ಐಎನ್ಎಸ್ ವಿಕ್ರಾಂತ್ ಅಭಿಯಾನದಲ್ಲಿ 50 ಕೋಟಿ ರೂ. ದುರ್ಬಳಕೆ ಆಯಿತೇ?
ಮುಂಬೈ, ಏಪ್ರಿಲ್ 6: ಮಹಾರಾಷ್ಟ್ರದಲ್ಲಿ 1034 ಕೋಟಿ ಮೌಲ್ಯದ ಪತ್ರ ಚೌಲ್ ಭೂ ಹಗರಣಕ್ಕೆ ಸಂಬಂಧಿಸಿದಂತೆ ತಮ್ಮ ಆಸ್ತಿ ಮುಟ್ಟುಗೋಲು ಹಾಕಿಕೊಂಡಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಕ್ರಮಕ್ಕೆ ಶಿವಸೇನೆ ಮುಖಂಡ ಸಂಜಯ್ ರಾವತ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬುಧವಾರ ಮಾತನಾಡಿದ ಅವರು, ಜಾರಿ ನಿರ್ದೇಶನಲಾಯದ ಅಧಿಕಾರಿಗಳ ಕ್ರಮವನ್ನು ಲೇವಡಿ ಮಾಡಿದರು. ಇಡಿ ಅಧಿಕಾರಿಗಳು ತಮ್ಮನ್ನು ದೇಶ ಬಿಟ್ಟು ಹೋಗಿರುವ ಮದ್ಯದ ದೊರೆ ವಿಜಯ್ ಮಲ್ಯ ಹಾಗೂ ನೀರವ್ ಮೋದಿಗೆ ಸಮಾನರಾಗಿ ನೋಡುತ್ತಿದ್ದಾರೆಯೇ ಎಂದು ಪ್ರಶ್ನೆ ಮಾಡಿದರು. ಮಹಾರಾಷ್ಟ್ರ ಸರ್ಕಾರವನ್ನು ಕೆಳಗಿಳಿಸಲು ಜನರು ಒತ್ತಡ ಹೇರಿದ ನಂತರ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಶುರು ಮಾಡಿದ್ದಾರೆ ಎಂದು ಅವರು ದೂಷಿಸಿದರು.
ಸಂಜಯ್ ರಾವತ್ಗೆ ಇಡಿ ಆಘಾತ: ಶರದ್ ಪಾವರ್ ಮೋದಿ ಭೇಟಿ
ತಮ್ಮ ಮೇಲಿನ ಇಡಿ ಅಧಿಕಾರಿಗಳ ದಾಳಿಯು ರಾಜಕೀಯ ಸೇಡು ಎಂದು ಸಂಜಯ್ ರಾವತ್ ಹೇಳಿದ್ದು, ಮಹಾರಾಷ್ಟ್ರ ಸರ್ಕಾರವನ್ನು ಉರುಳಿಸುವಂತೆ ನನ್ನ ಮೇಲೆ ಒತ್ತಡ ಹೇರಲಾಗಿತ್ತು. ಸರ್ಕಾರ ಉರುಳಿಸುವ ಕೆಲಸವನ್ನು ಮಾಡದಿದ್ದರೆ, ಕೇಂದ್ರೀಯ ತನಿಖಾ ತಂಡಗಳ ದಾಳಿಯನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಲಾಗಿತ್ತು ಎಂಬುದಾಗಿ ಆರೋಪಿಸಿದರು.
ನಾನೇನು ವಿಜಯ್ ಮಲ್ಯ, ನೀರವ್ ಮೋದಿಯೇ?:
''ಮೊದಲು ಆಸ್ತಿ ಎಂಬ ಪದದ ಮುಖ್ಯ ಅರ್ಥವನ್ನು ತಿಳಿದುಕೊಳ್ಳಿರಿ. ನಾನೇನು ವಿಜಯ್ ಮಲ್ಯನೇ?, ಮೆಹುಲ್ ಚೋಕ್ಸಿನೇ?, ನೀರವ್ ಮೋದಿಯೇ? ಅಥವಾ ಅಂಬಾನಿ ಇಲ್ಲವೇ ಅದಾನಿನೇ?, ನಾನು ಸಣ್ಣದೊಂದು ಮನೆಯಲ್ಲಿ ಬದುಕುತ್ತಿರುವ ವ್ಯಕ್ತಿ. ನನ್ನ ಸ್ವಂತ ಊರಿನಲ್ಲಿ ನನಗೆ ಒಂದೇ ಒಂದು ಎಕರೆ ಜಮೀನು ಇಲ್ಲ. ತನಿಖಾ ಸಂಸ್ಥೆಗಳಿಗೆ ಇಲ್ಲಿ ಏನಾದರೂ ಅಕ್ರಮ ಹಣ ವರ್ಗಾವಣೆ ಆಗಿದೆ ಎಂದು ಅನಿಸುತ್ತದೆಯೇ? ನೀವು ನನ್ನನ್ನು ಯಾರೊಂದಿಗೆ ಹೋಲಿಕೆ ಮಾಡಿ ನೋಡುತ್ತಿದ್ದೀರಿ,'' ಎಂದು ಸಂಜಯ್ ರಾವತ್ ಪ್ರಶ್ನೆ ಮಾಡಿದ್ದಾರೆ.
ಬಿಜೆಪಿ ಸಂಸದ ಕಿರೀಟ್ ಸೋಮಯ್ಯ ವಿರುದ್ಧ ಆರೋಪ:
ಐಎನ್ಎಸ್ ವಿಕ್ರಾಂತ್ ಅನ್ನು ಕಾಪಾಡಿಕೊಳ್ಳುವ ಉದ್ದೇಶದಿಂದಾಗಿ ನಡೆಸಿದ ಅಭಿಯಾನದಡಿ ಸಂಗ್ರಹಿಸಿದ ಕೋಟಿ ಕೋಟಿ ರೂಪಾಯಿ ಹಣವನ್ನು ಬಿಜೆಪಿ ಸಂಸದ ಕಿರೀಟ್ ಸೋಮಯ್ಯ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಸಂಜಯ್ ರಾವತ್ ದೂಷಿಸಿದ್ದಾರೆ. ಜನರಿಂದ ಸಂಗ್ರಹಿಸಿದ ಹಣವು ಸರ್ಕಾರದ ಖಜಾನೆಗೆ ಸೇರಲೇ ಇಲ್ಲ ಎಂದು ಅವರು ಆರೋಪಿಸಿದ್ದಾರೆ.
ಐಎನ್ಎಸ್ ವಿಕ್ರಾಂತ್ ರಕ್ಷಿಸುವುದಕ್ಕಾಗಿ ಅಭಿಯಾನ:
ಕಳೆದ 1971ರ ಪಾಕಿಸ್ತಾನದ ವಿರುದ್ಧದ ಯುದ್ಧದಲ್ಲಿ ಇದೇ ಐಎನ್ಎಸ್ ವಿಕ್ರಾಂತ್ ಬಹುಮುಖ್ಯ ಪಾತ್ರ ವಹಿಸಿತ್ತು. ಆದರೆ ತದನಂತರದ ಐಎನ್ಎಸ್ ನಿರ್ವಹಣೆಯು ಹೊರೆ ಆಗುವುದಕ್ಕೆ ಶುರು ಆಯಿತು. ಈ ಹಿನ್ನೆಲೆ ಐಎನ್ಎಸ್ ನಿರ್ವಹಣೆಗಾಗಿ ಅಭಿಯಾನ ಶುರು ಮಾಡಲಾಗಿತ್ತು. ಅಂಥ ಅಭಿಯಾನದಿಂದಲೇ ಅದೊಂದು ಮ್ಯೂಸಿಯಂ ಆಗಿ ಬದಲಾಯಿತು. ಮುಖ್ಯವಾಗಿ ಉದ್ದೇಶ ಸಾಕಾರಗೊಳ್ಳುವುದಕ್ಕೆ 200 ಕೋಟಿ ರೂಪಾಯಿ ಬೇಕಾಗಿದ್ದರೂ, ಕೇಂದ್ರ ಅಥವಾ ರಾಜ್ಯ ಸರ್ಕಾರಗಳು ಯಾವುದೇ ಹಣಕಾಸು ಬೆಂಬಲವನ್ನು ನೀಡಲಿಲ್ಲ.
ದೇಶಾದ್ಯಂತ ಐಎನ್ಎಸ್ ವಿಕ್ರಾಂತ ಅಭಿಯಾನ:
ಭಾರತದ ಐಎನ್ಎಸ್ ವಿಕ್ರಾಂತ್ ಅನ್ನು ಸಂರಕ್ಷಿಸುವ ಉದ್ದೇಶದಿಂದ ದೇಶಾದ್ಯಂತ ಅಭಿಯಾನವನ್ನು ಆರಂಭಿಸಲಾಯಿತು. ಮಹಾರಾಷ್ಟ್ರದ ಸರ್ವಪಕ್ಷಗಳ ನಾಯಕರ ನಿಯೋಗವು ಅಂದಿನ ಕೇಂದ್ರ ರಕ್ಷಣಾ ಸಚಿವ ಎಕೆ ಆಂಟೋನಿ ಮತ್ತು ಪ್ರಧಾನಮಂತ್ರಿಯವರನ್ನು ಭೇಟಿ ಮಾಡಿದರು. ಅಂದು ಕಿರಿತ್ ಸೋಮಯ್ಯ ಅಭಿಯಾನದ ನೇತೃತ್ವ ವಹಿಸಿಕೊಂಡಿದ್ದರು. ವಿಕ್ರಾಂತ್ ಉಳಿಸಿ ಅಭಿಯಾನಕ್ಕಾಗಿ ಸ್ವಯಂ ಪ್ರೇರಿತರಾಗಿ ಮುಂದೆ ಬರುವಂತೆ ಕರೆ ನೀಡಲಾಗಿತ್ತು.
'Save Vikrant' ಎಂಬ ಬರಹವುಳ್ಳ ಟೀ-ಶರ್ಟ್ ಮತ್ತು ಜರ್ಸಿಯನ್ನು ಹಾಕಿಕೊಂಡು ಹಣ ಸಂಗ್ರಹಿಸುವ ಕಾರ್ಯ ಶುರುವಾಯಿತು. ಹಲವು ಮಂದಿ ಈ ಅಭಿಯಾನಕ್ಕಾಗಿ ಲಕ್ಷ ಲಕ್ಷ ರೂಪಾಯಿ ಹಣವನ್ನು ನೆರವಾಗಿ ನೀಡಿದ್ದಾರೆ. ಕೆಲವರು ಇತ್ತೀಚಿಗೆ ತಮಗೆ ಕರೆ ಮಾಡಿ ಅಭಿಯಾನಕ್ಕಾಗಿ 5 ರಿಂದ 10 ಸಾವಿರ ರೂಪಾಯಿ ನೀಡಿದ್ದಾಗಿ ಹೇಳಿದ್ದರು. ಆದರೆ ಹೀಗೆ ಸಂಗ್ರಹಿಸಲಾದ 50 ಕೋಟಿಗೂ ಅಧಿಕ ಹಣವನ್ನು ಬಿಜೆಪಿಯ ಸಂಸದ ಕಿರೀಟ್ ಸೋಮಯ್ಯ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಸಂಜಯ್ ರಾವತ್ ಆರೋಪಿಸಿದ್ದಾರೆ.