ಶಿವಸೇನೆಯ ಬಿಕ್ಕಟ್ಟು: ಶಿಂಧೆ ಪಾಳಯದಲ್ಲಿರುವ ನಿಹಾರ್ ಠಾಕ್ರೆ ಯಾರು?
ಮಹಾರಾಷ್ಟ್ರ ರಾಜಕೀಯಕ್ಕಾಗಿ ಹೋರಾಟ ಇನ್ನೂ ಮುಂದುವರೆದಿದೆ ಮತ್ತು ಈ ಮಧ್ಯೆ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಭಾರಿ ಹಿನ್ನಡೆ ಅನುಭವಿಸಿದ್ದಾರೆ. ಉದ್ಧವ್ ಠಾಕ್ರೆ ಅವರ ಸೋದರಳಿಯ ನಿಹಾರ್ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಅವರನ್ನು ಭೇಟಿ ಮಾಡಿದ್ದಾರೆ. ನಿಹಾರ್ ಠಾಕ್ರೆ ಭೇಟಿಯಾಗಿ ಶಿಂಧೆ ಅವರಿಗೆ ಬೆಂಬಲ ನೀಡುವುದಾಗಿ ಭರವಸೆ ನೀಡಿದರು. ಅಷ್ಟೇ ಅಲ್ಲ ನಿಹಾರ್ ಠಾಕ್ರೆ ಕೂಡ ಏಕನಾಥ್ ಶಿಂಧೆ ನೇತೃತ್ವದಲ್ಲಿ ರಾಜಕೀಯಕ್ಕೆ ಬರಲಿದ್ದಾರೆ.
ನಿಹಾರ್ ಠಾಕ್ರೆ ಏಕನಾಥ್ ಶಿಂಧೆ ಅವರನ್ನು ಭೇಟಿ ಮಾಡಿದ್ದು ಟ್ವಿಟರ್ನಲ್ಲಿ ಹಂಚಿಕೊಳ್ಳಲಾಗಿದೆ. "ಸಾಮ್ರಾಟ್ ಬಾಳಾಸಾಹೇಬ್ ಠಾಕ್ರೆಯವರ ಮೊಮ್ಮಗ ಮತ್ತು ಬಿಂದುಮಾಧವ್ ಠಾಕ್ರೆಯವರ ಪುತ್ರ ನಿಹಾರ್ ಠಾಕ್ರೆ ಇಂದು ಸಮ್ಮಿಶ್ರ ಸರ್ಕಾರಕ್ಕೆ ತಮ್ಮ ಬೆಂಬಲವನ್ನು ಘೋಷಿಸಿದರು. ಈ ಸಂದರ್ಭದಲ್ಲಿ ಅವರನ್ನು ಹೃತ್ಪೂರ್ವಕವಾಗಿ ಸ್ವಾಗತಿಸಲಾಯಿತು ಮತ್ತು ಅವರ ಮುಂದಿನ ಸಾಮಾಜಿಕ ಮತ್ತು ರಾಜಕೀಯ ಜೀವನಕ್ಕಾಗಿ ಹಾರೈಸಿದರು"ಎಂದು ಮಹಾರಾಷ್ಟ್ರ ಸಿಎಂ ಶುಕ್ರವಾರ ಟ್ವೀಟ್ ಮಾಡಿದ್ದಾರೆ.
ನಿಹಾರ್ ಠಾಕ್ರೆ ಯಾರು?
ನಿಹಾರ್ ಅವರು ಮಾಜಿ ಸಿಎಂ ಉದ್ಧವ್ ಠಾಕ್ರೆ ಅವರ ಸಹೋದರ ಬಿಂದುಮಾಧವ್ ಠಾಕ್ರೆ ಅವರ ಪುತ್ರ ಮತ್ತು ಹರ್ಷವರ್ಧನ್ ಪಾಟೀಲ್ ಅವರ ಅಳಿಯ. ನಿಹಾರ್ ಶಿವಸೇನಾ ಮುಖ್ಯಸ್ಥ ಬಾಳ್ ಠಾಕ್ರೆಯವರ ಮೊಮ್ಮಗ. ಅವರ ತಂದೆ ಬಿಂದುಮಾಧವ್ 1996 ರಲ್ಲಿ ಅಪಘಾತದಿಂದಾಗಿ ನಿಧನರಾದರು. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಅವರ ಸಹೋದರ ಜೈದೇವ್ ನಿಹಾರ್ ಅವರ ಚಿಕ್ಕಪ್ಪ. ನಿಹಾರ್ ಠಾಕ್ರೆ ಅವರು LLM ವರೆಗೆ ಓದಿದ್ದಾರೆ ಮತ್ತು ಅವರು ಪ್ರಸ್ತುತ ಕಾನೂನು ಅಭ್ಯಾಸ ಮಾಡುತ್ತಿದ್ದಾರೆ. ನಿಹಾರ್ ಮುಂಬೈ ಮೂಲದ ವಕೀಲರಾಗಿದ್ದಾರೆ.
ಶಿಂಧೆ ಪಾಳಯದಲ್ಲಿ ರಾಜಕೀಯ ಜೀವನ
ಅವರು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ (LSE) ನಿಂದ ಇಂಟರ್ನ್ಯಾಷನಲ್ ಕಮರ್ಷಿಯಲ್ ಲಿಟಿಗೇಷನ್ ಕೋರ್ಸ್ ಅನ್ನು ಮಾಡಿದ್ದಾರೆ. ಅವರು ಮುಂಬೈನ ಸರ್ಕಾರಿ ಕಾನೂನು ಕಾಲೇಜಿನಲ್ಲಿ (GLC) LL.B ನಲ್ಲಿ ಪದವಿ ಪಡೆದಿದ್ದಾರೆ. ವಿವಾಹದ ಮೂಲಕ ನಿಹಾರ್ ಭಾರತೀಯ ಜನತಾ ಪಕ್ಷದ ಸಂಪರ್ಕವನ್ನು ಹೊಂದಿದ್ದಾರೆ. ಅವರ ಪತ್ನಿ ಅಂಕಿತಾ ಬಿಜೆಪಿ ಮುಖಂಡ ಹರ್ಷವರ್ಧನ್ ಪಾಟೀಲ್ ಅವರ ಪುತ್ರಿ. ಅವರಿಗೆ ನೇಹಾ ಠಾಕ್ರೆ ಎಂಬ ಸಹೋದರಿ ಇದ್ದಾರೆ. ಶಿಂಧೆ ಪಾಳಯಕ್ಕೆ ಸೇರಿದ ನಂತರ ನಿಹಾರ್ ತಮ್ಮ ರಾಜಕೀಯ ಜೀವನ ಆರಂಭಿಸಲು ಸಜ್ಜಾಗಿದ್ದಾರೆ.
ಸೌಜನ್ಯದ ಭೇಟಿ ಎಂದ ಸ್ಮಿತಾ
ಇದಕ್ಕೂ ಮುನ್ನ ಶಿವಸೇನಾ ಸಂಸ್ಥಾಪಕ ಬಾಳ್ ಠಾಕ್ರೆ ಅವರ ಸೊಸೆ ಸ್ಮಿತಾ ಠಾಕ್ರೆ ಅವರು ಸಿಎಂ ಏಕನಾಥ್ ಶಿಂಧೆ ಅವರನ್ನು ಭೇಟಿ ಮಾಡಿದ್ದರು. ಆದರೆ, ಅವರ ಭೇಟಿಯನ್ನು ಸೌಜನ್ಯಯುತ ಭೇಟಿ ಎಂದು ಹೇಳಿಕೊಂಡಿದ್ದಾರೆ. ಈ ಸಭೆಯ ನಂತರ, ಸ್ಮಿತಾ ಅವರು ಏಕನಾಥ್ ಶಿಂಧೆ ಮುಖ್ಯಮಂತ್ರಿಯಾದ ಹಳೆಯ ಶಿವಸೈನಿಕ ಅವರನ್ನು ಅಭಿನಂದಿಸಲು ಇಲ್ಲಿಗೆ ಬಂದಿದ್ದೇನೆ. ನಾನು ಅವರನ್ನು ಮತ್ತು ಅವರ ಕೆಲಸವನ್ನು ಹಲವು ವರ್ಷಗಳಿಂದ ಬಲ್ಲೆ, ಅದು ಸೌಜನ್ಯದ ಭೇಟಿಯಾಗಿತ್ತು. ನಾವು ಬಹಳ ಸಮಯದಿಂದ ಒಬ್ಬರಿಗೊಬ್ಬರು ತಿಳಿದಿದ್ದೇವೆ ಆದ್ದರಿಂದ ನಾವು ಅವರನ್ನು ಭೇಟಿಯಾದೆವು ಎಂದು ಸ್ಮಿತ ಹೇಳಿಕೊಂಡಿದ್ದಾರೆ.
ಏಕನಾಥ್ ಶಿಂಧೆಗೆ ಸಿಎಂ ಪಟ್ಟ್
ಮಹಾರಾಷ್ಟ್ರ ರಾಜಕಾರಣ ಯಾರೂ ಊಹಿಸಿರದ ರೀತಿಯಲ್ಲಿ ಬದಲಾಗಿದೆ. ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರದ ವಿರುದ್ಧ ಏಕನಾಥ್ ಶಿಂಧೆ ನೇತೃತ್ವದಲ್ಲಿ ಸುಮಾರು 40 ಶಾಸಕರ ಬಂಡಾಯ ಅನಿರೀಕ್ಷಿತವಾಗಿತ್ತು. ಸರ್ಕಾರ ಉಳಿಸಿಕೊಳ್ಳುವ ಎಲ್ಲ ಪ್ರಯತ್ನಗಳು ವಿಫಲವಾದಾಗ, ಬಿಜೆಪಿ ಮತ್ತು ಶಿವಸೇನಾದ ಬಂಡಾಯ ಶಾಸಕರ ಮೈತ್ರಿಯ ಹೊಸ ಸರ್ಕಾರ ಸ್ಥಾಪನೆಯಾಗಿದೆ.
ಸಂಖ್ಯಾಬಲದಿಂದ ದೊಡ್ಡದಾಗಿರುವ ಬಿಜೆಪಿಗೆ ಸಿಎಂ ಗಾದಿ ಸಿಗಲಿದ್ದು, ದೇವೇಂದ್ರ ಫಡ್ನವೀಸ್ ಅವರೇ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಊಹಿಸಲಾಗಿತ್ತು. ಆದರೆ, ಸರ್ಕಾರ ರಚನೆಗೆ ಹಕ್ಕು ಮಂಡಿಸುವವರೆಗೂ ಗೋಪ್ಯತೆ ಕಾಪಾಡಿಕೊಂಡಿದ್ದ ಬಿಜೆಪಿ, ಬಂಡಾಯ ಶಾಸಕರ ಗುಂಪಿನ ನಾಯಕ ಏಕನಾಥ್ ಶಿಂಧೆ ಅವರನ್ನೇ ಮುಖ್ಯಮಂತ್ರಿ ಎಂದು ಘೋಷಿಸುವ ಮೂಲಕ ಅಚ್ಚರಿ ಮೂಡಿಸಿದೆ.
Recommended Video