'ಶಿವಸೇನಾಗೆ 170ಕ್ಕಿಂತ ಹೆಚ್ಚು ಶಾಸಕರ ಬೆಂಬಲವಿದೆ, ಸರ್ಕಾರ ರಚಿಸ್ತೀವಿ'
ಮುಂಬೈ, ನವೆಂಬರ್ 3: ಶಿವಸೇನಾಗೆ 170 ಶಾಸಕರ ಬೆಂಬಲವಿದೆ. ನಮ್ಮ ಪಕ್ಷಕ್ಕೆ ಮಹಾರಾಷ್ಟ್ರದಲ್ಲಿ ಮುಂದಿನ ಸರ್ಕಾರ ರಚಿಸುವ ಸಾಮರ್ಥ್ಯ ಇದೆ ಎಂದು ಶಿವಸೇನಾದ ನಾಯಕ ಸಂಜಯ್ ರಾವತ್ ಭಾನುವಾರ ಹೇಳಿದ್ದಾರೆ. "170ಕ್ಕಿಂತ ಹೆಚ್ಚು ಶಾಸಕರು ನಮ್ಮ ಬೆಂಬಲಕ್ಕೆ ಇದ್ದಾರೆ. ಈ ಸಂಖ್ಯೆಯೂ 175 ಕೂಡ ತಲುಪಬಹುದು" ಎಂದು ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದ್ದಾರೆ.
"ಬಿಕ್ಕಟ್ಟು ಹಾಗೇ ಮುಂದುವರಿದಿದೆ. ಸರ್ಕಾರ ರಚನೆ ಬಗ್ಗೆ ಈ ವರೆಗೆ ಯಾವುದೇ ಮಾತುಕತೆ ನಡೆದಿಲ್ಲ. ಒಂದು ವೇಳೆ ಮಾತುಕತೆ ನಡೆದರೆ ಅದು ಮುಖ್ಯಮಂತ್ರಿ ಹುದ್ದೆ ಬಗ್ಗೆ ಮಾತ್ರ. ನಮ್ಮ ಕಡೆಯಿಂದ ಯಾವುದೇ ಸಮನ್ವಯದ ಕೊರತೆ ಇಲ್ಲ" ಎಂದು ಅವರು ತಿಳಿಸಿದ್ದಾರೆ.
"ಯಡಿಯೂರಪ್ಪ' ಸೂತ್ರ' ಸರ್ಕಾರ ಮಹಾರಾಷ್ಟ್ರದಲ್ಲಿ ಸಾಧ್ಯವಿಲ್ಲ"
ಶಿವಸೇನಾ ಮಾರ್ಕೆಟ್ ನಲ್ಲಿ ಕೂತಿಲ್ಲ. ಮಾತುಕತೆ ಏನಿದ್ದರೂ ಮುಖ್ಯಮಂತ್ರಿ ಹುದ್ದೆ ಬಗ್ಗೆ ಮಾತ್ರ. ಒಂದು ವೇಳೆ ಪರಸ್ಪರ ಒಪ್ಪಿಗೆಯಿಂದ ಏನೂ ನಿರ್ಧಾರ ಆಗದಿದ್ದಲ್ಲಿ ನಮ್ಮ ಸಾಮರ್ಥ್ಯವನ್ನು ತೋರಿಸುತ್ತೇವೆ ಮತ್ತು ನಮ್ಮ ಪಕ್ಷದವರನ್ನು ಮುಖ್ಯಮಂತ್ರಿ ಮಾಡುತ್ತೇವೆ. ಮಹಾರಾಷ್ಟ್ರದ ಜನರು ಶಿವಸೇನಾದಿಂದ ಮುಖ್ಯಮಂತ್ರಿ ಆಗಬೇಕು ಹಾಗೂ ಸುಳ್ಳುಗಾರರು ಮನೆಯಲ್ಲಿ ಕೂರಬೇಕು ಎಂಬುದನ್ನು ಬಯಸಿದ್ದಾರೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಹುದ್ದೆಯನ್ನು ಒಂದು ಅವಧಿಗೆ ಶಿವಸೇನಾಅ ಜತೆಗೆ ಹಂಚಿಕೊಳ್ಳಲು ಬಿಜೆಪಿ ಸಿದ್ಧವಿಲ್ಲ ಎಂಬ ಸಂದೇಶವನ್ನು ಬಿಜೆಪಿ ರವಾನಿಸಿದ ಮೇಲೆ ಈ ಹೇಳಿಕೆಯು ಬಂದಿದೆ. ಈ ಮಧ್ಯೆ, ಎನ್ ಸಿಪಿ- ಕಾಂಗ್ರೆಸ್ ಬೆಂಬಲ ಪಡೆದು ಶಿವಸೇನಾ ಸರ್ಕಾರ ರಚನೆ ಮಾಡಲಿದೆ ಎಂಬ ವದಂತಿ ದಟ್ಟವಾಗಿದೆ.
ನವೆಂಬರ್ ಎಂಟನೇ ತಾರೀಕಿಗೆ ಮಹಾರಾಷ್ಟ್ರ ಸರ್ಕಾರದ ಈಗಿನ ಅವಧಿ ಮುಕ್ತಾಯವಾಗುತ್ತದೆ. "ನವೆಂಬರ್ ಏಳನೇ ತಾರೀಕಿಗೂ ಮುಂಚೆ ಸರ್ಕಾರ ರಚನೆ ಆಗದಿದ್ದರೆ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರಬಹುದು" ಎಂದು ರಾಜ್ಯ ಖಾತೆ ಸಚಿವ ಸುಧೀರ್ ಮುಂಗಂಟಿವಾರ್ ಹೇಳಿದ್ದಾರೆ.
288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಿಜೆಪಿ 105 ಹಾಗೂ ಶಿವಸೇನಾ 56 ಸ್ಥಾನಗಳಲ್ಲಿ ಜಯ ಗಳಿಸಿದೆ.