ಮರಾಠಿಗರಿಗೆ ಬೆದರಿಕೆ ಇದೆ, ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶ ಮಾಡಿ; ಶಿವಸೇನಾ ಮತ್ತೆ ಕಿರಿಕ್
ಮುಂಬೈ, ಮಾರ್ಚ್ 16: ಬೆಳಗಾವಿಯಲ್ಲಿ ನೆಲೆಸಿರುವ ಮರಾಠಿ ಭಾಷಿಗರ ಮೇಲೆ ಕನ್ನಡ ಪರ ಸಂಘಟನೆಗಳ ದಬ್ಬಾಳಿಕೆ, ದೌರ್ಜನ್ಯ ಮುಂದುವರೆದಿದೆ. ಹೀಗಾಗಿ ಬೆಳಗಾವಿ ಜಿಲ್ಲೆಯನ್ನು ಕೇಂದ್ರ ಸರ್ಕಾರ ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಲೇಬೇಕೆಂದು ಶಿವಸೇನೆ ಮಂಗಳವಾರ ಮತ್ತೆ ಆಗ್ರಹ ಮುಂದಿಟ್ಟಿದೆ.
ಶಿವಸೇನಾ ಪಕ್ಷದ ಸಂಪಾದಕೀಯ "ಸಾಮ್ನಾ"ದಲ್ಲಿ ಈ ಬಗ್ಗೆ ಉಲ್ಲೇಖಿಸಿದ್ದು, ಕನ್ನಡ ಪರ ಸಂಘಟನೆಗಳು ಮರಾಠಿಗರ ಮೇಲೆ ದೌರ್ಜನ್ಯ ಎಸಗುತ್ತಿವೆ ಎಂದು ಆರೋಪ ಮಾಡಲಾಗಿದೆ. ಬೆಳಗಾವಿಯಲ್ಲಿ ನೆಲೆಸಿರುವ ಮರಾಠಿ ಭಾಷಿಗರ ಮೇಲೆ ಹಲ್ಲೆ, ದಬ್ಬಾಳಿಕೆ ಮುಂದುವರೆದಿದೆ. ಮರಾಠಿ ಭಾಷೆಯ ಬೋರ್ಡ್ಗಳನ್ನು ತೆಗೆದು ಹಾಕುವ, ಮರಾಠಿ ಪರ ಸಾಮಾಜಿಕ ಜಾಲತಾಣ ಬಳಕೆದಾರರನ್ನು ಗುರಿಯಾಗಿಟ್ಟುಕೊಂಡು ಹಲ್ಲೆ ನಡೆಸಿರುವ ಪ್ರಕರಣಗಳು ಮುಂದುವರೆದಿವೆ. ಕರ್ನಾಟಕ ಪೊಲೀಸರು ಕೂಡ ಮರಾಠಿ ಜನರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ದೂರಲಾಗಿದೆ. ಮುಂದೆ ಓದಿ...
ಪರಿಸ್ಥಿತಿ ಕೈ ಮೀರಿದರೆ ನಮ್ಮನ್ನು ದೂಷಿಸಬೇಡಿ; ಶಿವಸೇನೆ ಮುಖಂಡ ರಾವತ್ ಎಚ್ಚರಿಕೆ
ಬೆಳಗಾವಿ ವಿವಾದ ಮತ್ತೆ ಮುನ್ನೆಲೆಗೆ
ಮರಾಠಿ ಭಾಷಿಗರ ಮೇಲಿನ ಈ ದೌರ್ಜನ್ಯ ಕೊನೆಯಾಗದೇ ಇದ್ದರೆ, ಕೇಂದ್ರವು ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಲೇಬೇಕು ಎಂದು ಶಿವಸೇನೆ ಮತ್ತೆ ಒತ್ತಾಯಿಸಿದೆ. ಈ ಮುಂಚಿನಿಂದಲೂ ಬೆಳಗಾವಿ, ಕಾರವಾರ, ನಿಪ್ಪಾಣಿಯ ಕೆಲ ಭಾಗಗಳಲ್ಲಿ ಮರಾಠಿ ಭಾಷಿಗರಿದ್ದಾರೆ. ಕರ್ನಾಟಕದಲ್ಲಿನ ಮರಾಠಿ ಮಾತನಾಡುವ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು. ಕರ್ನಾಟಕ-ಮಹಾರಾಷ್ಟ್ರ ಗಡಿ ಸಮಸ್ಯೆ ಸುಪ್ರೀಂಕೋರ್ಟ್ನಲ್ಲಿ ಇತ್ಯರ್ಥವಾಗುವವರೆಗೂ ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶ ಎಂದು ಶೀವಸೇನೆ ವಾದಿಸುತ್ತಲೇ ಬಂದಿತ್ತು. ಬೆಳಗಾವಿಯಲ್ಲಿ ಮರಾಠಿಗರ ಮೇಲೆ ಹಲ್ಲೆ ನಡೆದಿದೆ ಎಂದು ಕೆಲವು ದಿನಗಳಿಂದ ಮತ್ತೆ ವಿವಾದ ಮುಂಚೂಣಿಗೆ ಬಂದಿದೆ.
"ಕರ್ನಾಟಕದಲ್ಲಿ ಮಾತ್ರ ಈ ರೀತಿ ಆಗುತ್ತಿದೆ"
ಮಹಾರಾಷ್ಟ್ರ ಬಿಜೆಪಿ ಮುಖಂಡ ದೇವೇಂದ್ರ ಫಡ್ನವಿಸ್ ಕೇಂದ್ರ ಹಾಗೂ ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮುಂದೆ ಈ ವಿಷಯವನ್ನು ಪ್ರಸ್ತಾಪಿಸಬೇಕು ಎಂದು ಆಗ್ರಹಿಸಿದ್ದಾರೆ. ಮಧ್ಯ ಪ್ರದೇಶದ ಇಂದೋರ್ ಹಾಗೂ ಗುಜರಾತ್ನ ವಡೋದರದಲ್ಲಿಯೂ ಮರಾಠಿ ಭಾಷಿಗರಿದ್ದಾರೆ. ಆದರೆ ಸ್ಥಳೀಯರಿಂದ ಅವರಿಗೆ ಯಾವುದೇ ರೀತಿಯ ತೊಂದರೆಯಾಗಿಲ್ಲ. ಕರ್ನಾಟಕದಲ್ಲಿ ಮಾತ್ರ ಈ ರೀತಿ ಆಗುತ್ತಿದೆ ಎಂದು ವಾದಿಸಿದ್ದಾರೆ.
ಬೆಳಗಾವಿಯಲ್ಲಿ ಕನ್ನಡ ಧ್ವಜ ಹಾರಿಸುವುದು ನಮ್ಮ ಹಕ್ಕು; ಎಚ್ಡಿಕೆ
"ಮರಾಠಿಗರು ಯಾರನ್ನೂ ಕೆಟ್ಟದಾಗಿ ನಡೆಸಿಕೊಂಡಿಲ್ಲ"
ಮಹಾರಾಷ್ಟ್ರದಲ್ಲಯೂ ಹಲವು ವರ್ಷಗಳಿಂದ ವಿವಿಧ ಭಾಷಿಗರು ನೆಲೆಸಿದ್ದಾರೆ. ಆದರೆ ಮರಾಠಿ ಜನರು ಅವರನ್ನು ಎಂದಿಗೂ ಕೆಟ್ಟದಾಗಿ ನಡೆಸಿಕೊಂಡಿಲ್ಲ. ಆದರೆ ಕರ್ನಾಟಕದಲ್ಲಿ ಮರಾಠಿಗರ ಮೇಲೆ ವಿನಾ ಕಾರಣ ದೌರ್ಜನ್ಯ, ಹಲ್ಲೆ ನಡೆಯುತ್ತಿದೆ. ಕರ್ನಾಟಕದ ಪೊಲೀಸರು ಕೂಡ ಮರಾಠಿಗರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
"ಈ ಕೃತ್ಯಕ್ಕೆ ಪ್ರಚೋದನೆ ನೀಡಿದಂತಿದೆ"
ಬಿಜೆಪಿ ನೇತೃತ್ವದ ಕರ್ನಾಟಕ ಸರ್ಕಾರ ಮರಾಠಿ ಜನರೆಡೆಗಿನ ಈ ನಡೆಯನ್ನು ನಿರ್ವಹಿಸುತ್ತಿರುವ ರೀತಿ ನೋಡಿದರೆ ಈ ಕೃತ್ಯಕ್ಕೆ ಪ್ರಚೋದನೆ ನೀಡಿದಂತೆ ಕಾಣುತ್ತಿದೆ. ಸುಪ್ರೀಂ ಕೋರ್ಟ್ ಎದುರು ವಿವಾದ ಇನ್ನೂ ಇರುವಾಗ ಕರ್ನಾಟಕ ಸರ್ಕಾರ ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ ಎಂದು ದೂರಿದೆ.