ಮಸೀದಿಗಳಲ್ಲಿ ಧ್ವನಿವರ್ಧಕ ಬಳಕೆ ನಿಷೇಧಕ್ಕೆ ಶಿವಸೇನಾ ಆಗ್ರಹ
ಮುಂಬೈ, ಡಿ.2: ದೇಶದೆಲ್ಲೆಡೆ ಮಸೀದಿಗಳಲ್ಲಿ ಅಜಾನ್ ಸಂದರ್ಭದಲ್ಲಿ ಲೌಡ್ ಸ್ಪೀಕರ್ ಬಳಸುವುದನ್ನು ನಿಷೇಧಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಶಿವಸೇನಾ ಆಗ್ರಹಿಸಿದೆ.
ಶಿವಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿ ಈ ಬಗ್ಗೆ ಬರೆದುಕೊಂಡಿದ್ದು, ಮಸೀದಿಯಲ್ಲಿ ಧ್ವನಿವರ್ಧಕ ಬಳಕೆಯಿಂದ ಶಬ್ದಮಾಲಿನ್ಯವಾಗುತ್ತಿದೆ, ಪರಿಸರ ಸಂರಕ್ಷಣಾ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರವು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದಿದೆ.
ಇಸ್ಲಾಮ್ ಪ್ರಕಾರ ಆಜಾನ್ ಓಕೆ, ಲೌಡ್ ಸ್ಪೀಕರ್ ಯಾಕೆ?: ಹೈಕೋರ್ಟ್
''ಮಸೀದಿಗಳಲ್ಲಿ ಲೌಡ್ ಸ್ಪೀಕರ್ ನಿಷೇಧ ಕುರಿತಂತೆ ವಿಧೇಯಕ ಮಂಡನೆ ಮಾಡಿ ಸೂಕ್ತ ಕಾನೂನು ರೂಪಿಸಬೇಕು'' ಎಂದು ಸಾಮ್ನಾ ಸಂಪಾದಕೀಯದಲ್ಲಿ ಹೇಳಲಾಗಿದೆ.
ಇತ್ತೀಚೆಗೆ ಶಿವಸೇನಾದ ಮುಂಬೈ ದಕ್ಷಿಣ ವಿಭಾಗದ ಪ್ರಮುಖ್ ಪಾಂಡುರಂಗ ಸಕ್ಪಲ್ ಅವರು ಅಜಾನ್ ಕಂಠಪಾಠ ಸ್ಪರ್ಧೆ ಏರ್ಪಡಿಸುವ ಬಗ್ಗೆ ಸಲಹೆ ನೀಡಿದ್ದರು. ಇದನ್ನು ಬಿಜೆಪಿ ಮುಖಂಡರು ಖಂಡಿಸಿದ್ದರು.
ಇದಕ್ಕೂ ಸಾಮ್ನಾದಲ್ಲಿ ಪ್ರತಿಕ್ರಿಯಿಸಲಾಗಿದ್ದು, ಸೇನಾ ಮುಖಂಡರು ಅಜಾನ್ ಹೊಗಳಿದ್ದಕ್ಕೆ ಬಿಜೆಪಿ ಟೀಕಿಸಿದೆ. ರೈತರನ್ನು ಪಾಕಿಸ್ತಾನಿ ಭಯೋತ್ಪಾದಕರಂತೆ ದೆಹಲಿ ಗಡಿಯಲ್ಲಿ ಕಾಣಲಾಗುತ್ತಿದೆ ಎಂಬುದನ್ನು ಬಿಜೆಪಿ ಇದೇ ರೀತಿ ಟೀಕಿಸಿತ್ತು ಎಂದಿದೆ.
ರೈತರನ್ನು ಉಗ್ರರಂತೆ ಕಾಣುವ ಮಂದಿ, ಶಿವಸೇನಾದ ಹಿಂದುತ್ವವನ್ನು ಪ್ರಶ್ನಿಸುತ್ತಿದ್ದಾರೆ. ಆದರೆ, ಬಿಜೆಪಿ ನಾಯಕರು ಈದ್ ಖಾದ್ಯಗಳನ್ನು ಸವಿದು ಚಪ್ಪರಿಸುತ್ತಿರುವ ಚಿತ್ರಗಳು ಸಾಮಾಜಿಕ ಜಾಲ ತಾಣಗಳಲ್ಲಿ ಹೆಚ್ಚಾಗಿ ಓಡಾಡುತ್ತಿವೆ ಎಂದು ಸಾಮ್ನಾದಲ್ಲಿ ಹೇಳಲಾಗಿದೆ.
ವೋಟ್ ಬ್ಯಾಂಕ್ ರಾಜಕೀಯವನ್ನು ಬಿಜೆಪಿ ಚೆನ್ನಾಗಿ ಮಾಡಿಕೊಂಡು ಬಂದಿದೆ. ಒಂದು ಕಡೆ ಗೋಹತ್ಯೆ ನಿಷೇಧ ಹೇರುತ್ತದೆ, ಇನ್ನೊಂದೆಡೆ ಗೋವಾದಲ್ಲಿ ಗೋಮಾಂಸ ಸೇವನೆ, ಖರೀದಿ ಜೋರಾಗಿ ನಡೆದಿದೆ ಎಂದು ಶಿವಸೇನಾ ಟೀಕಿಸಿದೆ.
ಕಾನೂನು ಏನು ಹೇಳುತ್ತದೆ: ಅಸಾ ಮೊಹ್ಮದ್ v/s ಸೋನು ನಿಗಮ್ ಪ್ರಕರಣದಲ್ಲಿ ನ್ಯಾಯಮೂರ್ತಿ ಎಂಎಂ ಬೇಡಿ ನೇತೃತ್ವದ ಪೀಠವು ನೀಡಿದ ತೀರ್ಪಿನಂತೆ, ''ಆಜಾನ್ (ಬೆಳಗಿನ ಪ್ರಾರ್ಥನೆ) ಇಸ್ಲಾಮ್ ನ ಅವಿಭಾಜ್ಯ ಭಾಗ ಅಂತ ಒಪ್ಪಬಹುದು. ಆದರೆ ಆಜಾನ್ ನ ಲೌಡ್ ಸ್ಪೀಕರ್ ನಲ್ಲೇ ಹೇಳಬೇಕು ಅಂತ ಕಡ್ಡಾಯ ಎಲ್ಲಿದೆ ಲೌಡ್ ಸ್ಪೀಕರ್ ನಲ್ಲೇ ಹೇಳಬೇಕು ಅಂತೇನೂ ಇಲ್ಲವಲ್ಲ'' ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.