ಚುನಾವಣೆ ಪ್ರಚಾರ ವೇಳೆ ಶಿವಸೇನಾ ಸಂಸದಗೆ ಅಪರಿಚಿತನಿಂದ ಚಾಕು ಇರಿತ
ಮುಂಬೈ, ಅಕ್ಟೋಬರ್ 16: ಮಹಾರಾಷ್ಟ್ರದ ಒಸ್ಮಾನಾಬಾದ್ ನಲ್ಲಿ ವಿಧಾನಸಭಾ ಚುನಾವಣೆ ಪ್ರಚಾರದಲ್ಲಿ ತೊಡಗಿಕೊಂಡಿದ್ದ ಶಿವಸೇನಾ ಸಂಸದ ಓಂರಾಜೆ ನಿಂಬಾಳ್ಕರ್ ಗೆ ಬುಧವಾರ ಅಪರಿಚಿತ ವ್ಯಕ್ತಿ ಚಾಕುವಿನಿಂದ ಇರಿದಿದ್ದಾನೆ. ಕಲಂಬ್ ತಾಲೂಕಿನ ಪಡೋಲಿ ನಯ್ಗಾಂವ್ ನಲ್ಲಿ ನಿಂಬಾಳ್ಕರ್ ಚುನಾವಣೆ ಪ್ರಚಾರದಲ್ಲಿ ತೊಡಗಿದ್ದ ವೇಳೆ ಈ ಘಟನೆ ನಡೆದಿದೆ.
ಮಹಾರಾಷ್ಟ್ರ ಚುನಾವಣೆಯಲ್ಲಿ ಕುಟುಂಬ ರಾಜಕೀಯದ ಬೇರುಗಳು
ನಿಂಬಾಳ್ಕರ್ ಅವರು ಒಸ್ಮಾನಾಬಾದ್ ಲೋಕಸಭೆ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ. ಅವರ ಕೈ ಕುಲುಕುವ ನೆಪದಲ್ಲಿ ವ್ಯಕ್ತಿಯೊಬ್ಬ ಚಾಕುವಿನಿಂದ ತಿವಿದು, ಸ್ಥಳದಿಂದ ಪರಾರಿಯಾಗಿದ್ದಾನೆ. ಸಂಸದರ ಕೈಗೆ ಗಾಯವಾಗಿದೆ. ಆದರೆ ಯಾವುದೇ ದೊಡ್ಡ ಗಾಯಗಳಿಲ್ಲದೆ ಪಾರಾಗಿದ್ದಾರೆ.
ಸಂಸದ ಓಂರಾಜೆ ನಿಂಬಾಳ್ಕರ್ ಅವರ ತಂದೆ ಪವನ್ ರಾಜೆ ನಿಂಬಾಳ್ಕರ್ ಕಾಂಗ್ರೆಸ್ ನಾಯಕರಾಗಿದ್ದವರು. ಮುಂಬೈ- ಪುಣೆ ಎಕ್ಸ್ ಪ್ರೆಸ್ ವೇನ ಕಲಂಬೋಲಿ ಬಳಿ ಕಾರಿನಲ್ಲಿ ಹದಿಮೂರು ವರ್ಷದ ಹಿಂದೆ ಅವರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿತ್ತು. ಮಾಜಿ ಸಂಸದ ಪದಮ್ ಸಿಂಗ್ ಪಾಟೀಲ್ ಆ ಪ್ರಕರಣದ ಪ್ರಮುಖ ಆರೋಪಿ ಆಗಿದ್ದರು.