Breaking: ವಿಚಾರಣೆ ನಂತರ ಸಂಸದ ಸಂಜಯ್ ರಾವತ್ ಬಂಧನ
ಮುಂಬೈ, ಜುಲೈ 31: ಮುಂಬೈನಲ್ಲಿರುವ ಶಿವಸೇನಾ ಸಂಸದ ಸಂಜಯ್ ರಾವತ್ ಅವರ ಮನೆಯಲ್ಲಿ ಶೋಧ ಮತ್ತು ವಿಚಾರಣೆ ನಡೆಸಿದ ನಂತರ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಭಾನುವಾರ ಅವರನ್ನು ವಶಕ್ಕೆ ಪಡೆದಿದ್ದಾರೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಶಿವಸೇನೆ ನಾಯಕ ಎರಡು ಬಾರಿ ವಿಚಾರಣೆಗೆ ಕರೆದಿದ್ದ ಸಮನ್ಸ್ ತಪ್ಪಿಸಿದ್ದರು.
ಬೆಳಿಗ್ಗೆ 7 ಗಂಟೆಗೆ, ತನಿಖಾ ಸಂಸ್ಥೆ ತಂಡವು ಸಿಐಎಸ್ಎಫ್ ಅಧಿಕಾರಿಗಳೊಂದಿಗೆ ಮುಂಬೈನ ಪೂರ್ವ ಉಪನಗರದಲ್ಲಿರುವ ಸಂಸದ ಸಂಜಯ್ ರಾವುತ್ ಅವರ ಮನೆಗೆ ಬಂದು ಶೋಧಕಾರ್ಯ ಪ್ರಾರಂಭಿಸಿತು.
#WATCH | Mumbai: Shiv Sena leader Sanjay Raut being taken by ED officials along with them after he was detained in connection with Patra Chawl land scam case from his residence pic.twitter.com/VtjjuQJhxM
— ANI (@ANI) July 31, 2022
ಜಾರಿ ನಿರ್ದೇಶನಾಲಯ ಮುಂಬೈನಲ್ಲಿ ಪತ್ರಾ ಚಾಲ್ ಭೂ ಹಗರಣ ಪ್ರಕರಣದ ಸಂಬಂಧ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾವತ್ರನ್ನು ಇಡಿ ಈಗಾಗಲೇ ವಿಚಾರಣೆ ನಡೆಸುತ್ತಿದೆ.
ಆದರೆ, ಸಂಜಯ್ ರಾವುತ್ ಅವರು ತಾವು ಯಾವುದೇ ತಪ್ಪು ಮಾಡಿಲ್ಲ ಎಂದಿದ್ದು, ರಾಜಕೀಯ ದ್ವೇಷದ ಕಾರಣ ತಮ್ಮನ್ನು ಗುರಿಯಾಗಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ದಾಳಿ ಕುರಿತು ಟ್ವೀಟ್ ಮಾಡಿರುವ ಸಂಸದ, "ಸುಳ್ಳು ಕ್ರಮ..ಸುಳ್ಳು ಸಾಕ್ಷ್ಯ... ನಾನು ಶಿವಸೇನೆ ಬಿಡುವುದಿಲ್ಲ.. ನಾನು ಸತ್ತರೂ.. ನಾನು ಶರಣಾಗುವುದಿಲ್ಲ..ಜೈ ಮಹಾರಾಷ್ಟ್ರ" ಎಂದು ಹೇಳಿದ್ದರು. "ನನಗೂ ಯಾವುದೇ ಹಗರಣಕ್ಕೂ ಸಂಬಂಧವಿಲ್ಲ. ಶಿವಸೇನೆ ಮುಖ್ಯಸ್ಥ ಬಾಳಾಸಾಹೇಬ್ ಠಾಕ್ರೆ ಅವರ ಮೇಲೆ ಪ್ರಮಾಣ ಮಾಡಿ ಇದನ್ನು ಹೇಳುತ್ತಿದ್ದೇನೆ. ಬಾಳಾಸಾಹೇಬರು ನಮಗೆ ಹೋರಾಡಲು ಕಲಿಸಿದರು. ನಾನು ಶಿವಸೇನೆಗಾಗಿ ಹೋರಾಟವನ್ನು ಮುಂದುವರಿಸುತ್ತೇನೆ" ಎಂದು ಇಂದು ಬೆಳಿಗ್ಗೆ ಮರಾಠಿಯಲ್ಲಿ ಟ್ವೀಟ್ ಮಾಡಿದ್ದರು.
ಈ ಹಿಂದೆ ಜುಲೈ 20 ರಂದು ತನಿಖಾ ಸಂಸ್ಥೆಯಿಂದ ಸಂಜಯ್ ರಾವತ್ಗೆ ಸಮನ್ಸ್ ನೀಡಲಾಗಿತ್ತು, ಅವರು ವಿಚಾರಣೆಗೆ ಹಾಜರಾಗಿರಲಿಲ್ಲ. ಸಂಸತ್ತಿನ ಅಧಿವೇಶನ ನಡೆಯುತ್ತಿರುವ ಕಾರಣ ಆಗಸ್ಟ್ 7 ರ ನಂತರ ಮಾತ್ರ ವಿಚಾರಣೆಗೆ ಹಾಜರಾಗಬಹುದು ಎಂದು ತಮ್ಮ ವಕೀಲರ ಮೂಲಕ ತಿಳಿಸಿದ್ದರು. ಜುಲೈ 1 ರಂದು ಒಮ್ಮೆ ತಮ್ಮ ಹೇಳಿಕೆಯನ್ನು ದಾಖಲಿಸಿದ್ದರು.
ಸಮನ್ಸ್ಗೆ ಉತ್ತರಿಸದಕ್ಕಾಗಿ ರಾವತ್ಗೆ ಬಿಜೆಪಿ ತಿರುಗೇಟು ನೀಡಿದೆ. 'ಅವರು ಅಮಾಯಕರಾಗಿದ್ದರೆ ಜಾರಿ ನಿರ್ದೇಶನಾಲಯಕ್ಕೆ ಏಕೆ ಹೆದರುತ್ತಾರೆ..? ಪತ್ರಿಕಾಗೋಷ್ಠಿ ನಡೆಸಲು ಅವರಿಗೆ ಸಮಯವಿದೆ. ಆದರೆ ವಿಚಾರಣೆಗೆ ತನಿಖಾ ಸಂಸ್ಥೆ ಕಚೇರಿಗೆ ಭೇಟಿ ನೀಡಲು ಸಮಯವಿಲ್ಲ' ಎಂದು ಬಿಜೆಪಿ ಶಾಸಕ ರಾಮ್ ಕದಂ ಟೀಕಿಸಿದ್ದಾರೆ.
ಸಂಜಯ್ ರಾವುತ್ ಅವರ ನಿವಾಸದ ಹೊರಗೆ ಭಾರಿ ಸಂಖ್ಯೆಯಲ್ಲಿ ಸೇರಿದ್ದ ಶಿವಸೇನಾ ಕಾರ್ಯಕರ್ತರು ಇಡಿ ಮತ್ತು ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ.