಕೆ ಎತ್ತಿ ತೋರಿಸುತ್ತಿಲ್ಲ. ಗೋಸ್ವಾಮಿ ದೇಶದ್ರೋಹದ ಕುರಿತೂ ಚರ್ಚೆ ನಡೆದರೆ ಪುಲ್ವಾಮಾ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಸೈನಿಕರ ಆತ್ಮಗಳಿಗೂ ಶಾಂತಿ ಸಿಗುತ್ತದೆ" ಎಂದು ಮಾಧ್ಯಮಗಳ ವಿರುದ್ಧವೂ ಹರಿಹಾಯ್ದಿರುವುದಾಗಿ ತಿಳಿದುಬಂದಿದೆ.