ಬಿಜೆಪಿ ವಿರೋಧಿಸುವವರೆಲ್ಲರೂ ಒಗ್ಗೂಡಬೇಕು: ಶರದ್ ಪವಾರ್
ಮುಂಬೈ, ಡಿಸೆಂಬರ್ 02: ಬಿಜೆಪಿ ವಿರೋಧಿಸುವವರೆಲ್ಲರೂ ಒಂದಾದಾಗ ಮಾತ್ರ ಸುಲಭವಾಗಿ ಸೋಲಿಸಲು ಸಾಧ್ಯ ಎಂದು ಎನ್ಸಿಪಿ ಅಧ್ಯಕ್ಷ ಶರದ್ ಪವಾರ್ ಹೇಳಿದ್ದಾರೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿದ ಅವರು, ಬಿಜೆಪಿಯನ್ನು ಎದುರಿಸಲು ವಿರೋಧ ಪಕ್ಷಗಳ ಒಗ್ಗಟ್ಟಾಗಬೇಕು ಎಂದಿದ್ದಾರೆ.
ಆದಿತ್ಯ ಠಾಕ್ರೆ ಭೇಟಿಯಾದ ದೀದಿ: ಜೈ ಮರಾಠ, ಜೈ ಬಾಂಗ್ಲಾ ಘೋಷಣೆ
"ನಾವು ಚಾಲ್ತಿಯಲ್ಲಿರುವ ಪರಿಸ್ಥಿತಿ ಮತ್ತು ಎಲ್ಲಾ ಸಮಾನ ಮನಸ್ಕ ಪಕ್ಷಗಳು ಒಗ್ಗೂಡಿ ಬಿಜೆಪಿಗೆ ಬಲವಾದ ಪರ್ಯಾಯವನ್ನು ಒದಗಿಸುವ ಅಗತ್ಯವನ್ನು ಚರ್ಚಿಸಿದ್ದೇವೆ" ಎಂದು ಎನ್ಸಿಪಿ ಮುಖ್ಯಸ್ಥರು ಹೇಳಿದ್ದಾರೆ.
ಈ ಹಂತದಲ್ಲಿ ನಾಯಕತ್ವದ ಪ್ರಶ್ನೆ ಬರುವುದಿಲ್ಲ, ನಾವು ಬಿಜೆಪಿ ವಿರುದ್ಧ ಒಗ್ಗಟ್ಟಿನಿಂದ ಕೆಲಸ ಮಾಡಬೇಕಾಗಿದೆ ಎಂದು ಪವಾರ್ ತಿಳಿಸಿದ್ದಾರೆ.
ಇನ್ನೂ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರೊಗ್ರೆಸ್ಸಿವ್ ಅಲಯನ್ಸ್ (ಯುಪಿಎ) ಅಧ್ಯಕ್ಷರಾಗಲು ಬಯಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಮಮತಾ ಬ್ಯಾನರ್ಜಿ, "ಈಗ ಯುಪಿಎ ಇಲ್ಲ" ಎಂದರು.
ಕಾಂಗ್ರೆಸ್ ಅನ್ನು ಹೊರಗಿಟ್ಟು ಮೈತ್ರಿ ಮಾಡಿಕೊಳ್ಳುವ ಚಿಂತನೆ ಇದೆಯೇ? ಎಂಬ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಪವಾರ್, ಬಿಜೆಪಿಯನ್ನು ವಿರೋಧಿಸುವ ಎಲ್ಲರಿಗೂ ನಮ್ಮೊಂದಿಗೆ ಸೇರಲು ಸ್ವಾಗತ. ಯಾರನ್ನೂ ಹೊರಗಿಡುವ ಪ್ರಶ್ನೆಯೇ ಇಲ್ಲ ಎಂದರು.
ಇಂದಿನ ಸನ್ನಿವೇಶದಲ್ಲಿ ಸಮಾನ ಮನಸ್ಕ ಶಕ್ತಿಗಳು ರಾಷ್ಟ್ರಮಟ್ಟದಲ್ಲಿ ಒಂದುಗೂಡಬೇಕು ಮತ್ತು ಸಾಮೂಹಿಕ ನಾಯಕತ್ವ ರಚಿಸಬೇಕು. ಕಾಂಗ್ರೆಸ್ ಇರಲಿ, ಅಥವಾ ಇತರೆ ಯಾವುದೇ ಪಕ್ಷ ಇರಲಿ. ಬಿಜೆಪಿ ವಿರೋಧಿಸುವವರು ಒಂದಾಗಬೇಕು ಎಂದಿದ್ದಾರೆ.
ಮೊದಲು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಹಾರಾಷ್ಟ್ರ ಸಚಿವ ಆದಿತ್ಯ ಠಾಕ್ರೆಯವರನ್ನು ಭೇಟಿಯಾಗಿದ್ದಾರೆ. ಸಂದರ್ಭದಲ್ಲಿ ಜೈ ಮರಾಠ, ಜೈ ಬಾಂಗ್ಲಾ ಘೋಷಣೆ ಕೂಗಲಾಯಿತು. ಡಿಸೆಂಬರ್ 01ರಂದು ಅವರ ಭೇಟಿಯ ಕೊನೆಯ ದಿನವಾಗಿತ್ತು.
ಮಮತಾ ಬ್ಯಾನರ್ಜಿ ಅವರು ತಮ್ಮ ಮುಂಬೈ ಪ್ರವಾಸದ ಮೊದಲ ದಿನ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ಭೇಟಿಯಾಗಬೇಕಿತ್ತು, ಆದರೆ ಠಾಕ್ರೆ ಅವರ ಅನಾರೋಗ್ಯದ ಕಾರಣ ಈ ಸಭೆ ನಡೆಯಲು ಸಾಧ್ಯವಾಗಲಿಲ್ಲ.
ಹೀಗಾಗಿ ಮಮತಾ ಬ್ಯಾನರ್ಜಿ ಆದಿತ್ಯ ಠಾಕ್ರೆ ಮತ್ತು ಸಂಜಯ್ ರಾವತ್ ಅವರನ್ನು ಭೇಟಿ ಮಾಡಿದ್ದಾರೆ. ಈ ಕುರಿತು ಮಾತನಾಡಿರುವ ಆದಿತ್ಯ ಠಾಕ್ರೆ 2-3 ವರ್ಷಗಳ ಹಿಂದೆಯೂ ಅವರು ಮುಂಬೈಗೆ ಬಂದಾಗ ಭೇಟಿಯಾಗಿದ್ದಾಗಿ ಹೇಳಿದ್ದರು. ಮಮತಾ ಮುಂಬೈನ ಸಿದ್ಧಿವಿನಾಯಕ ದೇವಸ್ಥಾನಕ್ಕೂ ಭೇಟಿ ನೀಡಿದ್ದಾರೆ.
ಎಐಟಿಸಿ ಮಾಧ್ಯಮ ತಂಡದ ಬಿಡುಗಡೆಯ ಪ್ರಕಾರ, ಮಮತಾ ಬ್ಯಾನರ್ಜಿ ಅವರು ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ಮನೆಗೆ ಭೇಟಿ ನೀಡಿದ್ದರು.
ಇದಕ್ಕೂ ಮುನ್ನ ಅವರು ನಾರಿಮನ್ ಪಾಯಿಂಟ್ನಲ್ಲಿರುವ ವೈಬಿ ಚವಾನ್ ಸೆಂಟರ್, ನಾರಿಮನ್ ಪಾಯಿಂಟ್ನಲ್ಲಿ ನಾಗರೀಕರು ಮತ್ತು ಸಮಾಜದ ಸದಸ್ಯರನ್ನು ಭೇಟಿಯಾಗಿದ್ದರು.
ಸುಬ್ರಮಣಿಯನ್ ಸ್ವಾಮಿ ವಿವಿಧ ವಿಷಯಗಳಲ್ಲಿ ತಮ್ಮದೇ ಸರ್ಕಾರದ ವಿರುದ್ಧ ಕಿಡಿ ಕಾರುತ್ತಾರೆ. ದೇಶದ ಆರ್ಥಿಕ ಸ್ಥಿತಿಗೆ ಸಂಬಂಧಿಸಿದಂತೆ ಅವರು ಮೋದಿ ಸರ್ಕಾರದ ಮೇಲೆ ನಿರಂತರ ದಾಳಿ ನಡೆಸುತ್ತಿದ್ದಾರೆ. ಇದೇ ವೇಳೆ ದಿನವೂ ಅವರ ಹೇಳಿಕೆಗಳಿಂದ ಪಕ್ಷಕ್ಕೆ ಭಾರೀ ಮುಜುಗರ ಹಾಗೂ ಸಂಕಷ್ಟ ಎದುರಾಗಿದೆ.
ಹೀಗಿರುವಾಗ ಮಮತಾ ಬ್ಯಾನರ್ಜಿ ಅವರು ಬಿಜೆಪಿ ವಿರುದ್ಧ ತೃತೀಯ ರಂಗ ರಚಿಸಬಹುದಾ ಎಂಬ ಆತಂಕ ಶುರುವಾಗಿದೆ. ಮಂಗಳವಾರ, ಎನ್ಸಿಪಿ ನಾಯಕ ಮತ್ತು ಮಹಾರಾಷ್ಟ್ರ ಸರ್ಕಾರದ ಸಚಿವ ನವಾಬ್ ಮಲಿಕ್ ಪ್ರತಿಕ್ರಿಯಿಸಿದ್ದು, ಪ್ರತಿಯೊಂದು ಪಕ್ಷಕ್ಕೂ ತನ್ನ ನೆಲೆಯನ್ನು ಹೆಚ್ಚಿಸುವ ಎಲ್ಲ ಹಕ್ಕುಗಳಿವೆ, ಆದರೆ ಕಾಂಗ್ರೆಸ್ ಅನ್ನು ಹೊರಗಿಟ್ಟು ಬಿಜೆಪಿಯ ವಿರೋಧಿಗಳನ್ನು ಒಗ್ಗೂಡಿಸುವುದು ಅಸಾಧ್ಯ ಎಂದು ಹೇಳಿದ್ದಾರೆ. ಈ ವಿಚಾರವನ್ನು ಪವಾರ್ ಹಲವು ಬಾರಿ ಸ್ಪಷ್ಟಪಡಿಸಿದ್ದಾರೆ ಎಂದೂ ಮಲಿಕ್ ಹೇಳಿದ್ದಾರೆ.
Recommended Video