ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್ ಮುಖ್ಯಮಂತ್ರಿ ಬದಲಾವಣೆ ಮಾಡಿದ್ದೇಕೆ: ಶಿವಸೇನೆ ಪ್ರಶ್ನೆ

|
Google Oneindia Kannada News

ಮುಂಬೈ, ಸೆಪ್ಟೆಂಬರ್ 14: ಗುಜರಾತ್ ಮುಖ್ಯಮಂತ್ರಿಯನ್ನು ಬದಲಾವಣೆ ಮಾಡಿದ್ದೇಕೆ, ಅಂತಹ ಅಗತ್ಯವಾದರೂ ಏನಿತ್ತು ಎಂದು ಶಿವಸೇನೆ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ.

ವಿಜಯ್ ರೂಪಾನಿ ಮುಖ್ಯಮಂತ್ರಿ ಆಗಿದ್ದಾಗ ಕೊರೊನಾ ಎರಡನೇ ಅಲೆ ಸಂದರ್ಭದಲ್ಲಿ ಗುಜರಾತ್‌ನಲ್ಲಿ ಆರೋಗ್ಯ ಚಿಕಿತ್ಸೆ ವ್ಯವಸ್ಥೆ ಕುಸಿದಿತ್ತು. ಅಲ್ಲಿನ ಜನರು ಈ ಬಗ್ಗೆ ಆಕ್ರೋಶಗೊಂಡಿದ್ದರು ಎಂದು ಟೀಕಿಸಿದೆ. ಅಲ್ಲದೆ, ಪಟೇಲ್ ಪ್ರತಿನಿಧಿಸುವ ಪ್ರಭಾವಿ ಪಾಟಿದಾರ ಸಮುದಾಯವು ಪಕ್ಷದ ಜತೆ ಮುನಿಸಿಕೊಂಡಿದೆ ಎಂಬುದನ್ನು ಅರಿತಿತ್ತು ಎಂದು ಹೇಳಿದೆ.

ಇದೇ ಬೆಳವಣಿಗೆಯು ಕಾಂಗ್ರೆಸ್ ಪಕ್ಷದಲ್ಲಿ ಆಗಿದ್ದರೆ ಅದನ್ನು ನಾವು ಪ್ರಜಾಪ್ರಭುತ್ವ ಎಂದು ಕರೆಯಬಹುದಿತ್ತು ಎಂದು ಶಿವಸೇನಾ ವ್ಯಂಗ್ಯವಾಗಿ ಹೇಳಿದೆ. ಒಂದು ವೇಳೆ ಗುಜರಾತ್ ನಿಜವಾಗಿ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದ್ದರೆ ರಾತ್ರೋರಾತ್ರಿ ಮುಖ್ಯಮಂತ್ರಿಯನ್ನು ಬದಲಾವಣೆ ಮಾಡುವ ಅಗತ್ಯವೇನಿತ್ತು ಎಂದು ಕೇಳಿದೆ.

 Shiv Sena Asks Why Change CM If Gujarat Was On Path Of Progress

ಶಿವಸೇನಾ ಮುಖವಾಣಿ ಸಾಮ್ನಾದಲ್ಲಿ ಈ ಕುರಿತು ಬರೆಯಲಾಗಿದೆ. ಅಭಿವೃದ್ಧಿ ಹಾಗೂ ಆಡಳಿತಕ್ಕಾಗಿ ಬಿಂಬಿಸಲಾಗುತ್ತಿದ್ದ ಗುಜರಾತ್ ಮಾದರಿಯ ಬಲೂನು ಈಗ ಸಿಡಿದಿದೆ ಎಂದು ಹೇಳಿದೆ.

ಶಾಸಕಾಂಗ ಪಕ್ಷದ ಸಭೆಯಲ್ಲಿ ಭಾಗವಹಿಸಲು ಗಾಂಧಿನಗರಕ್ಕೆ ಬಂದಿದ್ದ ಕೇಂದ್ರ ಸಚಿವ ಮನ್‌ಸುಖ್ ಮಾಂಡವೀಯ ಗುಜರಾತ್‌ನ ನೂತನ ಸಿಎಂ ಆಗುತ್ತಾರೆಂಬ ಊಹಾಪೋಹಗಳು ಎದ್ದಿದ್ದವು.

ಮುಂಬರುವ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರಬಲ ಪಾಟೀದಾರ್ ಸಮುದಾಯದವರನ್ನೇ ಸಿಎಂ ಮಾಡಬೇಕೆಂಬುದು ಬಿಜೆಪಿ ಹೈಕಮಾಂಡ್ ನ ಲೆಕ್ಕಾಚಾರವಾಗಿತ್ತು. ಹೀಗಾಗಿ ಪಾಟೀದಾರ್ ಸಮುದಾಯಕ್ಕೆ ಸೇರಿದ ಮನ್‌ಸುಖ್‌ ಮಾಂಡವೀಯ ಸಿಎಂ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದರು.

ಮಾಂಡವೀಯ ಮಾತ್ರವಲ್ಲದೆ ಗುಜರಾತ್ ಸಿಎಂ ರೇಸ್ ನಲ್ಲಿ ಬಿಜೆಪಿ ಹಿರಿಯ ನಾಯಕ ಪ್ರಫುಲ್‌ ಖೋಡಾ ಪಟೇಲ್‌, ಕೇಂದ್ರ ಸಚಿವ ಪುರುಷೋತ್ತಮ ರೂಪಾಲ, ಗುಜರಾತ್ ಉಪಮುಖ್ಯಮಂತ್ರಿ ನಿತಿನ್ ಪಟೇಲ್‌, ಕೃಷಿ ಸಚಿವ ಆರ್‌.ಸಿ.ಫಾಲ್ದು ಅವರ ಹೆಸರುಗಳೂ ಕೇಳಿಬಂದಿದ್ದವು. ಕೇಂದ್ರದ ವೀಕ್ಷಕರಾಗಿರುವ ನರೇಂದ್ರ ಸಿಂಗ್ ತೋಮರ್ ಮತ್ತು ಪ್ರಲ್ಹಾದ್ ಜೋಶಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಾಲ್ಗೊಂಡು ಈ ಬಗ್ಗೆ ಚರ್ಚಿಸಿದ್ದರು. ಅಚ್ಚರಿಯೆಂಬಂತೆ ಭೂಪೇಂದ್ರ ಪಟೇಲ್​ ಅವರು ಆಯ್ಕೆಯಾಗಿದ್ದಾರೆ.

ಸಿವಿಲ್‌ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಮಾಡಿರುವ ಭೂಪೇಂದ್ರ ಪಟೇಲ್ 2010ರಿಂದ 2015ರವರೆಗೆ ಅಹಮದಾಬಾದ್‌ ನಗರ ಪಾಲಿಕೆಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಬಳಿಕ‌ 2015-17ರವರೆಗೆ ಅಹಮದಾಬಾದ್‌ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ.

ಇದಾದ ಮೇಲೆ 2017ರಲ್ಲಿ ಅವರು ಘಟ್ಲೋಡಿಯಾ ಕ್ಷೇತ್ರದಿಂದ ಮೊದಲ ಬಾರಿ ವಿಧಾನಸಭಾ ಚುನಾವಣೆ ಎದುರಿಸಿ ಗೆದ್ದು ಶಾಸಕರಾದರು. 1.17 ಲಕ್ಷ ಮತಗಳ ಅಂತರದಿಂದ ಗೆಲುವು‌ ಸಾಧಿಸಿ ದಾಖಲೆಯನ್ನೂ ಬರೆದಿದ್ದರು. ಈಗ ಗುಜರಾತಿನಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದಾಗಲೇ ಮುಖ್ಯಮಂತ್ರಿಯಾದ ದಾಖಲೆಯನ್ನೂ ಮಾಡಿದ್ದಾರೆ.

ರೂಪಾನಿ ಅವರು ಗುಜರಾತ್ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಲು ಏನು ಕಾರಣ, ಇದರ ಹಿಂದಿನ ಲೆಕ್ಕಾಚಾರ ಏನು ಎಂಬಿತ್ಯಾದಿ ಕುತೂಹಲ ಮೂಡಿದ್ದವು. ಗುಜರಾತ್ ವಿಧಾನಸಭಾ ಚುನಾವಣೆಗೆ ಬರೋಬ್ಬರಿ ಇನ್ನೂ 14 ತಿಂಗಳು ಕಾಲಾವಕಾಶ‌ ಇದೆ.

ಈ‌ ಹಂತದಲ್ಲಿ ಬಿಜೆಪಿ ಹೈಕಮಾಂಡ್ ನಾಯಕರು ಗುಜರಾತಿನಲ್ಲಿ ಮುಖ್ಯಮಂತ್ರಿ ಬದಲಿಸಿ ಅಚ್ಚರಿ ಮೂಡಿಸಿದ್ದರು. ಇತ್ತೀಚೆಗೆ ಉತ್ತರಾಖಂಡ, ಕರ್ನಾಟಕದಲ್ಲೂ ಮುಖ್ಯಮಂತ್ರಿ ಬದಲಾವಣೆ ಮಾಡಿ ಮುಂದಿನ‌‌ ಚುನಾವಣೆಗಳಿಗೆ ಅಣಿಯಾಗುತ್ತಿರುವ ಬಿಜೆಪಿ ಹೈಕಮಾಂಡ್ ಗುಜರಾತಿನಲ್ಲೂ ಮುಖ್ಯಮಂತ್ರಿ ಬದಲಾವಣೆಯ ಅಸ್ತ್ರವನ್ನೇ ಬಳಸಿದೆ.
ಕರ್ನಾಟಕದಲ್ಲಿ ಲಿಂಗಾಯತ ಸಮುದಾಯದ ನಾಯಕನಿಗೆ ಮುಖ್ಯಮಂತ್ರಿ ಕಟ್ಟಬೇಕು ಎಂದು ನಿಶ್ಚಯಿಸಿದಂತೆ ಗುಜರಾತಿನಲ್ಲಿ ಪಟೇಲ್ ಸಮುದಾಯಕ್ಕೆ ಮಣೆ ಹಾಕಿದೆ.

ಗುಜರಾತ್ ವಿಧಾನಸಭಾ ಚುನಾವಣೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪಾಲಿಗೆ ಅತ್ಯಂತ ಪ್ರತಿಷ್ಠೆಯ ಚುನಾವಣೆ. ಗುಜರಾತ್ ಅವರದೇ ರಾಜ್ಯ ಎನ್ನುವ ಕಾರಣಕ್ಕೆ ಇದು ಮಹತ್ವದ ಚುನಾವಣೆ. ಎಲ್ಲೆಡೆ ಸೋತರೂ ಪರವಾಗಿಲ್ಲ.

ತವರು ರಾಜ್ಯದಲ್ಲಿ ಮಾತ್ರ ಮುಖಭಂಗ ಅನುಭವಿಸಬಾರದು ಅಂತಾ ಮೋದಿ ಮತ್ತು ಅಮಿತ್ ಶಾ ಗುಜರಾತ್ ಚುನಾವಣೆ ಬಗ್ಗೆ ಹೆಚ್ಚು ಗಮನಹರಿಸಿದ್ದಾರೆ. ಗುಜರಾತಿನಲ್ಲಿ ಗೆಲ್ಲಲೇ‌ಬೇಕು ಎಂಬುದು ಅವರ ದೃಢ ಸಂಕಲ್ಪ.

ಆದರೆ ವಿಜಯ್ ರೂಪಾನಿ ನಿರೀಕ್ಷಿತ ಮಟ್ಟದಲ್ಲಿ ಜನಪ್ರಿಯರಾಗಿಲ್ಲ. ಇವರದೇ ನೇತೃತ್ವದಲ್ಲಿ ಚುನಾವಣೆಗೆ ಹೋದರೆ ಯಡವಟ್ಟಾಗಿ ಬಿಡಬಹುದು ಎಂದು ರೂಪಾಣಿ ರಾಜೀನಾಮೆ ಪಡೆಯಲಾಗಿದೆ ಎಂದು ಹೇಳಲಾಗುತ್ತಿತ್ತು. ಈಗ ಭೂಪೇಂದ್ರ ಪಟೇಲ್ ಅವರಿಗೆ ಅವಕಾಶ ನೀಡಲಾಗಿದೆ.

English summary
The Shiv Sena on Tuesday said the sudden change of guard in Gandhinagar, where first-time BJP MLA Bhupendra Patel has been appointed the new chief minister, reflected the style of functioning generally associated with the Congress and claimed the move shows the 'balloon' of Gujarat's development model has burst.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X