'ಆತ ಮಂತ್ರಿ, ನಾನು ಸರ್ಕಾರಿ ಉದ್ಯೋಗಿ': ಸಮೀರ್ ವಾಂಖೆಡೆ
ಮುಂಬೈ ಅಕ್ಟೋಬರ್ 21: ಮುಂಬೈ ಡ್ರಗ್ಸ್ ಇನ್ ಕ್ರೂಸ್ ಪ್ರಕರಣದ ತನಿಖೆ ಮಾಡುತ್ತಿರುವ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋದ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಅವರ ಮೇಲೆ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಗಂಭೀರ ಆರೋಪ ಮಾಡಿದ್ದಾರೆ. ಆದರೆ ಈ ಆರೋಪವನ್ನು ಸಮೀರ್ ವಾಂಖೆಡೆ ನಿರಾಕರಿಸಿದ್ದಾರೆ.
ಇಂದು ಎನ್ಸಿಬಿ ನಿರ್ದೇಶಕ ಸಮೀರ್ ವಾಂಖೆಡೆ ಅವರು ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ತಮ್ಮ ವಿರುದ್ಧ ಮಾಡಿದ ಸುಲಿಗೆ ಆರೋಪಗಳನ್ನು ಅಲ್ಲಗಳೆದಿದ್ದಾರೆ. ನವಾಬ್ ಮಲಿಕ್ ಅವರು ತಮ್ಮ ಮೇಲೆ ಅಸಹ್ಯಕರ ಪದ ಬಳಿಕೆ ಮಾಡಿದ್ದಾರೆ ಎಂದು ಸಮೀರ್ ವಾಂಖೆಡೆ ಅವರು ಆರೋಪಿಸಿದ್ದಾರೆ. ಸರ್ಕಾರದ ಅನುಮತಿಯನ್ನು ಪಡೆದ ನಂತರ ಅವರು ತಮ್ಮ ಕುಟುಂಬದೊಂದಿಗೆ ಮಾಲ್ಡೀವ್ಸ್ಗೆ ಹೋಗಿದ್ದಾಗಿ ಹೇಳಿಕೊಂಡಿದ್ದಾರೆ.
ಇಂದು ಎನ್ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಸುಲಿಗೆಯಲ್ಲಿ ತೊಡಗಿದ್ದಾರೆ ಎಂದು ಎನ್ಸಿಪಿ ನಾಯಕ, ಮಹಾರಾಷ್ಟ್ರ ಸರ್ಕಾರದ ಸಚಿವ ನವಾಬ್ ಮಲಿಕ್ ಗಂಭೀರ ಆರೋಪ ಮಾಡಿದ್ದಾರೆ. ಇನ್ನಷ್ಟು ವಿವರ ಮುಂದಿದೆ...
ಸಚಿವ ನವಾಬ್ ಮಲಿಕ್ ಗಂಭೀರ ಆರೋಪ
ಬಾಲಿವುಡ್ ನಟಿ ಅನನ್ಯಾ ಪಾಂಡೆ ಅವರನ್ನು ಎನ್ಸಿಬಿ ವಿಚಾರಣೆಗೆ ಕರೆದಿರುವ ಬೆನ್ನಲ್ಲೇ ಅವರು ಈ ಆರೋಪ ಮಾಡಿದ್ದು ಚರ್ಚೆಗೆ ಗ್ರಾಸವಾಗಿದೆ. ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿರುವ ನವಾಬ್ ಮಲಿಕ್,'ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮಹತ್ಯೆಯ ನಂತರ ವಿಶೇಷ ಅಧಿಕಾರಿಯೊಬ್ಬರನ್ನು (ಸಮೀರ್ ವಾಂಖೆಡೆ) ಎನ್ಸಿಬಿಗೆ ಕರೆತರಲಾಯಿತು. ಆದರೆ ಸುಶಾಂತ್ ರ ಸಾವಿನ ರಹಸ್ಯ ಇನ್ನೂ ಹೊರಬಂದಿಲ್ಲ. ಪ್ರಕರಣದ ಕುರಿತು ಸಿಬಿಐ ತನಿಖೆ ನಡೆಸುತ್ತಿದೆ. ಆದರೆ, ಈಗ ಎನ್ಸಿಬಿಯು ಬಾಲಿವುಡ್ ಹಿಂದೆ ಬಿದ್ದಿದೆ. ರಿಯಾ ಚಕ್ರವರ್ತಿ ಸೇರಿದಂತೆ ಹಲವು ಬಾಲಿವುಡ್ ನಟ-ನಟಿಯರು ಎನ್ಸಿಬಿ ಮುಂದೆ ಪರೇಡ್ ನಡೆಸಿದ್ದಾರೆ ಎಂದು ನವಾಬ್ ಮಲಿಕ್ ಕಿಡಿಕಾರಿದರು. ಸಮೀರ್ ವಾಂಖೆಡೆ ಮತ್ತು ಬಾಲಿವುಡ್ ನಡುವೆ ಆಳವಾದ ಸಂಪರ್ಕವಿದೆ. ಕೋವಿಡ್ ಸಮಯದಲ್ಲಿ ಇಡೀ ಚಿತ್ರರಂಗ ಮಾಲ್ಡೀವ್ಸ್ನಲ್ಲಿ ಇತ್ತು. ಆ ಸಮಯದಲ್ಲಿ ಸಮೀರ್ ವಾಂಖೆಡೆ ಮತ್ತು ಅವರ ಕುಟುಂಬ ಸದಸ್ಯರು ಅಲ್ಲಿ ಏನು ಮಾಡುತ್ತಿದ್ದರು ಎಂಬುದನ್ನು ಸ್ಪಷ್ಟಪಡಿಸಬೇಕು' ಎಂದು ಮಲಿಕ್ ಒತ್ತಾಯಿಸಿದ್ದಾರೆ.
ಸಮೀರ್ ವಾಂಖೆಡೆ ಹೇಳುವುದೇನು?
ಇದಕ್ಕೆ ಪ್ರತಿಕ್ರಿಯಿಸಿದ ಸಮೀರ್ ವಾಂಖೆಡೆ, "ನಾನು ಸರ್ಕಾರದ ಅನುಮತಿಯನ್ನು ಪಡೆದ ನಂತರ ನನ್ನ ಮಕ್ಕಳು ಮತ್ತು ಕುಟುಂಬದೊಂದಿಗೆ ಮಾಲ್ಡೀವ್ಸ್ ಗೆ ಹೋಗಿದ್ದೆ. ಹಾಗಂತ ಅಲ್ಲಿ ಸುಲಿಗೆಗೆ ಕರೆ ನೀಡಲಾಗಿತ್ತು ಎನ್ನುವುದು ಸ್ವೀಕಾರಾರ್ಹವಲ್ಲ" ಎಂದು ವಾಂಖೆಡೆ ಹೇಳಿದ್ದಾರೆ. "ಒಬ್ಬ ವ್ಯಕ್ತಿ ಎಲ್ಲಿದ್ದಾನೆ ಎಂದು ಪರೀಕ್ಷಿಸಲು ಕಾರ್ಯವಿಧಾನಗಳಿವೆ. ಆದ್ದರಿಂದ ಇದು ಸಂಪೂರ್ಣವಾಗಿ ಸುಳ್ಳು. ಅದು ಮುಂಬೈನ ಫೋಟೋಗಳು. ನಾನು ಮುಂಬೈನಲ್ಲಿದ್ದೆ. ನಾನು ಎಲ್ಲಿದ್ದೆ ಎಂದು ಪತ್ತೆ ಮಾಡಲು ವಿಮಾನ ನಿಲ್ದಾಣದಿಂದ ಡೇಟಾ ಪಡೆಯಿರಿ. ನನ್ನ ಪಾಸ್ಪೋರ್ಟ್ ಮತ್ತು ವೀಸಾ ಮೂಲಕ ಎಲ್ಲವನ್ನೂ ಪಡೆಯಬಹುದು, " ಎಂದಿದ್ದಾರೆ.
''ನಾನು ಕೇವಲ ಸರ್ಕಾರಿ ಉದ್ಯೋಗಿ. ಅವರು ಒಬ್ಬ ಮಂತ್ರಿ. ನನ್ನ ಶುಭ ಹಾರೈಕೆಗಳು ಅವರೊಂದಿಗಿವೆ. ದೇಶ ಸೇವೆಗಾಗಿ, ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಕ್ಕಾಗಿ ಮತ್ತು ಮಾದಕ ದ್ರವ್ಯಗಳ ಹಾವಳಿಯನ್ನು ತೊಡೆದುಹಾಕಿದ್ದಕ್ಕಾಗಿ ನನ್ನನ್ನು ಜೈಲಿಗೆ ಹಾಕಲು ಬಯಸಿದರೆ, ನಾನು ಅದನ್ನು ಸ್ವಾಗತಿಸುತ್ತೇನೆ" ಎಂದು ಹೇಳಿದ್ದಾರೆ.
ಸುಲಿಗೆ ಎಂಬ ಪದವು ಅಸಹ್ಯಕರ ಪದವಾಗಿದೆ
"ಸುಲಿಗೆ ಎಂಬ ಪದವು ಅಸಹ್ಯಕರ ಪದವಾಗಿದೆ. ಪ್ರಾಧಿಕಾರದ ಅನುಮತಿಯನ್ನು ಪಡೆದ ನಂತರ ನಾನು ಮಾಲ್ಡೀವ್ಸ್ಗೆ ಹೋಗಿದ್ದೆ. ಸರ್ಕಾರದ ಅನುಮತಿಯನ್ನು ಪಡೆದ ನಂತರ ನಾನು ನನ್ನ ಮಕ್ಕಳು ಮತ್ತು ಕುಟುಂಬದೊಂದಿಗೆ ಹೋದೆ. ಇದು ಸುಲಿಗೆಯ ಕರೆ ಅಂದರೆ, ಇದು ಸ್ವೀಕಾರಾರ್ಹವಲ್ಲ," ಎಂದು ಸಮೀರ್ ವಾಂಖೆಡೆ ಹೇಳಿದರು.
ನವಾಬ್ ಮಲಿಕ್ ಅವರಿಂದ ನಡೆಯುತ್ತಿರುವ ವಾಗ್ದಾಳಿಯ ಕುರಿತು ಮಾತನಾಡುತ್ತಾ ಅವರು, 'ವಾಂಖೆಡೆ ಅವರ ಧೈರ್ಯವು ದಾಳಿಯಿಂದ ಕಡಿಮೆಯಾಗುವುದಿಲ್ಲ. ಅದು ಇನ್ನಷ್ಟು ಬಲಗೊಳ್ಳುತ್ತದೆ' ಎಂದು ಹೇಳಿದರು. "ಕಳೆದ 15 ದಿನಗಳಲ್ಲಿ ನಮ್ಮ ಮೇಲೆ ವೈಯಕ್ತಿಕ ದಾಳಿ ಮಾಡಲಾಗುತ್ತಿದೆ. ನನ್ನ ಮೃತ ತಾಯಿ, ಸಹೋದರಿ ಮತ್ತು ನಿವೃತ್ತ ತಂದೆಯ ಮೇಲೆ ಹಲ್ಲೆಗಳು ನಡೆಯುತ್ತಿವೆ. ಇದನ್ನು ನಾನು ಬಲವಾಗಿ ಖಂಡಿಸುತ್ತೇನೆ'' ಎಂದು ಅವರು ಹೇಳಿದರು.
ಎನ್ಸಿಬಿ ಏನ್ ಹೇಳುತ್ತದೆ?
ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಸಮೀರ್ ವಾಂಖೆಡೆ ದುಬೈಗೆ ಭೇಟಿ ನೀಡಲು ಯಾವುದೇ ರಜೆ ಅರ್ಜಿಯನ್ನು ಸಲ್ಲಿಸಿಲ್ಲ ಎಂದು ದೃಢಪಡಿಸುವ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ. ಅವರು ತಮ್ಮ ಕುಟುಂಬದೊಂದಿಗೆ ಮಾಲ್ಡೀವ್ಸ್ಗೆ ಹೋಗುವುದಾಗಿ ರಜೆ ಪಡೆದರು ಎಂದು ಸಂಸ್ಥೆ ಹೇಳಿದೆ.
ದಿಲೀಪ್ ವಾಲ್ಸೆ ಪಾಟೀಲ್ ಪ್ರತಿಕ್ರಿಯೆ
ರಾಜ್ಯ ಸರ್ಕಾರದ ತನಿಖೆಯ ಬಗ್ಗೆ ಪ್ರಶ್ನೆಯೇ ಇಲ್ಲ. ಏಕೆಂದರೆ ಅವರು (ಸಮೀರ್ ವಾಂಖೆಡೆ) ಕೇಂದ್ರ ಏಜೆನ್ಸಿ ಮೂಲಕ ಕೆಲಸ ಮಾಡುತ್ತಿದ್ದಾರೆ. ಅವರ (ನವಾಬ್ ಮಲಿಕ್) ಹೇಳಿಕೆಯ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಈ ಬಗ್ಗೆ ಅವರು ನನಗೆ ಯಾವುದೇ ಪುರಾವೆಗಳನ್ನು ನೀಡಿಲ್ಲ. ನಾನು ಅವರಿಂದ ಮಾಹಿತಿ ಪಡೆಯುತ್ತೇನೆ. ಇದೀಗ ನನಗೆ ಯಾವುದೇ ಮಾಹಿತಿ ಇಲ್ಲ ಎಂದು ಮಹಾರಾಷ್ಟ್ರ ಎಚ್ಎಂ ದಿಲೀಪ್ ವಾಲ್ಸೆ ಪಾಟೀಲ್ ಹೇಳಿದ್ದಾರೆ.