ಶಿರಡಿ ಸಾಯಿಬಾಬಾ ದೇಗುಲಕ್ಕೆ ಬರುತ್ತಿರುವ ಲಕ್ಷಗಟ್ಟಲೆ ನಾಣ್ಯಗಳ ಕಾಣಿಕೆಯೇ ಸಮಸ್ಯೆ
ಮುಂಬೈ, ಜೂನ್ 17: ದೇಶದ ಸಿರಿವಂತ ದೇವಾಲಯದಲ್ಲಿ ಒಂದಾದ ಮಹಾರಾಷ್ಟ್ರದ ಶಿರಡಿಯ ಸಾಯಿ ಬಾಬಾ ದೇವಸ್ಥಾನಕ್ಕೆ ಬರುತ್ತಿರುವ ಕಾಣಿಕೆಗಳು ಸಮಸ್ಯೆ ಸೃಷ್ಟಿಸುತ್ತಿವೆ. ದೇವಾಲಯ ಟ್ರಸ್ಟ್ ಪ್ರಕಾರ, ಪ್ರತಿ ವಾರ 14 ಲಕ್ಷ ರುಪಾಯಿಯಷ್ಟು ನಾಣ್ಯಗಳು ಸಂಗ್ರಹವಾಗುತ್ತಿದೆ. ಬ್ಯಾಂಕ್ ಗಳು ಆ ನಾಣ್ಯಗಳನ್ನು ಸ್ವೀಕರಿಸಲು ಒಪ್ಪದ ಕಾರಣಕ್ಕೆ ಏನು ಮಾಡಬೇಕೆಂದು ತಿಳಿಯುತ್ತಿಲ್ಲ.
ಮಹಾರಾಷ್ಟ್ರದಲ್ಲೇ ಬಹಳ ಮುಖ್ಯವಾದ ಪುಣ್ಯ ಕ್ಷೇತ್ರ ಶಿರಡಿ. ಈ ಸ್ಥಳವು ಸಾಯಿಬಾಬಾಗೆ ಅಂಕಿತವಾಗಿದೆ. ದೇಶದಾದ್ಯಂತ, ವಿಶ್ವದಾದ್ಯಂತ ಇರುವ ಭಕ್ತರು ಇಲ್ಲಿಗೆ ವರ್ಷವಿಡೀ ಬರುತ್ತಾರೆ. ದೇವಾಲಯದ ಹುಂಡಿಗಳಲ್ಲಿ ನಾಣ್ಯವನ್ನು ಹಾಕುತ್ತಾರೆ.
ಶಿರಡಿ ಸಾಯಿಬಾಬಾಗೆ 2 ಕೆ.ಜಿ. ತೂಕದ ಚಿನ್ನದ ಪಾದುಕೆ ನೀಡಿದ ಭಕ್ತೆ
ಶ್ರೀ ಸಾಯಿಬಾಬಾ ಸಂಸ್ಥಾನಿ ಟ್ರಸ್ಟ್ ನ ಸಿಇಒ ದೀಪಕ್ ಮುಗ್ಲಿಕರ್ ಮಾಧ್ಯಮವೊಂದರ ಜತೆ ಮಾತನಾಡಿ, ನಾವು ಪ್ರತಿ ವಾರಕ್ಕೆ ಎರಡು ಸಲ ಕಾಣಿಕೆಗಳನ್ನು ಎಣಿಕೆ ಮಾಡುತ್ತೇವೆ. ಪ್ರತಿ ಸಲ ಎರಡು ಕೋಟಿ ರುಪಾಯಿ ಬರುತ್ತಿದೆ. ಇನ್ನು ನಾಣ್ಯಗಳ ರೂಪದಲ್ಲಿ ತಲಾ ಏಳು ಲಕ್ಷ ರುಪಾಯಿ ಬರುತ್ತಿದೆ. ಆ ಪೂರ್ತಿ ಮೊತ್ತವನ್ನು ಸ್ವೀಕರಿಸಲು ಬ್ಯಾಂಕ್ ಗಳು ನಿರಾಕರಿಸುತ್ತಿವೆ ಎಂದಿದ್ದಾರೆ.
ಈ ನಾಣ್ಯಗಳನ್ನು ಸಂಗ್ರಹಿಸಿಡುವುದಕ್ಕೆ ಸ್ಥಳಾವಕಾಶ ಮಾಡಿಕೊಡುವುದಕ್ಕೂ ಟ್ರಸ್ಟ್ ಸಿದ್ಧವಿದೆ ಎಂದು ಅವರು ಹೇಳಿದ್ದಾರೆ. ಅಂದ ಹಾಗೆ ದೇವಾಲಯ ಟ್ರಸ್ಟ್ ಗೆ ಎಂಟು ವಿವಿಧ ಬ್ಯಾಂಕ್ ಗಳಲ್ಲಿ ಖಾತೆಗಳಿವೆ. ಈ ಎಲ್ಲ ಬ್ಯಾಂಕ್ ಗಳೂ ಸ್ಥಳಾವಕಾಶ ಕೊರತೆ ಕಾರಣವನ್ನು ನೀಡಿ, ನಾಣ್ಯಗಳನ್ನು ಠೇವಣಿಯಾಗಿ ಪಡೆಯಲು ನಿರಾಕರಿಸುತ್ತಿವೆ. ಇದೀಗ ಆರ್ ಬಿಐ ಬಳಿ ಸಮಸ್ಯೆಗೆ ಪರಿಹಾರ ಒದಗಿಸಲು ಕೇಳಲಾಗಿದೆ.
ಮೂಲಗಳ ಪ್ರಕಾರ, ದೇವಾಲಯ ಟ್ರಸ್ಟ್ ನಿಂದ ಪಡೆಯಲಾದ ನಾಣ್ಯಗಳ ರೂಪದ ಒಂದೂವರೆ ಕೋಟಿ ರುಪಾಯಿ ಬ್ಯಾಂಕ್ ಗಳ ಬಳಿಯೇ ಇವೆ.