Breaking: ಸಂಜಯ್ ರಾವುತ್ಗೆ ಆ.22ರ ವರೆಗೆ ನ್ಯಾಯಾಂಗ ಬಂಧನ
ಮುಂಬೈ, ಆಗಸ್ಟ್ 08: ಜಾರಿ ನಿರ್ದೇಶನಾಲಯದ ವಶದಲ್ಲಿರುವ ಶಿವಸೇನಾ ಸಂಸದ ಸಂಜಯ್ ರಾವುತ್ ಅವರನ್ನು ಮುಂಬೈ ನ್ಯಾಯಾಲಯ ಆಗಸ್ಟ್ 22ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಪತ್ರಾ ಚಾವ್ಲ್ ಜಮೀನು ಪ್ರಕರಣದಲ್ಲಿ ಶಿವಸೇನಾ ಸಂಸದ ಸಂಜಯ್ ರಾವುತ್ ಅವರ ಕಸ್ಟಡಿ ಸೋಮವಾರ ಕೊನೆಗೊಳ್ಳುತ್ತಿದ್ದಂತೆ ಇಡಿ ಅಧಿಕಾರಿಗಳು ಮುಂಬೈನ ಇಡಿ ಕಚೇರಿಯಿಂದ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಕರೆ ತಂದಿದ್ದರು.
ಜಾರಿ ನಿರ್ದೇಶನಾಲಯದ ಕಸ್ಟಡಿಯಲ್ಲಿ ಸಂಜಯ್ ರಾವುತ್ ತೆಗೆದುಕೊಳ್ಳುತ್ತಿದ್ದ ಎಲ್ಲಾ ಔಷಧಗಳನ್ನು ನ್ಯಾಯಾಂಗ ಬಂಧನದಲ್ಲಿರುವಾಗಲೂ ತೆಗೆದುಕೊಳ್ಳಲು ನ್ಯಾಯಾಲಯವು ಅನುಮತಿ ನೀಡಿದೆ.
ಶಿವಸೇನೆ ಸಂಸದ ಸಂಜಯ್ ರಾವುತ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ ನಂತರ ಅವರ ವಕೀಲರ ತಂಡ ಸೋಮವಾರ ಮತ್ತೆ ಜಾಮೀನು ಅರ್ಜಿ ಸಲ್ಲಿಸುತ್ತಿಲ್ಲ.
ಸೋಮವಾರ (ಆ. 01) ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಮುಂಬೈ ಕೋರ್ಟ್ಗೆ ಸಂಜಯ್ ರಾವುತ್ ಹಾಜರುಪಡಿಸಿದ್ದರು. ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ನೀಡುವಂತೆ ಮನವಿ ಮಾಡಿದ್ದರು. ಕೋರ್ಟ್ ಆಗಸ್ಟ್ 4ರ ತನಕ ಇಡಿ ವಶಕ್ಕೆ ನೀಡಿತ್ತು. ಬಳಿಕ ಮತ್ತಷ್ಟು ವಿಚಾರಣೆ ನಡೆಸುವುದಕ್ಕಾಗಿ ಆಗಸ್ಟ್ 08 ರ ವರೆಗೆ ಇಡಿ ಕಸ್ಟಡಿಗೆ ನೀಡಿತ್ತು.
ಸೋಮವಾರ ಇಡಿ ಕಸ್ಟಡಿ ಮುಗಿದ ಕಾರಣ ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ಜಾರಿ ನಿರ್ದೇಶನಾಲಯ ಅಧಿಕಾರಿಗಳು ಪಾತ್ರಾ ಚಾವ್ಲ್ ಹಗರಣಕ್ಕೆ ಸಂಬಂಧಿಸಿದಂತೆ ಸಂಜಯ್ ರಾವುತ್ರನ್ನು ವಿಚಾರಣೆ ನಡೆಸುತ್ತಿದೆ. ಎರಡು ಬಾರಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದಾಗ ಸಂಜಯ್ ರಾವುತ್ ಹಾಜರಾಗಿರಲಿಲ್ಲ. ಬಳಿಕ ಅವರ ಮುಂಬೈ ನಿವಾಸದ ಮೇಲೆ ದಾಳಿ ಮಾಡಿದ್ದ ಇಡಿ, ಇಡೀ ದಿನ ಶೋಧ ನಡೆಸಿ ಸಂಜೆ ವೇಳೆಗೆ ಅವರನ್ನು ಬಂಧಿಸಿತ್ತು.
ಪಾತ್ರಾ ಚಾವ್ಲ್ ಹಗರಣದಲ್ಲಿ 1034 ಕೋಟಿ ರೂ. ಅಕ್ರಮ ಹಣ ವರ್ಗಾವಣೆ ನಡೆದಿದೆ ಎಂಬ ಆರೋಪವಿದ್ದು, ಇಡಿ ಈ ಕುರಿತು ತನಿಖೆ ಮಾಡುತ್ತಿದೆ. ಇದೇ ಹಗರಣದಲ್ಲಿ ಸಂಜಯ್ ರಾವುತ್ ಪತ್ನಿಗೂ ಸಮನ್ಸ್ ನೀಡಲಾಗಿತ್ತು.
ಸೋಮವಾರ ಶಿವಸೇನಾ ಸಂಸದ ಸಂಜಯ್ ರಾವತ್ ಪತ್ನಿ ವರ್ಷಾ ರಾವುತ್ ಮುಂಬೈನ ಇಡಿ ಕಚೇರಿಗೆ ಆಗಮಿಸಿದ್ದಾರೆ. ಪತ್ರಾ ಚಾವ್ಲ್ ಜಮೀನು ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ತನಿಖಾ ಸಂಸ್ಥೆ ಪ್ರಶ್ನಿಸಲಿದೆ.
Recommended Video