ಎನ್ಸಿಪಿ ಎಲ್ಲಾ ಶಾಖೆಗಳ ವಿಸರ್ಜಿಸಿದ ಶರದ್ ಪವಾರ್
ಮುಂಬೈ, ಜುಲೈ.21: ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಅಧ್ಯಕ್ಷ ಶರದ್ ಪವಾರ್ ತಮ್ಮ ರಾಜಕೀಯ ಪಕ್ಷದ ಎಲ್ಲಾ ರಾಷ್ಟ್ರೀಯ ಮಟ್ಟದ ಇಲಾಖೆಗಳು ಮತ್ತು ಕೋಶಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಿಸರ್ಜಿಸಿದ್ದಾರೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಫುಲ್ ಪಟೇಲ್ ಹೇಳಿದ್ದಾರೆ.
ಈ ಬಗ್ಗೆ ಎನ್ಸಿಪಿ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಫುಲ್ ಪಟೇಲ್ ಟ್ವಿಟ್ಟರ್ನಲ್ಲಿ ಮಾಹಿತಿ ಖಚಿತಪಡಿಸಿದ್ದಾರೆ. ನಮ್ಮ ರಾಷ್ಟ್ರೀಯ ಅಧ್ಯಕ್ಷ ಶರದ್ ಪವಾರ್ ಸಾಹೇಬ್ ಅವರ ಅನುಮೋದನೆಯೊಂದಿಗೆ ರಾಷ್ಟ್ರೀಯವಾದಿ ಮಹಿಳಾ ಕಾಂಗ್ರೆಸ್, ರಾಷ್ಟ್ರೀಯತಾವಾದಿ ಯುವ ಕಾಂಗ್ರೆಸ್ ಮತ್ತು ರಾಷ್ಟ್ರೀಯವಾದಿ ವಿದ್ಯಾರ್ಥಿ ಕಾಂಗ್ರೆಸ್ ಹೊರತುಪಡಿಸಿ ಪಕ್ಷದ ಎಲ್ಲಾ ರಾಷ್ಟ್ರೀಯ ಮಟ್ಟದ ಇಲಾಖೆಗಳು ಮತ್ತು ಕೋಶಗಳು ತಕ್ಷಣವೇ ಜಾರಿಗೆ ಬರುವಂತೆ ವಿಸರ್ಜಿಸಲ್ಪಟ್ಟಿವೆ ಎಂದು ತಿಳಿಸಿದ್ದಾರೆ.
ನ್ಯಾಶನಲಿಸ್ಟ್ ವುಮೆನ್ಸ್ ಕಾಂಗ್ರೆಸ್, ನ್ಯಾಶನಲಿಸ್ಟ್ ಯೂತ್ ಕಾಂಗ್ರೆಸ್ ಮತ್ತು ನ್ಯಾಶನಲಿಸ್ಟ್ ಸ್ಟೂಡೆಂಟ್ಸ್ ಕಾಂಗ್ರೆಸ್ ಮಾತ್ರ ಹಾಗೆ ಉಳಿಸಿಕೊಳ್ಳಲಾಗಿದೆ. ಈ ನಿರ್ಧಾರವು ಮಹಾರಾಷ್ಟ್ರ ಅಥವಾ ಯಾವುದೇ ಇತರ ರಾಜ್ಯ ಘಟಕಕ್ಕೆ ಅನ್ವಯಿಸುವುದಿಲ್ಲ ಎಂದು ಪಟೇಲ್ ಹೇಳಿದ್ದಾರೆ.
ಮೂಲಗಳ ಪ್ರಕಾರ, ಮಹಾರಾಷ್ಟ್ರದಲ್ಲಿ ಶಿವಸೇನೆ, ಕಾಂಗ್ರೆಸ್ ಮತ್ತು ಎನ್ಸಿಪಿ ಒಳಗೊಂಡಿರುವ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರದ ಇತ್ತೀಚಿನ ಪತನದ ನಂತರ ಎನ್ಸಿಪಿಯ ರಚನೆಯನ್ನು ಮರುಸಂಘಟಿಸುವ ಗುರಿಯೊಂದಿಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಎನ್ಸಿಪಿಯು ಶಿವಸೇನೆ ನೇತೃತ್ವದ ಸಮ್ಮಿಶ್ರ ಸರ್ಕಾರದ ಪ್ರಮುಖ ಪಕ್ಷವಾಗಿತ್ತು. ಮಹಾವಿಕಾಸ ಅಘಾಡಿ ಸರ್ಕಾರದಲ್ಲಿ ಜೂನ್ ಅಂತ್ಯದಲ್ಲಿ ಉದ್ಧವ್ ಠಾಕ್ರೆ ವಿರುದ್ಧ ಸಚಿವರಾಗಿದ್ದ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯ ಶಾಸಕರ ಒಂದು ಬಣ ಬಂಡಾಯವೆದ್ದಿತು. ಶಿವಸೇನೆ ಸಚಿವ ಏಕನಾಥ್ ಶಿಂಧೆ ಅವರ 10 ದಿನಗಳ ಬಂಡಾಯವು ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರವನ್ನು ಉರುಳಿಸಿದ ನಂತರ ಹೊಸ ಮಹಾರಾಷ್ಟ್ರ ಸರ್ಕಾರವು ಅಧಿಕಾರಕ್ಕೆ ಬಂದಿತು.
ಸರ್ಕಾರದ ಪರವಾಗಿ ತೀರ್ಪು
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಸೋಮವಾರ ತನಗೆ 18 ಶಿವಸೇನೆಯ ಸಂಸದರ ಬೆಂಬಲವಿದೆ. ಕೇವಲ 12 ಅಲ್ಲ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಒಬಿಸಿಗಳಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಲು ದೆಹಲಿಗೆ ಬಂದಿರುವ ಶಿಂಧೆ, ಸುಪ್ರೀಂಕೋರ್ಟ್ ತಮ್ಮ ಸರ್ಕಾರದ ಪರವಾಗಿ ತೀರ್ಪು ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಎಲ್ಲಾ ನಿಯಮಗಳನ್ನು ಅನುಸರಿಸಿದ್ದೇವೆ
ಶಿವಸೇನೆಯ ಸಂಸದರು ನಮ್ಮನ್ನು ಭೇಟಿ ಮಾಡುತ್ತಾರೆ. ನಮಗೆ ನ್ಯಾಯಾಂಗ ಮೇಲೆ ಅಚಲವಾದ ನಂಬಿಕೆ ಇದೆ. ಪ್ರಜಾಪ್ರಭುತ್ವದಲ್ಲಿ ಬಹುಮತಕ್ಕೆ (ಅಸೆಂಬ್ಲಿಯಲ್ಲಿ) ಮಹತ್ವವಿದೆ. ನಾವು ಎಲ್ಲಾ ನಿಯಮಗಳನ್ನು ಅನುಸರಿಸಿದ್ದೇವೆ ಎಂದು ಮುಖ್ಯಮಂತ್ರಿ ಏಕನಾಥ್ ಶಿಂಧೆ ಹೇಳಿದ್ದಾರೆ.
ಆಗಸ್ಟ್ 1 ರಂದು ಅರ್ಜಿ ವಿಚಾರಣೆ
ಮಹಾ ವಿಕಾಸ್ ಅಘಾಡಿಯನ್ನು (ಕಾಂಗ್ರೆಸ್-ಶಿವಸೇನೆ) ಕೆಳಗಿಳಿಸಿದ ನಂತರ ಮಹಾರಾಷ್ಟ್ರದಲ್ಲಿ ಶಿವಸೇನೆ ಪಕ್ಷದ ನಿಯಂತ್ರಣ ಮತ್ತು ಇತ್ತೀಚಿನ ರಾಜಕೀಯ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಶಿವಸೇನೆಯ ಎರಡೂ ಬಣಗಳು ಸಲ್ಲಿಸಿರುವ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಬುಧವಾರ ಆಗಸ್ಟ್ 1 ರಂದು ವಿಚಾರಣೆಗೆ ಮುಂದೂಡಿದೆ.
ಶಾಸಕರಿಗೆ ಅನರ್ಹತೆ ನೋಟಿಸ್
ಮಹಾರಾಷ್ಟ್ರದ ಅಸೆಂಬ್ಲಿ ಸ್ಪೀಕರ್ ಶಾಸಕರ ಅನರ್ಹತೆಯನ್ನು ಪ್ರಶ್ನಿಸಿ ಉದ್ಧವ್ ಠಾಕ್ರೆ ಬಣದ ಮನವಿಯನ್ನು ಆಲಿಸಲು ಸುಪ್ರೀಂ ಕೋರ್ಟ್ ಸಮ್ಮತಿಸಿದೆ. ಮಹಾರಾಷ್ಟ್ರ ಡೆಪ್ಯುಟಿ ಸ್ಪೀಕರ್ ತಮಗೆ ಕಳುಹಿಸಿರುವ ಅನರ್ಹತೆ ನೋಟಿಸ್ಗಳನ್ನು ಪ್ರಶ್ನಿಸಿ ಏಕನಾಥ್ ಶಿಂಧೆ ಬಣ ಸಲ್ಲಿಸಿರುವ ಅರ್ಜಿಯನ್ನು ಕೂಡ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲಿದೆ.
Recommended Video