ಶೀನಾ ಬೋರಾ ಹತ್ಯೆ: ಇಂದ್ರಾಣಿ ಮುಖರ್ಜಿಗೆ ಜಾಮೀನು ಇಲ್ಲ
ಮುಂಬೈ, ಆ.6: ಶೀನಾ ಬೋರಾ ಹತ್ಯೆ ಮತ್ತು ಐಎನ್ ಎಕ್ಸ್ ಮಿಡಿಯಾ ಹಗರಣದ ಆರೋಪಿ ಇಂದ್ರಾಣಿ ಮುಖರ್ಜಿ ಅವರು ಸಲ್ಲಿಸಿದ ಜಾಮೀನು ಅರ್ಜಿಯನ್ನು ಸಿಬಿಐ ವಿಶೇಷ ಕೋರ್ಟ್ ಇಂದು ತಿರಸ್ಕರಿಸಿದೆ. ಶೀನಾ ಬೋರಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಪೀಟರ್ ಮುಖರ್ಜಿ ನಾಲ್ಕುವರ್ಷಗಳ ಸೆರೆಮನೆ ವಾಸದ ಬಳಿಕ ಹೊರನಡೆದಿದ್ದಾರೆ.
2012ರ ಏ.24ರಂದು ಶೀನಾ ಬೋರಾ ಹತ್ಯೆಯಾಗಿತ್ತು. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶೀನಾ ಬೋರಾ ತಾಯಿ ಇಂದ್ರಾಣಿ ಮುಖರ್ಜಿ ಮತ್ತು ಇಂದ್ರಾಣಿ ಪತಿ ಪೀಟರ್ ಮುಖರ್ಜಿ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದರು. ಇಂದ್ರಾಣಿ ಮಾಜಿ ಪತಿ ಸಂಜೀವ್ ಖನ್ನಾ ಮತ್ತು ಕಾರು ಚಾಲಕ ಶ್ಯಾಮ್ ರಾಯ್ ಈ ಪ್ರಕರಣದ ಸಹ ಆರೋಪಿಗಳಾಗಿದ್ದಾರೆ. ಪ್ರಕರಣದಲ್ಲಿ ಭಾರಿ ಮೊತ್ತದ ಹಣಕಾಸು ಅವ್ಯವಹಾರ ಇರುವುದರಿಂದ ತನಿಖೆಯನ್ನು ಸಿಬಿಐಗೆ ಮಹಾರಾಷ್ಟ್ರ ಸರ್ಕಾರ ವಹಿಸಿತ್ತು.
ಶೀನಾ ಬೊರಾ ಹತ್ಯೆ: ಸಂಚು ರೂಪಿಸಿದ್ದು ಪೀಟರ್ ಮುಖರ್ಜಿಯೇ!
ಶೀನಾ ಬೋರಾ ಹತ್ಯೆ ಆರೋಪಿ ಇಂದ್ರಾಣಿ ಅವರ ಜಾಮೀನು 4 ಬಾರಿ ತಿರಸ್ಕೃತಗೊಂಡಿದೆ. ಬೈಕುಲಾ ಜೈಲಿನಲ್ಲಿದ್ದಾರೆ. ಸಿಬಿಐ ವಿಶೇಷ ನ್ಯಾಯಾಲಯದ ಜಡ್ಜ್ ಜೆಸಿ ಜಗದಾಳೆ ಅವರು ಆರೋಪಿಯು ಪ್ರಭಾವಿ ಉದ್ಯಮಿಯಾಗಿದ್ದು, ಜಾಮೀನು ನೀಡಿದರೆ ಸಾಕ್ಷಿಗಳಿಗೆ ಬೆದರಿಕೆಯೊಡ್ಡುವ ಸಾಧ್ಯತೆಯಿದೆ ಎಂದು ಹೇಳಿ ಜಾಮೀನು ಅರ್ಜಿ ತಿರಸ್ಕರಿಸಿದ್ದಾರೆ.
2015ರಲ್ಲಿ ಆರೋಪಿಗಳ ಬಂಧನ
ಶೀನಾ ಬೋರಾ ತಂದೆ ಪೀಟರ್ ಮುಖರ್ಜಿಯನ್ನು 2015ರಲ್ಲಿ ಬಂಧಿಸಿ, ಅವರ ವಿರುದ್ಧ ಐಪಿಸಿ ಸೆಕ್ಷನ್ 302, 201, 34, 420, 364 ಹಾಗೂ 120 ಬಿ ಅನ್ವಯ ಪ್ರಕರಣ ದಾಖಲಿಸಲಾಗಿತ್ತು. ಶೀನಾ ಬೋರಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶೀನಾ ಬೋರಾ ತಾಯಿ ಇಂದ್ರಾಣಿ ಹಾಗೂ ಅವರ ಕಾರು ಚಾಲಕ ಶ್ಯಾಮ್ ರಾಯ್, ಇಂದ್ರಾಣಿ ಅವರ ಮಾಜಿ ಪತಿ ಸಂಜೀವ್ ಖನ್ನಾರನ್ನು ಬಂಧಿಸಿ ವಿಚಾರಣೆಗೊಳಪಡಿಸಿ, ಜೈಲಿಗೆ ಕಳಿಸಲಾಗಿತ್ತು. ಮುಂಬೈ ಪೊಲೀಸ್ ಆಯುಕ್ತ ರಾಕೇಶ್ ಮಾರಿಯಾ ಅವರೇ ಖುದ್ದು ಇಂದ್ರಾಣಿ ಹಾಗೂ ಆಕೆಯ ಮಾಜಿ ಪತಿ ಸಂಜೀವ್ ಖನ್ನಾ ಮತ್ತು ಕಾರು ಚಾಲಕ ಶ್ಯಾಮ್ ರಾಯ್ ಅವರ ವಿಚಾರಣೆ ನಡೆಸಿದ್ದರು.
ಶೀನಾಳ ಜೈವಿಕ ಸೋದರ ಮಿಖೈಲ್ ನೀಡಿದ್ದ ಸುಳಿವು
ಇಂದ್ರಾಣಿಗೆ ಎರಡನೇ ಪತಿ ಸಂಜೀವ್ ಖನ್ನಾನಿಂದ ಇನ್ನೊಂದು ಪುತ್ರಿ ವಿಧಿ ಕೂಡ ಇದ್ದಾಳೆ. ಈಕೆ ಸದ್ಯ ಇಂಗ್ಲೆಂಡ್ನಲ್ಲಿದ್ದು, ಪೀಟರ್ ಮುಖರ್ಜಿ ಈಕೆಯನ್ನು ದತ್ತು ತೆಗೆದುಕೊಂಡಿದ್ದಾರೆ. ಶೀನಾಳನ್ನು ಹತ್ಯೆಗೈದರೆ ಪೀಟರ್ ಮುಖರ್ಜಿಯ ಎಲ್ಲ ಆಸ್ತಿಯೂ ವಿಧಿಗೆ ಸಲ್ಲುತ್ತದೆ ಎಂಬ ಕಾರಣಕ್ಕೆ ಈ ಕೃತ್ಯ ಎಸಗಲಾಗಿದೆ ಎನ್ನಬಹುದು. ಶೀನಾಳ ಜೈವಿಕ ಸೋದರ ಮಿಖೈಲ್ ಬೊರಾಗೆ ಎಲ್ಲದರ ಬಗ್ಗೆ ಅರಿವಿದೆ. ಆತನ ವಿಚಾರಣೆಯಿಂದ ಕೊಲೆಯ ಕಾರಣ ಸ್ಪಷ್ಟಗೊಳ್ಳುವ ಸಾಧ್ಯತೆಯಿದೆ ಎಂದು ಪೊಲೀಸರು ವರದಿ ನೀಡಿದ್ದರು. ಈ ನಿಟ್ಟಿನಲ್ಲಿ ಸಿಬಿಐ ತನಿಖೆ ಮುಂದುವರೆಸಿ ಪ್ರಮುಖ ಆರೋಪಿಗಳನ್ನು ಬಂಧಿಸಿತ್ತು.
ಜೈಲುವಾಸಿಗಳಾದ ಇಂದ್ರಾಣಿ, ಪೀಟರ್ ಗೆ ವಿವಾಹ ಬಂಧನದಿಂದ ಮುಕ್ತಿ
ಸೇಫ್ ಲಾಕರ್ ನಲ್ಲಿರಿಸಿದ್ದ 150 ಕೋಟಿ ರು
ಕೊಲೆಯ ಕಾರಣದ ಬಗ್ಗೆ ಹುಡುಕಾಟ ನಡೆಸಿದ ಪೊಲೀಸರಿಗೆ ಇದು ಸೇಫ್ ಲಾಕರ್ ನಲ್ಲಿರಿಸಿದ್ದ 150 ಕೋಟಿ ರು ಗಾಗಿ ನಡೆದ ಕೊಲೆ ಎಂದು ಶಂಕೆ ವ್ಯಕ್ತವಾಗಿತ್ತು. ಇಂದ್ರಾಣಿ ಮುಖರ್ಜಿ ಹಾಗೂ ಆಕೆ ಪತಿ ಪೀಟರ್ ಮುಖರ್ಜಿ ಅವರು ಐಎನ್ ಎಕ್ಸ್ ಮೀಡಿಯಾದಲ್ಲಿದ್ದ ತಮ್ಮ ಷೇರುಗಳನ್ನು 2008-2009ರಲ್ಲಿ ಮಾರಾಟ ಮಾಡಿದ್ದರು. ಇದರಿಂದ ಸುಮಾರು 400 ರಿಂದ 500 ಕೋಟಿ ರು ಸಂಗ್ರಹವಾಗಿತ್ತು. ಶೀನಾ ಬ್ಯಾಂಕ್ ಖಾತೆಯ ಸೇಫ್ ಲಾಕರ್ ನಲ್ಲಿ ಸುಮಾರು 150 ಕೋಟಿ ರು ಇರಿಸಲಾಗಿತ್ತು.
ಅನಾಮಿಕ ಕರೆ ಇಂದ್ರಾಣಿಗೆ ಮುಳುವಾಯಿತು
ತನ್ನ ಖಾತೆಯಲ್ಲಿ ಭಾರಿ ಮೊತ್ತದ ಹಣ ಇರುವುದು ಶೀನಾಗೆ ತಡವಾಗಿ ತಿಳಿದು ಬಂದಿದೆ. ಮಗಳ ಬಳಿ ಹಣ ಇದ್ದರೆ ಸೇಫ್ ಎಂದು ತಿಳಿದಿದ್ದ ಇಂದ್ರಾಣಿಗೆ ಶೀನಾ ಆಘಾತ ನೀಡಿದ್ದಾರೆ. ತಮ್ಮ ಬಳಿ ಇದ್ದ ಹಣವನ್ನು ರವಾನಿಸಲು ನಿರಾಕರಿಸಿದ್ದಾರೆ. ಇದರಿಂದ ಕೋಪಗೊಂಡ ಇಂದ್ರಾಣಿ ಶೀನಾ ಹತ್ಯೆಗೆ ಮುಂದಾಗಿದ್ದಾರೆ. ಇದಕ್ಕೆ ಅಗತ್ಯ ನೆರವು ಒದಗಿಸುವಂತೆ ಪೀಟರ್ ಮುಖರ್ಜಿ ಕೋರಿದ್ದಾರೆ.
ಇಂದ್ರಾಣಿಗೆ ಆಕೆಯ ಕಾರು ಚಾಲಕ ಶ್ಯಾಮ್ ರಾಯ್,ಮಾಜಿ ಪತಿ ಸಂಜೀವ್ ಖನ್ನಾ ನೆರವಾಗಿದ್ದರು. 2012ರಲ್ಲಿ ಮುಂಬೈನಲ್ಲಿ ಕೊಲೆ ಮಾಡಿ ರಾಯ್ ಗಢದ ಕಾಡೊಂದರಲ್ಲಿ ಶವವನ್ನು ಸುಟ್ಟು ಹಾಕಿದ್ದರು. ಕೋಲ್ಕತ್ತಾ ಮೂಲದ ಸಿದ್ದಾರ್ಥ್ ದಾಸ್ ಅವರ ಪುತ್ರಿ ಶೀನಾ ಹತ್ಯೆ ನಂತರ ಅನೇಕ ಕಥೆಗಳು ಹುಟ್ಟಿಸಲಾಗಿತ್ತು. ಮೂರು ವರ್ಷಗಳ ನಂತರ ಪೊಲೀಸರಿಗೆ ಸ್ಕೈಪ್ ಮೂಲಕ ಬಂದ ಅನಾಮಿಕ ಕರೆಯಿಂದ ಇಂದ್ರಾಣಿ ಹಾಗೂ ಆಕೆಯ ಸಹಚರರ ಬಣ್ಣ ಬಯಲಾಗಿತ್ತು.