ಶೀನಾ ಬೋರಾ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಸಿಬಿಐಗೆ ಇಂದ್ರಾಣಿ ಮುಖರ್ಜಿ ಪತ್ರ
ಮುಂಬೈ ಡಿಸೆಂಬರ್ 16: ದೇಶದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಶೀನಾ ಬೋರಾ ಕೊಲೆ ಪ್ರಕರಣಕ್ಕೆ ಸದ್ಯ ಭಾರೀ ಟ್ವಿಸ್ಟ್ ಸಿಕ್ಕಿದೆ. ಶೀನಾ ಬೋರಾ ಜೀವಂತವಾಗಿದ್ದಾಳೆ ಎಂದು ತಾಯಿ ಇಂದ್ರಾಣಿ ಮುಖರ್ಜಿ ಸಿಬಿಐಗೆ ಪತ್ರ ಬರೆದಿದ್ದಾರೆ. 2012ರಲ್ಲಿ ತನ್ನ ಮಗಳು ಶೀನಾ ಬೋರಾಳನ್ನು ಕೊಂದ ಆರೋಪ ಹೊತ್ತಿರುವ ಮಾಜಿ ಮಾಧ್ಯಮ ಕಾರ್ಯನಿರ್ವಾಹಕಿ ಇಂದ್ರಾಣಿ ಮುಖರ್ಜಿ, ಶೀನಾ ಬೋರಾ ಜೀವಂತವಾಗಿದ್ದಾಳೆ ಎಂದು ಕೇಂದ್ರೀಯ ತನಿಖಾ ದಳ (ಸಿಬಿಐ) ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ತಾನು ಕಾಶ್ಮೀರದಲ್ಲಿ ಶೀನಾ ಬೋರಾಳನ್ನು ಭೇಟಿಯಾಗಿದ್ದೆ ಎಂದು ಹೇಳಿರುವ ಮಹಿಳೆಯೊಬ್ಬರು ಹೇಳಿಕೊಂಡಿದ್ದಾರೆ ಎಂದು ಅವರು ತಮ್ಮ ಪತ್ರದಲ್ಲಿ ಬರೆದಿದ್ದಾರೆ.
ತಾನು ಕಾಶ್ಮೀರದಲ್ಲಿ ಶೀನಾ ಬೋರಾಳನ್ನು ಭೇಟಿಯಾಗಿದ್ದೆ ಎಂದು ಹೇಳಿರುವ ಮಹಿಳೆಯೊಬ್ಬರು ಇತ್ತೀಚೆಗೆ ಜೈಲಿನಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಅವರು ತಮ್ಮ ಪತ್ರದಲ್ಲಿ ಬರೆದಿದ್ದಾರೆ. ಹೀಗಾಗಿ ಕಾಶ್ಮೀರದಲ್ಲಿರುವ ಶೀನಾ ಬೋರಾ ಅವರನ್ನು ಹುಡುಕುವಂತೆ ಸಿಬಿಐಗೆ ಇಂದ್ರಾಣಿ ಮುಖರ್ಜಿ ಕೋರಿದ್ದಾರೆ. ಪತ್ರದ ಹೊರತಾಗಿ, ಅವರು ವಿಶೇಷ ಸಿಬಿಐ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿದ್ದಾರೆ, ಅದು ಶೀಘ್ರದಲ್ಲೇ ವಿಚಾರಣೆಗೆ ಬರುವ ಸಾಧ್ಯತೆಯಿದೆ.
2015 ರಲ್ಲಿ ಶೀನಾ ಬೋರಾ ಹತ್ಯೆ ಪ್ರಕರಣದಲ್ಲಿ ಇಂದ್ರಾಣಿ ಮುಖರ್ಜಿಯನ್ನು ಬಂಧಿಸಿದಾಗಿನಿಂದ ಮುಂಬೈನ ಬೈಕುಲ್ಲಾ ಜೈಲಿನಲ್ಲಿ ಇರಿಸಲಾಗಿತ್ತು. ಆಕೆಯ ಜಾಮೀನು ಅರ್ಜಿಯನ್ನು ಕಳೆದ ತಿಂಗಳು ಬಾಂಬೆ ಹೈಕೋರ್ಟ್ ತಿರಸ್ಕರಿಸಿದೆ ಮತ್ತು ಶೀಘ್ರದಲ್ಲೇ ತನ್ನ ವಕೀಲ ಸನಾ ಖಾನ್ ಮೂಲಕ ಸುಪ್ರೀಂ ಕೋರ್ಟ್ ಅನ್ನು ಸಂಪರ್ಕಿಸುವ ಸಾಧ್ಯತೆಯಿದೆ.
ಬೇರೆ ಪ್ರಕರಣವೊಂದರಲ್ಲಿ ಬಂಧಿತನಾಗಿದ್ದ ಇಂದ್ರಾಣಿ ಮುಖರ್ಜಿ ಚಾಲಕ ಶ್ಯಾಮವರ್ ರೈ ಎಂಬಾತನ ವಿಚಾರಣೆ ವೇಳೆ ಶೀನಾ ಬೋರಾ ಕೊಲೆ ಸಂಗತಿ ಬಯಲಿಗೆ ಬಂಧಿತ್ತು. ಶ್ಯಾಮವರ್ ಈ ಪ್ರಕರಣದಲ್ಲಿಯೂ ಆರೋಪಿಯಾಗಿದ್ದಾನೆ. ಸುಮಾರು 60 ಪ್ರತ್ಯಕ್ಷದರ್ಶಿಗಳಿಂದ ಹೇಳಿಕೆ ದಾಖಲಿಸಲಾಗಿತ್ತು.
2012 ರಲ್ಲಿ ಇಂದ್ರಾಣಿ ಮುಖರ್ಜಿ ಅವರು ಶೀನಾ ಬೋರಾಳನ್ನು ಕತ್ತು ಹಿಸುಕಿದ್ದರು ಎಂದು ಶ್ಯಾಮ್ವರ್ ರೈ ಮುಂಬೈ ಪೊಲೀಸರಿಗೆ ತಿಳಿಸಿದ್ದಾರೆ. ಹೆಚ್ಚಿನ ತನಿಖೆಯಿಂದ ಶೀನಾ ಇಂದ್ರಾಣಿಯ ಮೊದಲನೆಯ ಪತಿ ಮಗಳು ಮತ್ತು ಮುಂಬೈನಲ್ಲಿ ತನಗೆ ಮನೆಯನ್ನು ಪಡೆಯಲು ಶೀನಾ ತನ್ನ ತಾಯಿಗೆ ಬ್ಲಾಕ್ ಮೇಲ್ ಮಾಡುತ್ತಿದ್ದಳು ಎಂದು ತಿಳಿದುಬಂದಿದೆ.
ಮುಂಬೈ ಪೊಲೀಸರು ಮತ್ತು ನಂತರ ಸಿಬಿಐ ಪ್ರಕಾರ, ಇಂದ್ರಾಣಿ ಮುಖರ್ಜಿ ಅವರು ಮಾಧ್ಯಮದ ಕಾರ್ಯನಿರ್ವಾಹಕ ಪೀಟರ್ ಮುಖರ್ಜಿ ಅವರನ್ನು ಮದುವೆಯಾದ ನಂತರ ತನ್ನ ಇಬ್ಬರು ಮಕ್ಕಳಾದ ಶೀನಾ ಮತ್ತು ಮಿಖಾಯಿಲ್ ಅನ್ನು ತೊರೆದಿದ್ದರು. ಅವರನ್ನು ಗುವಾಹಟಿಯಲ್ಲಿ ತನ್ನ ಹೆತ್ತವರೊಂದಿಗೆ ಬಿಟ್ಟಿದ್ದರು. ಇಂದ್ರಾಣಿ ಮುಖರ್ಜಿ ಮತ್ತು ಪೀಟರ್ ಮುಖರ್ಜಿ ಅವರ ಫೋಟೋವನ್ನು ನೋಡಿದ ಶೀನಾಳಿಗೆ ಭಾರೀ ಬೇಸರವಾಗಿದೆ.
ನಂತರ ಶೀನಾ ಬೋರಾ ತನ್ನ ತಾಯಿಯನ್ನು ಭೇಟಿ ಮಾಡಲು ಮುಂಬೈಗೆ ಬಂದಿದ್ದಾಳೆ. ಇಂದ್ರಾಣಿ ಅವಳನ್ನು ತನ್ನ ಸಹೋದರಿ ಯ ಮಗಳೆಂದು ತನ್ನ ಪತಿ ಪೀಟರ್ಗೆ ಪರಿಚಯಿಸಿದ್ದಳು ಎಂದು ತಿಳಿದುಬಂದಿದೆ. ಶೀನಾ ತನ್ನ ಮಗಳೆಂದು ಹೇಳದಂತೆ ರಹಸ್ಯವಾಗಿಡಲು ಇಂದ್ರಾಣಿ ಬಯಸಿದ್ದಳು. ಬಳಿಕ ಶೀನಾ ಅವರು 2012 ರಲ್ಲಿ ಕಣ್ಮರೆಯಾದರು.
ಈ ಕೊಲೆಯಲ್ಲಿ ಇಂದ್ರಾಣಿಯ ಮೊದಲ ಪತಿ ಸಂಜೀವ್ ಖನ್ನಾ ಕೂಡ ಆರೋಪಿಯಾಗಿದ್ದಾರೆ. 2012ರ ಏಪ್ರಿಲ್ನಲ್ಲಿ ಇಂದ್ರಾಣಿ ಮುಖರ್ಜಿ, ಸಂಜೀವ್ ಖನ್ನಾ ಹಾಗೂ ಶ್ಯಾಮವರ್ ರೈ ಕಾರಿನಲ್ಲಿ ಶೀನಾ ಬೋರಾ ಕತ್ತು ಹಿಸುಕಿ ಕೊಲೆ ಮಾಡಿದ್ದರು. ಬಳಿಕ ರಾಯಗಡ ಜಿಲ್ಲೆಯ ಕಾಡೊಂದರಲ್ಲಿ ಆಕೆಯ ಮೃತದೇಹವನ್ನು ಸುಟ್ಟುಹಾಕಿದ್ದರು. ತನಿಖಾ ಸಂಸ್ಥೆಗಳು ಶೀನಾ ಅವರ ಅವಶೇಷಗಳು ಪತ್ತೆಯಾಗಿವೆ ಎಂದು ಹೇಳಿದ್ದಾರೆ. ಆದರೆ, ಇಂದ್ರಾಣಿ ಈ ಹೇಳಿಕೆಗಳನ್ನು ತಳ್ಳಿಹಾಕಿದ್ದರು.
ಇಂದ್ರಾಣಿಯ ಬಂಧನದ ನಂತರ, ಪಿತೂರಿಯ ಭಾಗವಾಗಿದ್ದಕ್ಕಾಗಿ ಸಿಬಿಐ ಪೀಟರ್ ಮುಖರ್ಜಿಯನ್ನು ಬಂಧಿಸಿತು. ಪೀಟರ್ ಮುಖರ್ಜಿ ಅವರಿಗೆ 2020 ರಲ್ಲಿ ಜಾಮೀನು ನೀಡಲಾಯಿತು. ವಿಚಾರಣೆಯ ಸಮಯದಲ್ಲಿ ಪೀಟರ್ ಮತ್ತು ಇಂದ್ರಾಣಿ ಮುಖರ್ಜಿ ವಿಚ್ಛೇದನ ಪಡೆದರು.