ಮನಿ ಲಾಂಡರಿಂಗ್ ಕೇಸ್: ಇ.ಡಿ. ವಿಚಾರಣೆಗೆ ಹಾಜರಾಗಲಿರುವ ಶಿವಸೇನೆ ನಾಯಕ ಸಂಜಯ್ ರಾವತ್
ಮುಂಬೈ, ಜುಲೈ 01: ಶಿವಸೇನೆ ನಾಯಕ ಸಂಜಯ್ ರಾವತ್ ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಶುಕ್ರವಾರ ಜಾರಿ ನಿರ್ದೇಶನಾಲಯ (ಇ.ಡಿ) ಕಚೇರಿಗೆ ಹಾಜರಾಗಲಿದ್ದಾರೆ. ತನಿಖೆಗೆ ಹಾಜರಾಗಲು ಕಾಲವಕಾಶ ಕೋರಿದ್ದ ರಾವತ್ ಮನವಿಯನ್ನು ಜಾರಿ ನಿರ್ದೇಶನಾಲಯ ತಿರಸ್ಕರಿಸಿತ್ತು.
ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ತನಿಖಾ ಸಂಸ್ಥೆಯ ಮುಂದೆ ಹಾಜರಾಗಲಿರುವ ಸಂಜಯ್ ರಾವತ್ ಇ.ಡಿ. ಕಚೇರಿ ಬಳಿ ಜಮಾಯಿಸದಂತೆ ಶಿವಸೇನೆ ಕಾರ್ಯಕರ್ತರು, ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.
Breaking News: ಭೂ ಹಗರಣ: ಸಂಸದ ಸಂಜಯ್ ರಾವತ್ಗೆ ಇಡಿ ಸಮನ್ಸ್
"ನಾನು ಮಧ್ಯಾಹ್ನ 12 ಗಂಟೆಗೆ ಇ.ಡಿ. ಕಚೇರಿಗೆ ವಿಚಾರಣೆಗೆ ಹಾಜರಾಗುತ್ತೇನೆ. ನನಗೆ ನೀಡಿರುವ ಸಮನ್ಸ್ಗಳನ್ನು ನಾನು ಗೌರವಿಸುತ್ತೇನೆ ಮತ್ತು ತನಿಖಾ ಸಂಸ್ಥೆಗಳೊಂದಿಗೆ ಸಹಕರಿಸುವುದು ನನ್ನ ಕರ್ತವ್ಯ. ಇ.ಡಿ. ಕಚೇರಿಯಲ್ಲಿ ಸಭೆ ಸೇರದಂತೆ ನಾನು ಶಿವಸೇನೆ ಕಾರ್ಯಕರ್ತರಿಗೆ ಮನವಿ ಮಾಡುತ್ತೇನೆ. ಚಿಂತಿಸಬೇಡಿ!" ಎಂದು ಸಂಜಯ್ ರಾವುತ್ ಟ್ವೀಟ್ ಮಾಡಿದ್ದಾರೆ.
ಮಹಾರಾಷ್ಟ್ರ ರಾಜಕೀಯ ಬಿಕಟ್ಟಿನ ಪರಿಣಾಮ ಸೋಮವಾರ ಮೊದಲ ಸಮನ್ಸ್ಗೆ ವಿಚಾರಣೆಗೆ ಗೈರು ಹಾಜರಾಗಿದ್ದರು. ನಂತರ ಜುಲೈ 1ರ ಮೊದಲು ವಿಚಾರಣೆಗೆ ಹಾಜರಾಗಲು ಜಾರಿ ನಿರ್ದೇಶನಾಲಯ ರಾವತ್ಗೆ ಎರಡನೇ ಸಮನ್ಸ್ ಕಳುಹಿಸಿತ್ತು.
ಮುಂಬೈನ ಪತ್ರಾ ಚಾವಲ್ನ ಮರು ಅಭಿವೃದ್ಧಿಗೆ ಸಂಬಂಧಿಸಿದಂತೆ ಸಂಜಯ್ ರಾವತ್ರನ್ನು ತನಿಖೆ ನಡೆಸಲಾಗುತ್ತಿದೆ. ತನಿಖಾ ಸಂಸ್ಥೆಯ ಮುಂದೆ ದಾಖಲೆಗಳನ್ನು ಹಾಜರುಪಡಿಸಲು ಅವರ ವಕೀಲರು 13-14 ದಿನಗಳ ಕಾಲಾವಕಾಶ ಕೋರಿದ್ದರು, ಆದರೆ ಮನವಿಯನ್ನು ಜಾರಿ ನಿರ್ದೇಶನಾಲಯ ನಿರಾಕರಿಸಿದೆ.
ಪುಣೆ: ED ವಶಕ್ಕೆ ABIL ಸಂಸ್ಥೆ ಚೇರ್ಮನ್ ಅವಿನಾಶ್ ಭೋಸ್ಲೆ
ಬುಧವಾರ ಸಂಜೆ ಮುಖ್ಯಮಂತ್ರಿ ಸ್ಥಾನಕ್ಕೆ ಉದ್ಧವ್ ಠಾಕ್ರೆ ರಾಜೀನಾಮೆ ನೀಡಿರುವುದಕ್ಕೆ ಪ್ರತಿಕ್ರಿಯಿಸಿದ ಸಂಜಯ್ ರಾವತ್, ಶಿವಸೇನೆ ಮತ್ತೊಮ್ಮೆ ಪರಿಶ್ರಮದಿಂದ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.
ಶಿವಸೇನೆ ಹುಟ್ಟಿದ್ದು ಅಧಿಕಾರಕ್ಕಾಗಿ ಅಲ್ಲ, ಶಿವಸೇನೆಗಾಗಿ ಅಧಿಕಾರ ಹುಟ್ಟಿದೆ, ಇದು ಬಾಳಾಸಾಹೇಬ್ ಠಾಕ್ರೆಯವರ ಮಂತ್ರ ಎಂದಿನಿಂದಲೂ ಇದೆ, ಮತ್ತೊಮ್ಮೆ ಸ್ವಂತ ಬಲದಿಂದ ದುಡಿದು ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳಿದ್ದರು.
31 ತಿಂಗಳ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರದ ಪತನಕ್ಕೆ ಕಾರಣವಾದ ಶಿವಸೇನೆ ವಿರುದ್ಧ ಬಂಡಾಯವೆದ್ದ ಏಕನಾಥ್ ಶಿಂಧೆ ಗುರುವಾರ ಸಂಜೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
1034 ಕೋಟಿ ರು. ಹಗರಣ
1034 ಕೋಟಿ ರೂ. ಮೌಲ್ಯದ ಪತ್ರ ಚಾವಲ್ ಭೂಹಗರಣದಲ್ಲಿ ಸಂಜಯ್ ರಾವತ್ ಹೆಸರು ಕೇಳಿಬಂದಿತ್ತು. ಪತ್ರಾ ಚಾವಲ್ ಭೂ ಹಗರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ, ಪ್ರವೀಣ್ ರಾವತ್ 55 ಕೋಟಿ ರು. ಮೊತ್ತದ ಹಣವನ್ನು ತಮ್ಮ ಪತ್ನಿಯ ಖಾತೆಯಿಂದ ಸಂಜಯ್ ರಾವತ್ ಅವರ ಪತ್ನಿ ವರ್ಷಾ ಖಾತೆಗೆ ವರ್ಗಾವಣೆ ಮಾಡಿದ್ದನ್ನು ಪತ್ತೆ ಹಚ್ಚಿತ್ತು.
ಈ ಹಣ ವರ್ಗಾವಣೆ ಮೂಲಕ ಅಲಿಬಾಗ್ನಲ್ಲಿ ಭೂಮಿ ಖರೀದಿ ಮಾಡಲಾಗಿದೆ. 2010 ಮತ್ತು 2012ರ ನಡುವೆ ಭಾರಿ ಪ್ರಮಾಣದಲ್ಲಿ ನಗದು ಪಾವತಿಗಳನ್ನು ನಡೆಸಲಾಗಿದೆ ಎಂದು ಇಡಿ ಹೇಳಿದೆ. ಸಂಜಯ್ ರಾವತ್ ಪತ್ನಿಗೆ ಪ್ರವೀಣ್ ರಾವತ್ ಪತ್ನಿ 55 ಲಕ್ಷ ರೂ ಸಾಲ ಕೂಡ ನೀಡಿದ್ದಾರೆ ಎಂದು ಆರೋಪಿಸಿದೆ.
ಇದೀಗ ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿನ ನಡುವೆಯೇ ಅವರಿಗೆ ಮತ್ತೆ ವಿಚಾರಣೆಗೆ ನೋಟಿಸ್ ಬಂದಿತ್ತು. ಮೊದಲನೇ ನೋಟಿಸ್ಗೆ ಗೈರಾಗಿದ್ದ ಸಂಜಯ್ ರಾವತ್ ಇದೀಗ ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದಾರೆ.
Recommended Video