ಎನ್ಸಿಪಿಗೆ ಮತ್ತೆ ಆಘಾತ, ಬಿಜೆಪಿ ಸೇರಲು ಮುಂದಾದ ಶಾಸಕ
ಮುಂಬೈ, ಜುಲೈ 29: ಶರದ್ ಪವಾರ್ ನೇತೃತ್ವದ ನ್ಯಾಷಲಿಸ್ಟ್ ಕಾಂಗ್ರೆಸ್ ಪಾರ್ಟಿ(NCP)ಗೆ ಮತ್ತೊಮ್ಮೆ ಆಘಾತವಾಗಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಬಲ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಅಕೊಲೆಯ ಎನ್ಸಿಪಿ ಶಾಸಕರು ಈಗ ಬಿಜೆಪಿ ಸೇರುತ್ತಿರುವುದಾಗಿ ಘೋಷಿಸಿದ್ದಾರೆ.
ಮಹಾರಾಷ್ಟ್ರದ ಅಹ್ಮದ್ ನಗರ ಜಿಲ್ಲೆಯ ಅಕೊಲೆ ಕ್ಷೇತ್ರದ ಶಾಸಕ ವೈಭವ್ ಪಿಚಾಡ್ ಅವರು ಆಡಳಿತಾರೂಢ ಬಿಜೆಪಿ ಸೇರುತ್ತಿರುವುದಾಗಿ ತಿಳಿಸಿದ್ದಾರೆ. ಎನ್ಸಿಪಿಯ ಹಿರಿಯ ಮುಖಂಡ, ಮಾಜಿ ಸಚಿವ ಮಧುಕರ್ ಪಿಚಾಡ್ ಅವರ ಪುತ್ರ ವೈಭವ್ ನಿರ್ಧಾರದಿಂದ ಎನ್ಸಿಪಿಗೆ ಮತ್ತೆ ಆಘಾತವಾಗಿದೆ.
ಕೆಲ ದಿನಗಳ ಹಿಂದೆ ಮುಂಬ ಎನ್ಸಿಪಿ ಘಟಕದ ಅಧ್ಯಕ್ಷ ಸಚಿನ್ ಆಹಿರ್ ಅವರು ಬಿಜೆಪಿ ಮಿತ್ರ ಪಕ್ಷ ಶಿವಸೇನಾ ಸೇರಿದ್ದರು. ಇದಾದ ಬಳಿಕ ಎನ್ಸಿಪಿ ರಾಜ್ಯ ಮಹಿಳಾ ಘಟಕದ ಮುಖ್ಯಸ್ಥೆ ಚಿತ್ರಾ ವಾಘ್ ಅವರು ಕೂಡಾ ಪಕ್ಷ ತೊರೆಯುತ್ತಿರುವುದಾಗಿ ಘೋಷಿಸಿದರು. ಚಿತ್ರಾ ಕೂಡಾ ಬಿಜೆಪಿ ಸೇರುವ ಸಾಧ್ಯತೆ ಹೆಚ್ಚಿದೆ.
ಈಗ ಬಿಜೆಪಿ ಸೇರಲು ಮುಂದಾಗಿರುವ ವೈಭವ್ ಪಿಟಿಐ ಜೊತೆ ಮಾತನಾಡಿ, "ಅಹ್ಮದ್ ನಗರದ ಅಕೊಲೆ ಕ್ಷೇತ್ರದ ನನ್ನ ಬೆಂಬಲಿಗರ ಜೊತೆ ಚರ್ಚೆ ನಡೆಸಿ ಈ ನಿರ್ಧಾರ ಕೈಗೊಂಡಿದ್ದೇನೆ, ಬಿಜೆಪಿ ಸೇರಿ, ರಾಜ್ಯದ ಅಭಿವೃದ್ಧಿಗಾಗಿ ಶ್ರಮಿಸಲು ಎಲ್ಲರೂ ಸಮ್ಮತಿಸಿದ್ದಾರೆ" ಎಂದರು.
ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಜೊತೆ ಕೂಡಾ ವೈಭವ್ ಮಾತುಕತೆ ನಡೆಸಿದ್ದು, ಕ್ಷೇತ್ರದ ಸಮಸ್ಯೆ ಬಗೆಹರಿಸಲು ಸೂಕ್ತ ಸೌಕರ್ಯ, ಸವಲತ್ತು ನೀಡುವ ಭರವಸೆ ಸಿಕ್ಕಿದೆ.