ಪರಿಸ್ಥಿತಿ ಕೈ ಮೀರಿದರೆ ನಮ್ಮನ್ನು ದೂಷಿಸಬೇಡಿ; ಶಿವಸೇನೆ ಮುಖಂಡ ರಾವತ್ ಎಚ್ಚರಿಕೆ
ಮುಂಬೈ, ಮಾರ್ಚ್ 13: ಕರ್ನಾಟಕದ ಬೆಳಗಾವಿಯಲ್ಲಿ ನೆಲೆಸಿರುವ ಮರಾಠಿ ಜನರು ಬಲಿಪಶುಗಳಾಗಿದ್ದಾರೆ. ಅವರ ಸಮಸ್ಯೆಯನ್ನು ಅಂತ್ಯಗೊಳಿಸಲು ಮಹಾರಾಷ್ಟ್ರದಿಂದ ಸರ್ವಪಕ್ಷ ನಿಯೋಗ ಕರ್ನಾಟಕಕ್ಕೆ ಭೇಟಿ ನೀಡಬೇಕು. ಅವರಿಗಾಗುತ್ತಿರುವ ತೊಂದರೆಗಳ ಕುರಿತು ಚರ್ಚಿಸಬೇಕು ಎಂದು ಶಿವಸೇನೆ ಮುಖಂಡ ಸಂಜಯ್ ರಾವತ್ ಆಗ್ರಹಿಸಿದ್ದಾರೆ.
ಶನಿವಾರ ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದವನ್ನು ಪ್ರಸ್ತಾಪಿಸಿದ ಅವರು, ಎಂಟು ದಿನಗಳಲ್ಲಿ ಬೆಳಗಾವಿಯಲ್ಲಿರುವ ಶಿವಸೇನೆ ಕಾರ್ಯಕರ್ತರ ಮೇಲೆ ಹಾಗೂ ಬೆಳಗಾವಿಯಲ್ಲಿನ ಪಕ್ಷದ ಕಚೇರಿಯ ಮೇಲೂ ದಾಳಿ ನಡೆದಿದೆ. ಕನ್ನಡಪರ ಸಂಘಟನೆಗಳು ಈ ಹಲ್ಲೆ ನಡೆಸಿವೆ ಎಂದು ದೂರಿದರು. ಮುಂದೆ ಓದಿ...
"ನಮ್ಮದು ರಾಜಕೀಯ ಪ್ರತಿಕ್ರಿಯೆಯಾಗಿರುತ್ತದೆ"
ಬೆಳಗಾವಿ ಭಾರತದ ಭಾಗ. ಮಹಾರಾಷ್ಟ್ರ-ಕರ್ನಾಟಕದ ಈ ವಿವಾದ ಭಾಷಾ ವಿವಾದ. ಇದು ಬಹು ಸಮಯದವರೆಗೂ ಮುಂದುವರೆಯಲು ಬಿಡಬಾರದು ಹಾಗೂ ಇದು ಕರ್ನಾಟಕ ಸರ್ಕಾರದ ಜವಾಬ್ದಾರಿ ಕೂಡ ಹೌದು. ಪರಿಸ್ಥಿತಿ ನಮ್ಮ ಕೈ ಮೀರಿ ಹೋದರೆ, ಶಿವಸೇನೆ, ಮಹಾರಾಷ್ಟ್ರ ಸರ್ಕಾರವನ್ನು ಹೊಣೆ ಮಾಡುವಂತಿಲ್ಲ. ನಮ್ಮಿಂದ ಬರುವುದು ಅಧೀಕೃತ ಪ್ರತಿಕ್ರಿಯೆಯಾಗಿರುವುದಿಲ್ಲ, ರಾಜಕೀಯವಾಗಿರುತ್ತದೆ ಎಂದಿದ್ದಾರೆ.
ಕನ್ನಡ ಧ್ವಜ ತೆರವುಗೊಳಿಸಲು ಆಗ್ರಹಿಸಿ ಮಾರ್ಚ್ 8ರಂದು ಎಂಇಎಸ್ ಪ್ರತಿಭಟನೆ
"ಬೆಳಗಾವಿ ಗಲಭೆಗೆ ಸರ್ಕಾರ ಕುರುಡಾಗಿದೆ"
ಬೆಳವಾವಿಯಲ್ಲಿ ಇಂಥ ಪರಿಸ್ಥಿತಿ ಸೃಷ್ಟಿಯಾಗಲು ಕೇಂದ್ರ ಸರ್ಕಾರ ಕಾರಣ ಎಂದು ಆರೋಪಿಸಿರುವ ರಾವತ್, ಪಶ್ಚಿಮ ಬಂಗಾಳದಲ್ಲಿ ಹಾಗೂ ಚುನಾವಣೆ ನಡೆಯುತ್ತಿರುವ ರಾಜ್ಯಗಳಲ್ಲಿ ನಡೆಯುತ್ತಿರುವ ಗಲಭೆ ಬಿಜೆಪಿಗೆ ಕಾಣುತ್ತಿದೆ. ಆದರೆ ಬೆಳಗಾವಿಯಲ್ಲಿ ನಡೆಯುತ್ತಿರುವ ಈ ಗಲಭೆಗೆ ಸರ್ಕಾರ ಕುರುಡಾಗಿದೆ ಎಂದು ಆರೋಪಿಸಿದ್ದಾರೆ.
"ಕನ್ನಡ ಪರ ಸಂಘಟನೆ ಬಿಜೆಪಿ ಪ್ರಾಯೋಜಿತ"
ಮಹಾರಾಷ್ಟ್ರ ಈ ವಿಷಯದಲ್ಲಿ ಗಟ್ಟಿ ನಿಲುವು ತಳೆಯಬೇಕು. ಇಲ್ಲಿನ ಸರ್ವ ಪಕ್ಷ ನಿಯೋಗವು ಬೆಳಗಾವಿಗೆ ಶೀಘ್ರವೇ ಭೇಟಿ ನೀಡಿ, ಅಲ್ಲಿ ಕಷ್ಟಪಡುತ್ತಿರುವ ಮರಾಠಿ ಜನರೊಂದಿಗೆ ನಮ್ಮ ಬೆಂಬಲ, ಏಕತೆಯನ್ನು ಪ್ರದರ್ಶಿಸಬೇಕು ಎಂದು ಹೇಳಿದ್ದಾರೆ. ಜೊತೆಗೆ ಶಿವಸೇನೆ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸುತ್ತಿರುವ ಕನ್ನಡ ಪರ ಸಂಘಟನೆಗಳು ಬಿಜೆಪಿ ಪ್ರಾಯೋಜಿತವಾಗಿವೆ ಎಂದು ಆರೋಪಿಸಿದ್ದಾರೆ.
"ಬಂಗಾಳದ ಹುಲಿ"ಗೆ ನಮ್ಮ ಬಲ, ಬೆಂಬಲ ಎಂದು ಘೋಷಿಸಿದ ಶಿವಸೇನೆ
ಕೇಂದ್ರದ ಮಧ್ಯ ಪ್ರವೇಶಕ್ಕೆ ಆಗ್ರಹ
ಬಿಜೆಪಿಯ ಯಾರೊಬ್ಬರೂ ಈ ವಿವಾದದ ಬಗ್ಗೆ ಮಾತನಾಡುತ್ತಿಲ್ಲ. ನಾವು ಕೂಡ ಹೀಗೇ ನಡೆದುಕೊಳ್ಳಬಹುದು. ಆದರೆ ಎರಡು ರಾಜ್ಯಗಳ ನಡುವೆ ಬಿರುಕು ಮೂಡಿಸಲು ನಮಗೆ ಇಷ್ಟವಿಲ್ಲ. ಈ ವಿಷಯದಲ್ಲಿ ಕೇಂದ್ರ ಮಧ್ಯ ಪ್ರವೇಶಿಸಬೇಕು ಎಂದು ಅವರು ಆಗ್ರಹಿಸಿದ್ದು, ಗಡಿ ವಿವಾದ ನಡೆಯುತ್ತಿದ್ದರೂ ಕರ್ನಾಟಕ ಬೆಳಗಾವಿಯಲ್ಲಿ ವಿಧಾನ ಭವನ ನಿರ್ಮಿಸಿ ಅದನ್ನು ರಾಜ್ಯದ ಎರಡನೇ ರಾಜಧಾನಿಯನ್ನಾಗಿ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.