ಶಿವಸೇನೆಯ ಸಂಜಯ್ ರಾವತ್ ಗೆ ಆಂಜಿಯೋಪ್ಲಾಸ್ಟಿ ಚಿಕಿತ್ಸೆ
ಮುಂಬೈ, ನವೆಂಬರ್ 12: ಎದೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ಶಿವಸೇನೆ ಮುಖಂಡ ಸಂಜಯ್ ರಾವತ್ ಅವರು ಆಂಜಿಯೋಪ್ಲಾಸ್ಟಿ ಚಿಕಿತ್ಸೆಗೊಳಗಾಗಿದ್ದಾರೆ.
ಸೋಮವಾರ ಮಧ್ಯಾಹ್ನ ಎದೆನೋವಿನಿಂದ ಬಳಲುತ್ತಿದ್ದ ಅವರನ್ನು ಮುಂಬೈಯ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೃದಯದ ರಕ್ತನಾಳದಲ್ಲಿ ಬ್ಲಾಕೇಜ್ ಗಳು ಇದ್ದಿದ್ದರಿಂದ ಅವರಿಗೆ ಆಂಜಿಯೋಪ್ಲಾಸ್ಟಿ ಚಿಕಿತ್ಸೆ ನೀಡಲಾಗಿದೆ.
ಈಗಷ್ಟೇ ಚೇತರಿಸಿಕೊಳ್ಳುತ್ತಿರುವ ಅವರು ಆಸ್ಪತ್ರೆಯಿಂದಲೇ ಟ್ವೀಟ್ ಮಾಡಿದ್ದು, ಹಿಂದಿ ಪದ್ಯದ ಮೂಲಕ ಮಹಾರಾಷ್ಟ್ರ ರಾಜಕೀಯದಲ್ಲಿ ಶಿವಸೇನೆ ನಡೆ ಏನು ಎಂಬುದನ್ನು ಪರೋಕ್ಷವಾಗಿ ತಿಳಿಸಿದ್ದಾರೆ.
"ನಿಮಗೆ ಅಲೆಗಳ ಬಗ್ಗೆ ಭಯವಿದ್ದರೆ, ನೀವು ಸಮುದ್ರ ದಾಟುವುದಕ್ಕೆ ಸಾಧ್ಯವಿಲ್ಲ. ಯಾರು ಪ್ರಯತ್ನ ಪಡುತ್ತಾರೋ, ಅವರಿಗೆ ಖಂಡಿತ ಸೋಲಾಗುವುದಿಲ್ಲ" ಎಂದು ಅವರು ಟ್ವೀಟ್ ಮಾಡಿದ್ದಾರೆ.
ಶಿವಸೇನೆ ಸೋಮವಾರ ಸಂಜೆಯ ಒಳಗೆ ಸರ್ಕಾರ ರಚಿಸಲು ರಾಜ್ಯಪಾಲರು ನೀಡಿದ್ದ ಗಡುವಿಗೂ ಮುನ್ನ ಸರ್ಕಾರ ರಚಿಸದ ಕಾರಣ ಮಂಗಳವಾರ ಸಂಜೆ 8:30 ರ ಒಳಗೆ ಸರ್ಕಾರ ರಚಿಸಲು ಎನ್ ಸಿಪಿಯನ್ನು ಆಹ್ವಾನಿಸಲಾಗಿದೆ. ಎನ್ ಸಿಪಿ-ಕಾಂಗ್ರೆಸ್ ಪಕ್ಷಗಳು ಇಂದು 2 ಗಂಟೆಗೆ ಸಭೆ ನಡೆಸಲಿದ್ದು, ಸರ್ಕಾರ ರಚನೆ ಮತ್ತು ಶಿವಸೇನೆಯೊಂದಿಗೆ ಮೈತ್ರಿ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಿವೆ.