ಮೋದಿ ಸೋಲಿಸಲು ಶಿವಸೇನೆಯ ಹೊಸ ಆಯುಧ- ಹಿಂದುತ್ವ, ಅಯೋಧ್ಯೆ!
ಮುಂಬೈ, ಜುಲೈ 26: ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ವಾರಾಣಾಸಿ ಮತ್ತು ಅಯೋಧ್ಯಗೆ ಭೇಟಿ ನೀಡುತ್ತಿದ್ದಾರೆ ಎಂಬ ಸುದ್ದಿ ಬಿಜೆಪಿ ವಲಯದಲ್ಲಿ ಕೊಂಚ ತಲ್ಲಣ ಎಬ್ಬಿಸಿದೆ. 'ಹಿಂದುತ್ವ'ದ ದಾಳವನ್ನು ಸಮರ್ಥವಾಗಿ ಬಳಸಿಕೊಳ್ಳುವ ಮೂಲಕ 2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸುವ ಯತ್ನದ ಮಹತ್ವದ ಭಾಗ ಈ ಭೇಟಿ ಎಂದು ವಿಶ್ಲೇಷಿಸಲಾಗುತ್ತಿದೆ.
2014 ರಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬಂದಾಗಿನಿಂದಲೂ, ಮೈತ್ರಿಪಕ್ಷವಾಗಿದ್ದ ಶಿವಸೇನೆ ಮೋದಿ ವಿರುದ್ಧ ಕತ್ತಿಮಸೆಯುತ್ತಲೇ ಇದೆ.
ಬಿಜೆಪಿ, ನರೇಂದ್ರ ಮೋದಿ ವಿರುದ್ಧ ಮುನಿಸಿಕೊಂಡ ಶಿವಸೇನೆ?
ಎನ್ ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬಂದ ಮೇಲೆ ಶಿವ ಸೇನೆಯ ಸಂಸದರಿಗೆ ಉನ್ನತ ಹುದ್ದೆಗಳು ಸಿಗಬಹುದು ಎಂಬ ನಿರೀಕ್ಷೆಗೆ ಮೋದಿ ಸೊಪ್ಪು ಹಾಕಿಲ್ಲ ಎಂಬುದು ಸಹ ಹೀಗೆ ಕತ್ತಿಮಸೆಯುವುದಕ್ಕಿರುವ ಮುಖ್ಯ ಕಾರಣ.
ವಾರಣಾಸಿಯ ಮೇಲೆ ಕಣ್ಣೇಕೆ?
ಹೇಳಿ ಕೇಳಿ ವಾರಣಾಸಿ ಪ್ರಧಾನಿ ಮೋದಿಯವರ ಕ್ಷೇತ್ರ. ಉತ್ತರ ಪ್ರದೇಶದ ವಾರಣಾಸಿಯಲ್ಲಿ ಪ್ರಧಾನಿ ಮೋದಿಯವರನ್ನು ಸೋಲಿಸುವುದಕ್ಕೆ ಏನೆಲ್ಲ ಪ್ರಯತ್ನ ಮಾಡಬೇಕೋ ಅವೆಲ್ಲವನ್ನೂ ಮಾಡಲು ಶಿವಸೇನೆ ಸಿದ್ಧವಾಗಿದೆ. ಈ ಭಾಗದ ಹಿಂದು ಮತಗಳನ್ನು ಸೆಳೆಯುವುದಕ್ಕೆ ಬಿಜೆಪಿ ಹೊರತುಪಡಿಸಿದ ಸಾಮರ್ಥ್ಯವಿರುವುದು ಶಿವಸೇನೆಗೆ ಮಾತ್ರ. 'ಒಂದು ದೇಶ, ಒಂದು ಚುನಾವಣೆ' ಎಂಬ ಮಂತ್ರವನ್ನು ಮೋದಿ ಪಠಿಸಿರುವುದರಿಂದ ಲೋಕಸಭಾ ಚುನಾವಣೆ ಅವಧಿಗೂ ಮುನ್ನವೇ ಆಗಬಹುದೆಂದು ಅಂದಾಜಿಸಿ, ಶಿವಸೇನೆ ಈಗಿನಿಂದಲೇ ತಯಾರಿ ಆರಂಭಿಸಿದೆ.
ಅಯೋಧ್ಯಯಲ್ಲಿ ರಾಮಮಂದಿರ
2014 ರ ಚುನಾವಣೆಗೂ ಮುನ್ನ, 'ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವುದು ನಮ್ಮ ಮೊದಲ ಆದ್ಯತೆ ಎಂದು ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರು ಹೇಳಿದ್ದರು. ಆದರೆ ಸರ್ಕಾರ ರಚನೆಯಾಗಿ ನಾಲ್ಕು ವರ್ಷವಾದರೂ ರಾಮ ಮಂದಿರ ನಿರ್ಮಾಣದ ಬಗ್ಗೆ ಮೋದಿ ಸರ್ಕಾರ ಚಿಂತಿಸಿದಂತಿಲ್ಲ ಎಂದು ಶಿವಸೇನೆ ದೂರಿದೆ. ಈ ಮೂಲಕ ಹಿಂದುಗಳ ಧಾರ್ಮಿಕ ಭಾವನೆಗೆ ಮೋದಿ ಸರ್ಕಾರ ಹತಾಶೆಯನ್ನುಂಟು ಮಾಡಿದೆ ಎಂಬ ಅಭಿಪ್ರಾಯವನ್ನು ಸೃಷ್ಟಿಸುವುದು ಶಿವಸೇನೆಯ ಉದ್ದೇಶವಾದಂತಿದೆ.
ಬಿಜೆಪಿಯ ಸೋಲಿಸುವ ಏಕೈಕ ಉದ್ದೇಶದಿಂದ ಎಲ್ಲ ರಾಜಿಗೂ ಸಿದ್ಧವಾಯ್ತೇ ಕಾಂಗ್ರೆಸ್?
ವಿಶ್ವಾಸ ಮಂಡನೆಗೆ ನಾಪತ್ತೆಯಾದ ಶಿವಸೇನೆ!
ಇತ್ತೀಚೆಗಷ್ಟೇ ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ನೇತೃತ್ವದ ವಿರೋಧಪಕ್ಷಗಳು ಅವಿಶ್ವಾಸ ಮಂಡನೆ ಮಾಡುವ ಸಂದರ್ಭದಲ್ಲಿ ಶಿವ ಸೇನೆ ಲೋಕಸಭೆಗೇ ಬಾರದೆ ಜಾಣ ನಡೆ ಇಟ್ಟಿತ್ತು. ಇದಕ್ಕೂ ಮುನ್ನ ಉದ್ಧವ್ ಠಾಕ್ರೆ ಅವರನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಭೇಟಿ ಮಾಡಿದ್ದಾಗ, ಬಿಜೆಪಿಗೆ ಬೆಂಬಲ ನೀಡುವುದಾಗಿ ಒಪ್ಪಿಕೊಂಡಿದ್ದ ಶಿವಸೇನೆ, ಕೊನೆಯ ಕ್ಷಣದಲ್ಲಿ ಕೈಕೊಟ್ಟಿದ್ದು ಕುತೂಹಲ ಕೆರಳಿಸಿತ್ತು! 18 ಸಂಸದರನ್ನು ಹೊಂದಿರುವ ಶಿವಸೇನೆ ಈ ಮೂಲಕ ಬಿಜೆಪಿ ವಿರುದ್ಧ ಸಮರ ಸಾರುವ ಲಕ್ಷಣಗಳು ಅಂದೇ ಗೋಚರಿಸಿದ್ದವು.
ಕತ್ತಿ ಮಸೆಯುವುದಕ್ಕಿರುವ ವಿಷಯಗಳು
ಕೇಂದ್ರದ ವಿರುದ್ಧ ಕತ್ತಿ ಮಸೆಯಲು ಶಿವಸೇನೆಗೆ ಸಾಕಷ್ಟು ವಿಷಯಗಳಿವೆ. ಮಹಾರಾಷ್ಟ್ರದಲ್ಲಿ ಎದ್ದಿರುವ ಮರಾಠಾ ಪ್ರತಿಭಟನೆ, ಅವಿಶ್ವಾಸ ನಿರ್ಣಯ, ಮಹಿಳಾ ಭದ್ರತೆ, ಗೋಹತ್ಯೆ ಆರೋಪದಲ್ಲಿ ಹತ್ಯೆ ಸೇರಿದಂತೆ ಹಲವು ವಿಷಯಗಳನ್ನಿಟ್ಟುಕೊಂಡು ಕೇಂದ್ರ ಸರ್ಕಾರದ ವಿರುದ್ಧ ಪ್ರಚಾರ ನಡೆಸಲು ಶಿವಸೇನೆ ಮುಂದಾಗಿದೆ. ಶಿವಸೇನೆ ಮತ್ತು ಬಿಜೆಪಿ ಎರಡು ಪಕ್ಷಗಳೂ ಹಿಂದುತ್ವದ ಅಜೆಂಡಾವನ್ನೇ ಇಟ್ಟುಕೊಂಡಿದ್ದರೂ, ಹೀಗೆ ಪರಸ್ಪರ ಮುನಿಸಿಕೊಂಡಿರುವುದು ಹಿಂದುತ್ವದ ಬೆಂಬಲಿಗರಿಗೂ ಗೊಂದಲವನ್ನುಂಟು ಮಾಡಿದೆ.