ಮಹಾರಾಷ್ಟ್ರ: ಶಿವಸೇನಾ ಸಂಸದ ಸಂಜಯ್ ಜಾಧವ್ ರಾಜೀನಾಮೆ
ಮುಂಬೈ, ಆ. 27: ಮಹಾರಾಷ್ಟ್ರದ ಶಿವಸೇನಾ ವರಿಷ್ಠ, ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕೈಗೆ ಪಕ್ಷದ ಸಂಸದ ಸಂಜಯ್ ಹರಿಭಾವ್ ಜಾಧವ್ ಅವರು ಕಳಿಸಿರುವ ರಾಜೀನಾಮೆ ಪತ್ರ ತಲುಪಿದೆ.
Recommended Video
ಶಿವಸೇನಾ ಸಂಸದ ಸಂಜಯ್ ಜಾಧವ್ ಅವರು ಬುಧವಾರದಂದು ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪಕ್ಷದಲ್ಲಿ ಸೂಕ್ತ ಸ್ಥಾನಮಾನ, ಕ್ಷೇತ್ರಕ್ಕೆ ಪ್ರಾತಿನಿಧ್ಯ ಸಿಗುತ್ತಿಲ್ಲ ಎಂದು ದೂರಿದ್ದಾರೆ. ಶಿವಸೇನೆಯನ್ನು ಎನ್ ಸಿಪಿ ಆವರಿಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.
ಪರ್ಭಾನಿ ಲೋಕಸಭಾ ಕ್ಷೇತ್ರದಲ್ಲಿ 16 ಹಾಗೂ 17ನೇ ಲೋಕಸಭೆಗೆ ಆಯ್ಕೆಯಾದ ಸಂಜಯ್ ಅವರು ಬಂಧು ಜಾಧವ್ ಎಂದೇ ಜನಪ್ರಿಯರಾಗಿದ್ದಾರೆ. ಇದಲ್ಲದೆ 2009-2014ರ ಅವಧಿಯಲ್ಲಿ ಮಹಾರಾಷ್ಟ್ರ ವಿಧಾನಸಭೆಗೂ ಶಿವಸೇನೆಯಿಂದ ಆಯ್ಕೆಯಾಗಿದ್ದರು.
ಪರ್ಭಾನಿ ಕ್ಷೇತ್ರದ ಜಿಂತೂರ್ ಎಪಿಎಂಸಿ ಆಡಳಿತಾಧಿಕಾರಿಗಳ ನೇಮಕಾತಿಯಲ್ಲಿ ಎನ್ ಸಿಪಿ ನಾಯಕರ ಹಸ್ತಕ್ಷೇಪದ ಬಗ್ಗೆ ಸಂಜಯ್ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ, ಶಿವಸೇನೆಯ ನಿಷ್ಠರನ್ನು ಬದಿಗೊತ್ತಿ, ಎನ್ಸಿಪಿ ಬೆಂಬಲಿತ ವ್ಯಕ್ತಿಯನ್ನು ನೇಮಿಸಿರುವುದಕ್ಕೆ ಸಂಜಯ್ ಬೇಸರ ವ್ಯಕ್ತಪಡಿಸಿ, ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ ಎಂಬ ಸುದ್ದಿಯಿದೆ.