ರಾಜ್ಯಪಾಲ ಕೋಶ್ಯಾರಿ ವಿರುದ್ಧ ಪ್ರಧಾನಿ ಮೋದಿಗೆ ಶರದ್ ಪವಾರ್ ಪತ್ರ
ಮುಂಬೈ, ಅಕ್ಟೋಬರ್ 13: ಮಹಾರಾಷ್ಟ್ರದಲ್ಲಿ ಧಾರ್ಮಿಕ ಕೇಂದ್ರಗಳನ್ನು ಮರು ತೆರೆಯುವ ಸಂಬಂಧ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರು ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಬರೆದ ಪತ್ರದಲ್ಲಿ ಬಳಸಿದ ಭಾಷೆ ಬಗ್ಗೆ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಆಘಾತ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಶರದ್ ಪವಾರ್, ಕೋಶ್ಯಾರಿ ಅವರದು ಅಂಕೆಯಿಲ್ಲದ ಭಾಷೆ ಎಂದು ಟೀಕಿಸಿದ್ದಾರೆ.
ಹಿಂದುತ್ವದ ಪ್ರಮಾಣಪತ್ರ ನೀಡಬೇಕಿಲ್ಲ: ಉದ್ಧವ್ ಠಾಕ್ರೆ Vs ರಾಜ್ಯಪಾಲ ಕೋಶ್ಯಾರಿ ಯುದ್ಧ!
ಮಹಾರಾಷ್ಟ್ರದ ಶಿವಸೇನಾ-ಕಾಂಗ್ರೆಸ್-ಎನ್ಸಿಪಿ ಸರ್ಕಾರದ ಪ್ರಮುಖ ಸೂತ್ರಧಾರರಲ್ಲಿ ಒಬ್ಬರಾಗಿರುವ ಶರದ್ ಪವಾರ್, ರಾಜ್ಯಪಾಲರ ಪತ್ರದಲ್ಲಿ ಬಳಸಿದ ಪದಗಳು ಮತ್ತು ಅದರ ಸ್ವರದ ಬಗ್ಗೆ ಆಘಾತ ಹಾಗೂ ಅಚ್ಚರಿ ವ್ಯಕ್ತಪಡಿಸಿದ್ದಾರೆ. ರಾಜ್ಯಪಾಲ ಕೋಶ್ಯಾರಿ ಅವರ ಪತ್ರವು ರಾಜ್ಯಪಾಲರ ಕಚೇರಿಗೆ ಇರುವ ಘನತೆಯನ್ನು ಕುಂದಿಸುವಂತಿದೆ ಎಂದಿದ್ದಾರೆ.
ರಾಜ್ಯಪಾಲರು ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿನ ಧ್ವನಿಯು ದುರದೃಷ್ಟವಶಾತ್, ರಾಜಕೀಯ ಪಕ್ಷವೊಂದರ ಮುಖಂಡರು ಬರೆದ ಪದಗಳಂತೆ ಇದೆ. ನಮ್ಮ ಸಂವಿಧಾನದ ಪ್ರಸ್ತಾವನೆಯಲ್ಲಿ ಎಲ್ಲ ಧರ್ಮಗಳನ್ನೂ ಸಮಾನವಾಗಿ ಕಾಣುವ ಜಾತ್ಯತೀಯ ಎಂಬ ಪದವನ್ನು ಅಳವಡಿಸಲಾಗಿದೆ. ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತವರು ಸಂವಿಧಾನದ ಅಂತಹ ಆಶಯಗಳನ್ನು ಎತ್ತಿಹಿಡಿಯಬೇಕಿದೆ ಎಂದು ಪವಾರ್ ಹೇಳಿದ್ದಾರೆ.
'ಆ ಪತ್ರದಲ್ಲಿ ಬಳಸಲಾಗಿರುವ ಹತೋಟಿ ಮೀರಿದ ಭಾಷಾ ಪ್ರಯೋಗವನ್ನು ಮತ್ತು ಅವರು ಬಳಸಿದ ಪದಗಳ ಸ್ವರೂಪವನ್ನು ಪ್ರಧಾನಿ ನರೇಂದ್ರ ಮೋದಿ ಗಮನಿಸಿರುತ್ತಾರೆ ಎಂದು ನನಗೆ ಖಾತರಿಯಿದೆ. ಸಾಂವಿಧಾನಿಕ ಸ್ಥಾನದಲ್ಲಿ ಕುಳಿತ ವ್ಯಕ್ತಿ ಈ ರೀತಿ ವರ್ತಿಸುವುದು ತಕ್ಕುದಲ್ಲ' ಎಂದು ಪವಾರ್ ಹೇಳಿದ್ದಾರೆ.