ಸಾವರ್ಕರ್ ಮೌಲ್ಯಗಳ ಆಧಾರದಲ್ಲಿ ರಾಷ್ಟ್ರ ನಿರ್ಮಾಣ: ನರೇಂದ್ರ ಮೋದಿ
ಮುಂಬೈ, ಅಕ್ಟೋಬರ್ 16: ವಿನಾಯಕ ದಾಮೋದರ ಸಾವರ್ಕರ್ ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ 'ಭಾರತ ರತ್ನ' ನೀಡದೆ ವಂಚಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗಾಗಿ ಅಕೋಲಾದಲ್ಲಿ ಬುಧವಾರ ನಡೆದ ಚುನಾವಣಾ ಪ್ರಚಾರದಲ್ಲಿ ಅವರು, ಅಂಬೇಡ್ಕರ್ ಅವರಿಗೆ ಭಾರತ ರತ್ನ ನೀಡಲು ನಿರಾಕರಿಸಿದ ಪಕ್ಷವೇ ಸಾವರ್ಕರ್ ಅವರನ್ನೂ ನಿಂದಿಸಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಸಾವರ್ಕರ್ಗೆ ಭಾರತ ರತ್ನ: ಬಿಜೆಪಿ ಪ್ರಣಾಳಿಕೆಯಲ್ಲಿ ಘೋಷಣೆ
ಸಾವರ್ಕರ್ ಅವರು ರೂಪಿಸಿ ಮೌಲ್ಯಗಳಿಂದಾಗಿ ನಾವು ರಾಷ್ಟ್ರ ನಿರ್ಮಾಣದ ತಳಹದಿಯನ್ನಾಗಿ ರಾಷ್ಟ್ರೀಯತೆಯನ್ನು ಬಳಸಿಕೊಳ್ಳುತ್ತಿದ್ದೇವೆ ಎಂದು ಮೋದಿ ಹೇಳಿದರು.
ಅಂಬೇಡ್ಕರ್ ಅವರಿಗೆ ಭಾರತ ರತ್ನ ನೀಡಲು ನಿರಾಕರಿಸಿದ ಜನರೇ ಸಾವರ್ಕರ್ ಅವರನ್ನು ಪ್ರತಿ ಹಂತದಲ್ಲಿಯೂ ನಿಂದಿಸಿ ಅವಮಾನಿಸಿದೆ ಎಂದು ಆರೋಪಿಸಿದರು.
ಮಹಾರಾಷ್ಟ್ರ ಚುನಾವಣೆಯಲ್ಲಿ ಕುಟುಂಬ ರಾಜಕೀಯದ ಬೇರುಗಳು
ವಿರೋಧಪಕ್ಷದವರನ್ನು 'ನಾಚಿಕೆಯಿಲ್ಲದವರು' ಎಂದು ಟೀಕಿಸಿದ ಪ್ರಧಾನಿ, ಅಂಬೇಡ್ಕರ್ ಅವರ ಸಂವಿಧಾನವನ್ನು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಕ್ನಲ್ಲಿ ಜಾರಿಮಾಡಲು ನಡೆಸಿದ ಪ್ರಯತ್ನಗಳಿಗೆ ಅಡ್ಡಿಪಡಿಸಲು ಪ್ರಯತ್ನಿಸಿದ್ದರು ಎಂದು ಹರಿಹಾಯ್ದರು.
ಮಹಾರಾಷ್ಟ್ರದ ಮಕ್ಕಳ ಜೀವ ತೆತ್ತಿಲ್ಲವೇ?
'ರಾಜಕೀಯ ಲಾಭಕ್ಕಾಗಿ ಕೆಲವರು, ಮಹಾರಾಷ್ಟ್ರ ಚುನಾವಣೆಗೂ 370ನೇ ವಿಧಿಗೂ ಸಂಬಂಧವಿಲ್ಲ ಎನ್ನುತ್ತಿದ್ದಾರೆ. ಅಂದರೆ ಜಮ್ಮು ಮತ್ತು ಕಾಶ್ಮೀರದ ವಿಚಾರಕ್ಕೆ ಮಹಾರಾಷ್ಟ್ರಕ್ಕೆ ಯಾವ ಸಂಬಂಧವೂ ಇಲ್ಲ ಎಂದು. ಅಂತಹ ಜನರಿಗೆ ಹೇಳಲು ಬಯಸುತ್ತಿದ್ದೇನೆ, ಜಮ್ಮು ಮತ್ತು ಕಾಶ್ಮೀರ ಹಾಗೂ ಅದರ ಜನರೂ ತಾಯಿ ಭಾರತಿಯ ಮಕ್ಕಳು. ಕಾಶ್ಮೀರ ಕಣಿವೆಯಲ್ಲಿ ಶಾಂತಿ ನೆಲೆಸಬೇಕೆಂಬ ಸಲುವಾಗಿ ಈ ಮಣ್ಣಿನ ಮಕ್ಕಳು ತಮ್ಮ ಜೀವ ಅರ್ಪಿಸಿಲ್ಲವೇ? ತಾಯ್ನಾಡಿಗಾಗಿ ತಮ್ಮ ಅಮೂಲ್ಯ ಜೀವ ತೆತ್ತ ಮಹಾರಾಷ್ಟ್ರದ ಮಕ್ಕಳ ಬಗ್ಗೆ ನನಗೆ ಹೆಮ್ಮೆಯಿದೆ' ಎಂದರು.
ರಾಜಕೀಯ ಸ್ವಾರ್ಥದ ಹೇಳಿಕೆ
'370ನೇ ವಿಧಿಯನ್ನು ರದ್ದುಪಡಿಸಿರುವುದನ್ನು ಪ್ರಶ್ನಿಸಲು ಮತ್ತು ಅದು ಮಹಾರಾಷ್ಟ್ರ ಚುನಾವಣೆಗೆ ಅದು ಹೇಗೆ ಸಂಬಂಧಿಸುತ್ತದೆ ಎಂದು ಕೇಳಲು ಅವರಿಗೆ ಎಷ್ಟು ಧೈರ್ಯ?' ಎಂದು ಕಿಡಿಕಾರಿದರು. ಛತ್ರಪತಿ ಶಿವಾಜಿಯ ನಾಡಿನಲ್ಲಿ ಇಂತಹ ರಾಜಕೀಯ ಸ್ವಾರ್ಥದ ಹೇಳಿಕೆಗಳನ್ನು ನೋಡಿ ಅಚ್ಚರಿಯಾಗುತ್ತಿದೆ ಎಂದು ಹೇಳಿದರು.
ಇದು ಹಳೆಯ ಕಾಂಗ್ರೆಸ್ ಅಲ್ಲ
ಕಾಂಗ್ರೆಸ್ ಪಕ್ಷವು ತನ್ನ ಕೊನೆಯ ಉಸಿರು ತೆಗೆದುಕೊಳ್ಳುತ್ತಿದೆ. ಅದು ರಾಷ್ಟ್ರ ಭಕ್ತಿಯನ್ನು ಕುಟುಂಬದ ಭಕ್ತಿ ಎಂದೇ ಪರಿಗಣಿಸಿದೆ ಎಂದು ಯಾರ ಹೆಸರೂ ಪ್ರಸ್ತಾಪಿಸದೆ ಹೇಳಿದರು.
ಪಕ್ಷದ ಕಾರ್ಯಕರ್ತರಿಗೆ ಕಾಂಗ್ರೆಸ್ ರಾಷ್ಟ್ರೀಯತೆಯನ್ನು ಬೋಧಿಸುವ ತರಗತಿ ತೆಗೆದುಕೊಳ್ಳಲಿದೆ ಎಂದು ಎಲ್ಲಿಯೋ ಓದಿದೆ. ನೀವು ನಗುತ್ತೀರೋ ಅಥವಾ ಅಳುತ್ತೀರೋ ನನಗೆ ಗೊತ್ತಿಲ್ಲ. ಆದರೆ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದ ಕಾಂಗ್ರೆಸ್ ಇದಂತೂ ಅಂತೂ ಅಲ್ಲ ಎಂಬುದನ್ನು ಇದು ಸಾಬೀತುಪಡಿಸಿದೆ ಎಂದು ಲೇವಡಿ ಮಾಡಿದರು.
ಮಹಾರಾಷ್ಟ್ರ ಚುನಾವಣೆ: ಬಿಜೆಪಿ ಮೈತ್ರಿಕೂಟಕ್ಕೆ ಸಿಹಿ ಸುದ್ದಿ ಕೊಟ್ಟ ಸಮೀಕ್ಷೆ
'ಭ್ರಷ್ಟ ಮೈತ್ರಿಕೂಟ'
ಮಹಾರಾಷ್ಟ್ರವು ಶೌರ್ಯವಂತರ ಭೂಮಿ. ಇಲ್ಲಿನ ಜನರು ದೇಶವನ್ನು ಮುನ್ನಡೆಸಲು ಮಾರ್ಗದರ್ಶನ ನೀಡಿದ್ದಾರೆ ಎಂದ ಮೋದಿ, ಕಾಂಗ್ರೆಸ್-ಎನ್ಸಿಪಿ ಮೈತ್ರಿಕೂಟವನ್ನು 'ಭ್ರಷ್ಟ ಮೈತ್ರಿಕೂಟ' ಎಂದು ಟೀಕಿಸಿದರು. ಈ ಪಕ್ಷಗಳ ಮತ ಬ್ಯಾಂಕ್ ರಾಜಕಾರಣ ರಾಜ್ಯಕ್ಕೆ ತೀವ್ರವಾಗಿ ಕೆಡುಕುಂಟುಮಾಡಿವೆ. ಕಾಂಗ್ರೆಸ್-ಎನ್ಸಿಪಿ ಆಡಳಿತಾವಧಿಯಲ್ಲಿ ರೈಲು, ಬಸ್ಗಳು, ಕಟ್ಟಡಗಳಲ್ಲಿ ಯಾವಾಗಲೂ ಬಾಂಬ್ ಸ್ಫೋಟಗಳಾಗುತ್ತಿದ್ದವು ಎಂದರು.
ಕಾಂಗ್ರೆಸ್-ಎನ್ಸಿಪಿಯನ್ನು ಪ್ರಶ್ನಿಸಬೇಕು
'ಒಂದು ಕಾಲದಲ್ಲಿ ಮಹಾರಾಷ್ಟ್ರದಲ್ಲಿ ಭಯೋತ್ಪಾದನೆ ಹಾಗೂ ದ್ವೇಷದ ಘಟನೆಗಳು ಸಾಮಾನ್ಯವಾಗಿದ್ದವು. ತಪ್ಪಿತಸ್ಥರು ತಪ್ಪಿಸಿಕೊಂಡು ಬೇರೆ ಬೇರೆ ದೇಶಗಳಲ್ಲಿ ನೆಲೆಸುತ್ತಿದ್ದರು. ಇದೆಲ್ಲಾ ಹೇಗಾದವು? ಅವರು ಹೇಗೆ ಪಲಾಯನ ಮಾಡಿದರು? ಎಂದು ಆಗ ಅಧಿಕಾರದಲ್ಲಿದ್ದವರನ್ನು ಭಾರತ ಪ್ರಶ್ನಿಸಲು ಬಯಸುತ್ತಿದೆ. ರಾಷ್ಟ್ರೀಯವಾದ ಮತ್ತು ದೇಶಭಕ್ತಿ ಮಹಾರಾಷ್ಟ್ರದ ಉತ್ತುಂಗದ ಭಾವನೆಗಳು. ದುರದೃಷ್ಟವಶಾತ್ ಕಾಂಗ್ರೆಸ್ ಮತ್ತು ಎನ್ಸಿಪಿ ನಾಯಕರು ಈ ಮೌಲ್ಯಗಳನ್ನು ಮರೆತಿದ್ದಾರೆ' ಎಂದು ಹೇಳಿದರು.