Breaking: ಕಾರು ಅಪಘಾತ, ಶಿವಸಂಗ್ರಾಮ್ ಮುಖ್ಯಸ್ಥ ವಿನಾಯಕ್ ಮೇಟೆ ನಿಧನ
ಮುಂಬೈ, ಆಗಸ್ಟ್ 14: ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಮುಂಬೈ-ಪುಣೆ ಎಕ್ಸ್ಪ್ರೆಸ್ವೇಯಲ್ಲಿ ಭಾನುವಾರ ಸಂಭವಿಸಿದ ಅಪಘಾತದಲ್ಲಿ ಮರಾಠ ಸಮುದಾಯದ ಮುಖಂಡ ವಿನಾಯಕ್ ಮೇಟೆ ಸಾವನ್ನಪ್ಪಿದ್ದಾರೆ.
ಮಡಪ್ ಸುರಂಗದ ಬಳಿ ಮಾಜಿ ವಿಧಾನಪರಿಷತ್ ಸದಸ್ಯ (ಎಂಎಲ್ಸಿ) ವಿನಾಯಕ್ ಮೇಟೆ ಕಾರಿಗೆ ವಾಹನ ಡಿಕ್ಕಿ ಹೊಡೆದಿದ್ದು, ಕಾರಿನಲ್ಲಿದ್ದ ಎಲ್ಲರಿಗೂ ಗಾಯಗಳಾಗಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಪಘಾತ ಸ್ಥಳದ ದೃಶ್ಯಗಳಲ್ಲಿ ಅವರ ಕಾರು ತೀವ್ರವಾಗಿ ಹಾನಿಗೊಳಗಾದ ಸ್ಥಿತಿಯಲ್ಲಿರುವುದು ಕಾಣಬಹುದು.
ಬಿಜೆಪಿಯ ಮಿತ್ರಪಕ್ಷವಾದ ಶಿವಸಂಗ್ರಾಮ್ನ ಮುಖ್ಯಸ್ಥರಾಗಿರುವ ವಿನಾಯಕ್ ಮೇಟೆಯನ್ನು ಅಪಘಾತದ ನಂತರ ನವಿ ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಅವರ ಭದ್ರತೆಗೆ ನಿಯೋಜಿಸಲಾಗಿದ್ದ ಪೊಲೀಸ್ ಸಿಬ್ಬಂದಿ ಕೂಡ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡಿರುವ ಪೊಲೀಸ್ ರಾಮ್ ಡೋಬ್ಲೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪಮುಖ್ಯಮಂತ್ರಿ ಮತ್ತು ಬಿಜೆಪಿಯ ನಾಯಕ ದೇವೇಂದ್ರ ಫಡ್ನವಿಸ್ ಅವರು ನವಿ ಮುಂಬೈನ ಎಂಜಿಎಂ ಆಸ್ಪತ್ರೆಗೆ ತಲುಪಿದ್ದಾರೆ.
ಮಹಾರಾಷ್ಟ್ರದ ಮಾಜಿ ಲೆಜಿಸ್ಲೇಟಿವ್ ಕೌನ್ಸಿಲ್ (ಎಂಎಲ್ಸಿ) ಸದಸ್ಯರಾಗಿರುವ ಮೇಟೆ ಅವರು ಪತ್ನಿ, ಒಬ್ಬ ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ. ಮೇಟೆ ಅವರ ನಿಧನಕ್ಕೆ ರಾಜ್ಯದ ಹಲವಾರು ರಾಜಕಾರಣಿಗಳು ಸಂತಾಪ ಸೂಚಿಸಿದ್ದಾರೆ.
ಇದು ತಮಗೆ ಆಘಾತ ತಂದಿದೆ ಎಂದು ರಾಜ್ಯ ಸಚಿವ ಚಂದ್ರಕಾಂತ್ ಪಾಟೀಲ್ ಹೇಳಿದ್ದಾರೆ. "ಅವರು ಮರಾಠ ಮೀಸಲಾತಿಗಾಗಿ ಬಹಳಷ್ಟು ಕೆಲಸ ಮಾಡುತ್ತಿದ್ದರು. ಅವರ ಅಗಲಿಕೆ ನಮಗೆ ಮತ್ತು ಮರಾಠ ಸಮುದಾಯಕ್ಕೆ ದೊಡ್ಡ ನಷ್ಟವಾಗಿದೆ" ಎಂದು ಹೇಳಿದರು.
ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಅಧ್ಯಕ್ಷ ಶರದ್ ಪವಾರ್ ಕೂಡ ಮೇಟೆ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. "ರಾಜಕೀಯ ವಿಷಯಗಳಿಗಿಂತ ಸಾಮಾಜಿಕ ವಿಷಯಗಳ ಮೇಲೆ ಅವರ ಗಮನ ಹೆಚ್ಚು ಇತ್ತು. ಅವರು ರಾಜಕೀಯ ನಾಯಕರಿಗಿಂತ ಸಾಮಾಜಿಕ ಕಾರ್ಯಕರ್ತರಾಗಿದ್ದರು. ಇದು ನಮಗೆ ದೊಡ್ಡ ಆಘಾತವಾಗಿದೆ. ಅವರು ಈ ಹಿಂದೆ ಎನ್ಸಿಪಿಯ ಭಾಗವಾಗಿದ್ದರು. ಅವರು ಮರಾಠರಿಗೆ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿಯ ಬೇಡಿಕೆಗಾಗಿ ಕೆಲಸ ಮಾಡುತ್ತಿದ್ದರು" ಎಂದಿದ್ದಾರೆ.
"ಮೇಟೆಯಂತಹ ನಾಯಕನನ್ನು ಕಳೆದುಕೊಂಡಿರುವುದು ದುರದೃಷ್ಟಕರವಾಗಿದೆ. ನಾವು ವಿವಿಧ ರಾಜಕೀಯ ಪಕ್ಷಗಳಲ್ಲಿದ್ದರೂ, ರಾಜ್ಯದಲ್ಲಿ ಮರಾಠ ಮೀಸಲಾತಿ ವಿಷಯದಲ್ಲಿ ಮೇಟೆ ಮತ್ತು ನಾನು ಬಹುತೇಕ ಒಂದೇ ವಿಚಾರ ಹೊಂದಿದ್ದೆವು" ಎಂದು ಕಾಂಗ್ರೆಸ್ ಮುಖಂಡ ಅಶೋಕ್ ಚೌವ್ಹಾಣ್ ಹೇಳಿದ್ದಾರೆ.