ಮಹಾರಾಷ್ಟ್ರದಲ್ಲಿ ಮತ್ತೊಂದು ಬೆಳವಣಿಗೆ: ರಾಜ್ಯಪಾಲರಿಗೆ ಸಂಕಟ
ಮುಂಬೈ, ನವೆಂಬರ್ 25: ಮಹಾರಾಷ್ಟ್ರದಲ್ಲಿ ಬೆಳ್ಳಂಬೆಳಿಗ್ಗೆಯೇ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಲು ಅನುವು ಮಾಡಿಕೊಟ್ಟ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಇಕ್ಕಟ್ಟಿಗೆ ಸಿಲುಕಿದ್ದಾರೆ. ಬಿಜೆಪಿ-ಎನ್ಸಿಪಿ ಸರ್ಕಾರದ ಅಳಿವು ಉಳಿವಿನ ಪ್ರಶ್ನೆ ಮೊದಲು ಸುಪ್ರೀಂಕೋರ್ಟ್ನಲ್ಲಿ ತೀರ್ಮಾನವಾಗಬೇಕಿದ್ದರೆ, ಉಳಿದ ಭಾಗವನ್ನು ನಿರ್ಧರಿಸುವುದು ವಿಶ್ವಾಸಮತ ಯಾಚನೆ. ಸುಪ್ರೀಂಕೋರ್ಟ್ ಮಂಗಳವಾರ ನೀಡುವ ತೀರ್ಪಿನ ಆಧಾರದಲ್ಲಿ ವಿಶ್ವಾಸಮತ ಯಾಚನೆ ನಡೆಯಲಿದೆ. ಆದರೆ ಅದಕ್ಕೂ ಮೊದಲೇ ಕೋಶ್ಯಾರಿ ಅವರ ಮುಂದೆ ಹೊಸ ಸವಾಲು ಎದುರಾಗಿದೆ.
ಬಿಜೆಪಿ-ಎನ್ಸಿಪಿ ಸರ್ಕಾರ ರಚನೆಯ ವಿವಾದ ಸುಪ್ರೀಂಕೋರ್ಟ್ನಲ್ಲಿ ಇರುವ ನಡುವೆಯೇ ಶಿವಸೇನಾ-ಎನ್ಸಿಪಿ-ಕಾಂಗ್ರೆಸ್ ಜತೆಗೂಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿವೆ. ಸೋಮವಾರ ರಾಜ್ಯಪಾಲ ಕೋಶ್ಯಾರಿ ಅವರನ್ನು ಭೇಟಿ ಮಾಡಿದ ಮೂರೂ ಪಕ್ಷಗಳ ನಾಯಕರು 162 ಶಾಸಕರ ಬೆಂಬಲದ ಸಹಿಯುಳ್ಳ ಪತ್ರವನ್ನು ನೀಡಿದ್ದಾರೆ. ಜತೆಗೆ ಬಹುಮತಕ್ಕಿಂತದ ಅಗತ್ಯಕ್ಕಿಂತಲೂ ಅಧಿಕ ಸಂಖ್ಯೆಯ ಶಾಸಕರ ಬಲವಿದ್ದು, ಸರ್ಕಾರ ರಚನೆಗೆ ಅವಕಾಶ ನೀಡಬೇಕು ಎಂದು ಪ್ರತಿಪಾದಿಸಿದ್ದಾರೆ.
ಮಹಾರಾಷ್ಟ್ರ ವಿವಾದ: ಸಂಸತ್ ಮುಂದೆ ಸೋನಿಯಾ ಗಾಂಧಿ ಪ್ರತಿಭಟನೆ
288 ಸದಸ್ಯರ ವಿಧಾನಸಭೆಯಲ್ಲಿ ಶಿವಸೇನಾ-ಎನ್ಸಿಪಿ-ಕಾಂಗ್ರೆಸ್ ಜತೆಗೂಡಿ ಸರ್ಕಾರ ರಚನೆಗೆ ಮುಂದಾಗಿವೆ. ಇದರಿಂದ ಬಿಜೆಪಿ ಹಾಗೂ ಅಜಿತ್ ಪವಾರ್ ಬಂಡಾಯದ ಬೆಂಬಲದೊಂದಿಗೆ ರಚನೆಯಾದ ಸರ್ಕಾರ ಪತನಗೊಳ್ಳುವ ಸಾಧ್ಯತೆ ಹೆಚ್ಚಿದೆ. ಮೂರು ಪಕ್ಷಗಳು ತಮಗೆ ಸರ್ಕಾರ ರಚನೆಗೆ ಅವಕಾಶ ನೀಡಬೇಕೆಂಬ ಹಕ್ಕು ಮಂಡಿಸಿರುವುದು, ಬಿಜೆಪಿಗೆ ನೆರವಾದ ಆರೋಪ ಎದುರಿಸುತ್ತಿರುವ ರಾಜ್ಯಪಾಲರಿಗೆ ಸಂಕಟ ಎದುರಾಗಿದೆ.
ಎನ್ಸಿಪಿಯ ಮೂವರು ಶಾಸಕರಿಲ್ಲ
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಎನ್ಸಿಪಿ 54 ಕ್ಷೇತ್ರಗಳಲ್ಲಿ ಜಯಗಳಿಸಿತ್ತು. ಆದರೆ ಅಜಿತ್ ಪವಾರ್ ಸೇರಿದಂತೆ ಕೆಲವು ಶಾಸಕರು ಬಿಜೆಪಿಗೆ ಬೆಂಬಲ ನೀಡಿ ಸರ್ಕಾರ ರಚಿಸಲು ಮುಂದಾಗಿದ್ದರು. ಅವರಲ್ಲಿ ಹೆಚ್ಚಿನ ಶಾಸಕರು ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ಬಳಿ ಮರಳಿದ್ದಾರೆ. ಎನ್ಸಿಪಿ ನೀಡಿರುವ ತ್ರಿಪಕ್ಷೀಯ ಸಮ್ಮಿಶ್ರ ಸರ್ಕಾರದ ಬೆಂಬಲಿಗ ಶಾಸಕರ ಪಟ್ಟಿಯಲ್ಲಿ 51 ಶಾಸಕರ ಸಹಿ ಇದೆ. ಅಂದರೆ ಮೂವರು ಶಾಸಕರು ಅದಕ್ಕೆ ಸಹಿ ಹಾಕಿಲ್ಲ.
ಪಕ್ಷೇತರರ ಬೆಂಬಲವೂ ಇದೆ
ಶಿವಸೇನಾ ತನ್ನ 56 ಶಾಸಕರ ಸಹಿಯ ಜತೆಗೆ ಏಳು ಪಕ್ಷೇತರ ಶಾಸಕರೊಂದಿಗೆ ಒಟ್ಟು 63 ಶಾಸಕರ ಬೆಂಬಲದ ಸಹಿಯನ್ನು ಒದಗಿಸಿದೆ. ಇನ್ನು ಕಾಂಗ್ರೆಸ್ ತನ್ನ ಎಲ್ಲ 44 ಶಾಸಕರ ಬೆಂಬಲ ಪ್ರಕಟಿಸಿದೆ. ಈ ಮೂರು ಪಕ್ಷಗಳ ಜತೆಗೆ ಸಮಾಜವಾದಿ ಪಕ್ಷ ಕೂಡ ಕೈಜೋಡಿಸಿದ್ದು, ಅದರ ಇಬ್ಬರು ಶಾಸಕರು ಮೈತ್ರಿ ಸರ್ಕಾರಕ್ಕೆ ಬೆಂಬಲ ಘೋಷಿಸಿದ್ದಾರೆ.
ಬೂಟಾಟಿಕೆಗೆ ಹೊಸ ಅರ್ಥ ಸಿಕ್ಕಿದೆ: ಸಿ.ಟಿ. ರವಿ ವ್ಯಂಗ್ಯ
ಸರ್ಕಾರ ರಚನೆಗೆ ಹಕ್ಕು ಮಂಡನೆ
ಮುಂಬೈನಲ್ಲಿರುವ ರಾಜಭವನಕ್ಕೆ ತೆರಳಿದ ಮೂರು ಪಕ್ಷಗಳ ನಾಯಕರು ತಮಗೆ ಹೆಚ್ಚಿನ ಸದಸ್ಯರ ಬೆಂಬಲ ಇದ್ದು, ಸರ್ಕಾರ ರಚನೆಗೆ ಅವಕಾಶ ನೀಡಬೇಕು ಎಂದು ಕೋರಿದ್ದಾರೆ. ಸುಪ್ರೀಂಕೋರ್ಟ್ನಲ್ಲಿ ಬಿಜೆಪಿ-ಎನ್ಸಿಪಿ ಸರ್ಕಾರ ರಚನೆಯ ವಿರುದ್ಧದ ಅರ್ಜಿ ವಿಚಾರಣೆ ನಡೆಯುವ ವೇಳೆಯೇ ಈ ಸಮ್ಮಿಶ್ರ ಸರ್ಕಾರ ರಚನೆಯ ಪ್ರಯತ್ನ ನಡೆದಿದೆ.
ಶಾಸಕರ ಸಹಿ ದುರ್ಬಳಕೆ ಮಾಡಿಕೊಂಡ ಅಜಿತ್
ಎನ್ಸಿಪಿಯ 54 ಸೇರಿದಂತೆ ತಮಗೆ ಒಟ್ಟು 170 ಶಾಸಕರ ಬೆಂಬಲ ಇದೆ ಎಂದು ಬಿಜೆಪಿ ಸುಪ್ರೀಂಕೋರ್ಟ್ನಲ್ಲಿ ಹೇಳಿಕೊಂಡಿದೆ. ಇನ್ನೊಂದೆಡೆ ಸೇನಾ-ಕಾಂಗ್ರೆಸ್-ಎನ್ಸಿಪಿ ತಮಗೆ ಒಟ್ಟು 154 ಸದಸ್ಯರ ಬೆಂಬಲ ಇದೆ ಎಂದು ಕೋರ್ಟ್ಗೆ ಅಫಿಡವಿಟ್ ಸಲ್ಲಿಸಿವೆ. ಕೆಲವು ಶಾಸಕರ ಸಹಿ ಸಿಕ್ಕಿಲ್ಲ. ಆದರೆ ಅವರ ಬೆಂಬಲವೂ ತಮಗೆ ಇದೆ ಎಂದು ಎನ್ಸಿಪಿ ಪ್ರತಿಪಾದಿಸಿದೆ. ಶಿವಸೇನಾ ನೇತೃತ್ವದ ಮೈತ್ರಿ ಸರ್ಕಾರಕ್ಕೆ ಬೆಂಬಲ ನೀಡಲು ಪಡೆದಿದ್ದ ಶಾಸಕರ ಸಹಿಯನ್ನು ದುರ್ಬಳಕೆ ಮಾಡಿಕೊಂಡು ಅಜಿತ್ ಪವಾರ್ ರಾಜ್ಯಪಾಲರಿಗೆ ನೀಡಿದ್ದಾರೆ. 53 ಶಾಸಕರು ಪಕ್ಷದೊಂದಿಗೆ ಇದ್ದಾರೆ ಎಂದು ಶರದ್ ಪವಾರ್ ಹೇಳಿದ್ದಾರೆ.
ಅಧಿಕಾರದ ಆಸೆಗೆ ಬಿದ್ದು ಏಕಾಂಗಿಯಾದರೇ ಅಜಿತ್ ಪವಾರ್?
ವಿಶ್ವಾಸಮತ ಯಾಚನೆ ತಡವಾದಷ್ಟೂ ಕಷ್ಟ
ರಾಜ್ಯಪಾಲರಿಗೆ ಸೋಮವಾರ ಬೆಳಿಗ್ಗೆ ಮೂರು ಪಕ್ಷಗಳ ನಾಯಕರು ಸಲ್ಲಿಸಿದ ಪತ್ರದಲ್ಲಿ ಎನ್ಸಿಪಿಯ ಅಜಿತ್ ಪವಾರ್, ಅಣ್ಣಾ ಬನ್ಸೋದ್ ಮತ್ತು ನರಹರಿ ಜಿರ್ವಾಲ್ ಅವರ ಸಹಿ ಇಲ್ಲ. ಮಹಾರಾಷ್ಟ್ರದಲ್ಲಿ ಆದಷ್ಟು ಶೀಘ್ರವೇ ವಿಶ್ವಾಸಮತ ಯಾಚನೆ ನಡೆಸುವಂತೆ ಸುಪ್ರೀಕೋರ್ಟ್ ಸೂಚನೆ ನೀಡಲಿದೆ ಎಂದು ಶಿವಸೇನಾ, ಎನ್ಸಿಪಿ ಮತ್ತು ಕಾಂಗ್ರೆಸ್ ನಿರೀಕ್ಷಿಸಿವೆ. ಬಿಜೆಪಿ-ಎನ್ಸಿಪಿ ವಿಶ್ವಾಸಮತ ಯಾಚನೆ ನಡೆಯುವ ಮುನ್ನ ತಮ್ಮ ಶಾಸಕರನ್ನು ಸೆಳೆದುಕೊಳ್ಳುವ ಭಯ ಇರುವುದರಿಂದ ಮೂರು ಪಕ್ಷಗಳು ತಮ್ಮ ಶಾಸಕರನ್ನು ಮುಂಬೈನ ಬೇರೆ ಬೇರೆ ಹೋಟೆಲ್ಗಳಲ್ಲಿ ಇರಿಸಿವೆ. ಕಾಂಗ್ರೆಸ್ನ ಹೆಚ್ಚಿನ ಶಾಸಕರು ಜೈಪುರದಲ್ಲಿದ್ದಾರೆ.