ಶಿವಸೇನೆ ಶಾಸಕ ಪ್ರತಾಪ್ ಸರ್ನಾಯಕ್ ಆಪ್ತನನ್ನು ಬಂಧಿಸಿದ ಇಡಿ
ಮುಂಬೈ,ನವೆಂಬರ್ 26: ಶಿವಸೇನೆ ಶಾಸಕ ಪ್ರತಾಪ್ ಸರ್ನಾಯಕ್ ಅವರ ಆಪ್ತ ಅಮಿತ್ ಚಾಂಡೋಲೆ ಅವರನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ.
ಸರ್ನಾಯಕ್ ಅವರ ವ್ಯವಹಾರದಲ್ಲಿ ಅಮಿತ್ ಪಾತ್ರ ಇರುವ ಕುರಿತು ವಿಚಾರಣೆ ನಡೆದಿದೆ. ಸರ್ನಾಯಕ್ ಅವರಿಗೆ ಸೇರಿದ ವಿವಿಧ ಆಸ್ತಿಗಳ ಮೇಲೆ ಇಡಿ ಅಧಿಕಾರಿಗಳು ನವೆಂಬರ್ 24 ರಂದು ದಾಳಿ ನಡೆಸಿದ್ದರು.
ಕಂಗನಾ ವಿರುದ್ಧ ಕಿಡಿಕಾರಿದ್ದ ಶಾಸಕನ ಮನೆ ಮೇಲೆ ಇ.ಡಿ ದಾಳಿ
ಅವರನ್ನು ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ವಿಚಾರಣೆಗಾಗಿ ತಮ್ಮ ವಶಕ್ಕೆ ಒಪ್ಪಿಸುವಂತೆ ಕೋರುವ ಸಾಧ್ಯತೆ ಇದೆ ಎನ್ನಲಾಗಿದೆ. ಪ್ರತಾಪ್ ಕ್ವಾರಂಟೈನ್ನಲ್ಲಿರುವ ಕಾರಣ ಸಮನ್ಸ್ಗೆ ಉತ್ತರಿಸಿಲ್ಲ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.
'ಜಾರಿ ನಿರ್ದೇಶಾನಲಯವು ಭದ್ರತಾ ಪೂರೈಕೆದಾರ ಟಾಪ್ಸ್ ಗ್ರೂಪ್ ಪ್ರವರ್ತಕರಿಗೆ ಮತ್ತು ಕೆಲವು ರಾಜಕಾರಣಿಗಳು ಸೇರಿದಂತೆ ಅದಕ್ಕೆ ಸಂಬಂಧಿಸಿದ ಸದಸ್ಯರಿಗೆ ಸೇರಿದ ಜಾಗಗಳಲ್ಲಿ ತಪಾಸಣೆ ನಡೆಸಿದೆ. ಮುಂಬೈ ಮತ್ತು ಥಾಣೆಗಳಲ್ಲಿ ಹತ್ತು ಸ್ಥಳಗಳಲ್ಲಿ ಪರಿಶೀಲನೆ ನಡೆದಿದೆ' ಎಂದು ಸುದ್ದಿಸಂಸ್ಥೆ ಎಎನ್ಐ ವರದಿ ಮಾಡಿದೆ.
ಥಾಣೆಯ ಒವಾಲ-ಮಜಿವಾಡ ಕ್ಷೇತ್ರದ ಶಿವಸೇನಾ ಶಾಸಕರಾಗಿರುವ ಪ್ರತಾಪ್ ಸರ್ನಾಯಕ್, ಮುಂಬೈ ಅನ್ನು ಪಾಕಿಸ್ತಾನ ಆಕ್ರಮಿಕ ಕಾಶ್ಮೀರಕ್ಕೆ ಹೋಲಿಸಿದ್ದ ನಟಿ ಕಂಗನಾ ರಣಾವತ್ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸುವಂತೆ ಆಗ್ರಹಿಸುವ ಮೂಲಕ ಇತ್ತೀಚೆಗೆ ಸುದ್ದಿಯಾಗಿದ್ದರು.