Video: ಶರದ್ ಪವಾರ್ ಪುತ್ರಿ ಸುಪ್ರಿಯಾ ಸುಳೆ ಜೊತೆ ಸಂಸದ ಸಂಜಯ್ ರಾವತ್ ಡ್ಯಾನ್ಸ್
ಮುಂಬೈ ನವೆಂಬರ್ 29: ರಾಜಕಾರಣಿಗಳು ಕಾರ್ಯಕ್ರಮಗಳಲ್ಲಿ ಅಥವಾ ಸಮಾರಂಭಗಳಲ್ಲಿ ಮೈ ಚಳಿ ಬಿಟ್ಟು ಕುಣಿಯುವ ವಿಡಿಯೋಗಳನ್ನು ನಾವು ಸಾಕಷ್ಟು ನೋಡಿದ್ದೇವೆ. ಈ ಬಾರಿ ಇಂಥದ್ದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಮಹಾರಾಷ್ಟ್ರದ ಪ್ರಬಲ ರಾಜಕಾರಣಿಗಳು ಹಾಡಿಗೆ ನೃತ್ಯ ಮಾಡುವ ಅಂತಹ ಒಂದು ವಿಡಿಯೋ ಇಲ್ಲಿದೆ.
ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ಪುತ್ರಿ ಹಾಗೂ ಬಾರಾಮತಿ ಸಂಸದೆ ಸುಪ್ರಿಯಾ ಸುಳೆ ಅವರು ಶಿವಸೇನಾ ಸಂಸದ ಸಂಜಯ್ ರಾವತ್ ಅವರ ಮಗಳ ವಿವಾಹ ಸಮಾರಂಭದಲ್ಲಿ ಡ್ಯಾನ್ಸ್ ಮಾಡುತ್ತಿರುವ ದೃಶ್ಯ ಇದೀಗ ಅಂತರ್ಜಾಲದಲ್ಲಿ ವೈರಲ್ ಆಗಿದೆ. ರಾವುತ್ ಅವರ ಮಗಳು ಪೂರ್ವಶಿ ರಾವತ್ ಅವರ ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದ ಅತಿಥಿಯೊಬ್ಬರು ವಿಡಿಯೋವನ್ನು ಸೆರೆಹಿಡಿದಿದ್ದಾರೆ. ಇದನ್ನು ಅನೇಕ ರಾಜಕಾರಣಿಗಳು ಮೆಚ್ಚಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಪೌರಕಾರ್ಮಿಕ ರಾಜೇಶ್ ನಾರ್ವೇಕರ್ ಅವರ ಪುತ್ರ ಮಲ್ಹಾರ್ ನಾರ್ವೇಕರ್ ಅವರೊಂದಿಗೆ ಪೂರ್ವಶಿ ರಾವತ್ ವಿವಾಹವಾಗಿದ್ದಾರೆ. ವೃತ್ತಿಯಲ್ಲಿ ಐಟಿ ಇಂಜಿನಿಯರ್ ಆಗಿರುವ ಅವರು ಪ್ರಸ್ತುತ ವ್ಯಾಪಾರ ನಡೆಸುತ್ತಿದ್ದರೆ, ಪೂರ್ವಶಿ ಆಭರಣ ವಿನ್ಯಾಸಕಿಯಾಗಿದ್ದಾರೆ.
Sanjay Raut saheb and Supriya Tai are dancing together 🔥 pic.twitter.com/JPw3ZQb4Gy
— Shivani Achrekar (@shivaniACH) November 28, 2021
ಸುಳೆ ಅವರು ತಮ್ಮ ಸಾಮಾಜಿಕ ಮಾಧ್ಯಮ ಪುಟಗಳಲ್ಲಿ ಮದುವೆಯ ಪೂರ್ವ ಕಾರ್ಯಕ್ರಮದ ಕೆಲವು ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. ಫೋಟೋಗಳಲ್ಲಿ ಅವರು ರಾವತ್ ಕುಟುಂಬದೊಂದಿಗೆ ಪೋಸ್ ನೀಡಿದ್ದಾರೆ. ಮುಂಬೈನ ದುಬಾರಿ ಹೋಟೆಲ್ನಲ್ಲಿ ಸೋಮವಾರ ಮದುವೆ ನಡೆಯಲಿದೆ. ಮದುವೆ ಸಮಾರಂಭದಲ್ಲಿ ಆಡಳಿತ ಮತ್ತು ವಿರೋಧ ಪಕ್ಷದ ನಾಯಕರು ಭಾಗವಹಿಸುವ ಸಾಧ್ಯತೆ ಇದೆ.
ಇನ್ನೂ ಭಾನುವಾರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ (MVA) ಸರ್ಕಾರವು ತನ್ನ ಎರಡನೇ ವಾರ್ಷಿಕೋತ್ಸವವನ್ನು ಆಚರಿಸಿತು. ಈ ಸಂದರ್ಭದಲ್ಲಿ ಸಂಜಯ್ ರಾವತ್, ಪ್ರತಿಪಕ್ಷ ನಾಯಕ ದೇವೇಂದ್ರ ಫಡ್ನವಿಸ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಚಂದ್ರಕಾಂತ್ ಪಾಟೀಲ್ ವಿರುದ್ಧ ವಾಗ್ದಾಳಿ ನಡೆಸಿ ಸಿಎಂ ನಾಯಕತ್ವವನ್ನು ಶ್ಲಾಘಿಸಿದರು.
ಮಾರ್ಚ್ ವೇಳೆಗೆ ಮಹಾರಾಷ್ಟ್ರ ಸರ್ಕಾರ ಬದಲಾಗಲಿದೆ ಎಂದು ಹೇಳುವ ಕೇಂದ್ರ ಸಚಿವ ನಾರಾಯಣ ರಾಣೆ ಅವರ ಇತ್ತೀಚಿನ ಹೇಳಿಕೆಯನ್ನು ಉಲ್ಲೇಖಿಸಿ ಮಾತನಾಡಿದ ಅವರು, ಮಹಾ ವಿಕಾಸ್ ಅಘಾಡಿ ಸರ್ಕಾರವನ್ನು ಉರುಳಿಸಲು ವಿರೋಧ ಪಕ್ಷವು ಹಲವಾರು ಬಾರಿ ಪ್ರಯತ್ನಿಸಿತು. ಆದರೆ ಅದರ ಪ್ರಯತ್ನಗಳಲ್ಲಿ ವಿಫಲವಾಗಿದೆ ಎಂದು ಅವರು ಹೇಳಿದರು. "ಒಕ್ಷ ಬೀಳಿಸಲು ಹೊಸ ದಿನಾಂಕಗಳನ್ನು ಎದುರು ನೋಡುತ್ತಿರುವುದು ತಮಾಷೆಯಾಗಿದೆ" ಎಂದು ಅವರು ವ್ಯಂಗ್ಯವಾಡಿದ್ದಾರೆ.
ನವೆಂಬರ್ 28 ರಂದು ಎಂವಿಎ ತನ್ನ ಎರಡನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವಾಗ, ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅವರು ಸರ್ಕಾರಕ್ಕೆ ನಿರಂತರ ಬೆಂಬಲಕ್ಕಾಗಿ ರಾಜ್ಯದ ಜನರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಲು ಟ್ವಿಟ್ ಮಾಡಿದ್ದಾರೆ. "ಮಹಾರಾಷ್ಟ್ರದ ಜನರು ತಮ್ಮ ಸರ್ಕಾರವನ್ನು ಬೆಂಬಲಿಸಿದ್ದಕ್ಕಾಗಿ ನಾನು ಹೃತ್ಪೂರ್ವಕವಾಗಿ ಧನ್ಯವಾದ ಹೇಳುತ್ತೇನೆ! ಇನ್ನೂ ಎಷ್ಟೇ ಬಿಕ್ಕಟ್ಟುಗಳು ಬಂದರೂ ರಾಜ್ಯ ಸರ್ಕಾರವು ಸಾಮಾನ್ಯ ಜನರ ಕಲ್ಯಾಣಕ್ಕಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತದೆ" ಎಂದು ಅವರು ಟ್ವೀಟ್ ಮಾಡಿದ್ದಾರೆ.
ತಮ್ಮ ಸರ್ಕಾರದ ಎರಡು ವರ್ಷಗಳ ಅವಧಿಯ ಬಹುಪಾಲು ಭಾಗವನ್ನು COVID-19 ನಿರ್ವಹಣೆಗೆ ಮೀಸಲಿಡಲಾಗಿತ್ತು. ಮತ್ತು ಮಹಾ ವಿಕಾಸ್ ಅಘಾಡಿ (MVA) ಬಿಕ್ಕಟ್ಟನ್ನು ಅವಕಾಶವನ್ನಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗಿದೆ ಎಂದು ಠಾಕ್ರೆ ಭಾನುವಾರ ಹೇಳಿದ್ದಾರೆ. ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಯ ನಂತರ ಖಾಸಗಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವ ಠಾಕ್ರೆ (61) ತಮ್ಮ ಎರಡು ವರ್ಷಗಳ ಅಧಿಕಾರವನ್ನು ಪೂರ್ಣಗೊಳಿಸಿದ ಹೇಳಿಕೆಯಲ್ಲಿ, ತಮ್ಮ ಸರ್ಕಾರದ ಎಲ್ಲಾ ಪ್ರಯತ್ನಗಳಲ್ಲಿ ಬೆಂಬಲಿಸಿದ್ದಕ್ಕಾಗಿ ಜನರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.