100 ಕೋಟಿ ಸುಲಿಗೆಗೆ ಅನಿಲ್ ದೇಶ್ಮುಖ್ ಸೂಚಿಸಿದ್ದು ನಿಜ: ಎನ್ಐಗೆ ಸಚಿನ್ ವಾಜೆ ಪತ್ರ
ಮುಂಬೈ, ಏಪ್ರಿಲ್ 7: ಉದ್ಯಮಿ ಮುಕೇಶ್ ಅಂಬಾನಿ ಮನೆ ಮುಂದೆ ಸ್ಫೋಟಕ ದೊರೆತ ಪ್ರಕರಣಕ್ಕೆ ಮತ್ತೊಂದು ತಿರುವು ದೊರಕಿದೆ. ಮುಂಬೈನ ಮಾಜಿ ಪೊಲೀಸ್ ಕಮಿಷನರ್ ಪರಮ್ ಬೀರ್ ಸಿಂಗ್ ಆರೋಪಿಸಿರುವಂತೆ ಇತ್ತೀಚೆಗಷ್ಟೇ ರಾಜೀನಾಮೆ ನೀಡಿದ ಗೃಹ ಸಚಿವ ಅನಿಲ್ ದೇಶ್ಮುಖ್ ಮತ್ತು ಸಾರಿಗೆ ಸಚಿವ ಅನಿಲ್ ಪರಬ್ ಇಬ್ಬರೂ ಹಣ ವಸೂಲಿ ಮಾಡುವಂತೆ ತಮಗೆ ಸೂಚನೆ ನೀಡಿದ್ದರು ಎಂಬುದಾಗಿ ಅಮಾನತುಗೊಂಡಿರುವ ಮುಂಬೈ ಪೊಲೀಸ್ ಸಹಾಯಕ ಇನ್ಸ್ಪೆಕ್ಟರ್ ಸಚಿನ್ ವಾಜೆ ಎನ್ಐಎಗೆ ಪತ್ರ ಬರೆದಿದ್ದಾರೆ.
ಎನ್ಐಎ ಕೈಬರಹದಲ್ಲಿ ಬರೆದಿರುವ ಪತ್ರದಲ್ಲಿ ವಾಜೆ, ತಮ್ಮನ್ನು ಮುಂಬೈ ಪೊಲೀಸ್ ಇಲಾಖೆಗೆ 2020ರಲ್ಲಿ ಮರಳಿ ಸೇರಿಸಿಕೊಳ್ಳುವುದಕ್ಕೆ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ವಿರೋಧ ವ್ಯಕ್ತಪಡಿಸಿದ್ದರು. ತಮ್ಮ ಸೇರ್ಪಡೆಯನ್ನು ಹಿಂದಕ್ಕೆ ಪಡೆದುಕೊಳ್ಳಲು ಬಯಸಿದ್ದರು ಎಂದು ತಿಳಿಸಿದ್ದಾರೆ.
ಫೈವ್ ಸ್ಟಾರ್ ಹೋಟೆಲ್ನಲ್ಲಿ ಕುಳಿತು ವಸೂಲಿ ದಂಧೆ ನಡೆಸುತ್ತಿದ್ದ ಪೊಲೀಸ್ ಅಧಿಕಾರಿ
ಎರಡು ಕೋಟಿ ರೂಪಾಯಿ ನೀಡಿದರೆ ಪೊಲೀಸ್ ಇಲಾಖೆಗೆ ವಾಪಸ್ ಸೇರಿಸಿಕೊಳ್ಳುವಂತೆ ಶರದ್ ಪವಾರ್ ಅವರ ಮನವೊಲಿಸುವುದಾಗಿ ಗೃಹ ಸಚಿವ ಅನಿಲ್ ದೇಶ್ಮುಖ್ ತಿಳಿಸಿದ್ದರು ಎಂದು ಸಚಿವ್ ವಾಜೆ ಪತ್ರದಲ್ಲಿ ಹೇಳಿದ್ದಾರೆ.
'ಶರದ್ ಸಾಹೇಬರ ಮನವೊಲಿಸುವುದಾಗಿ ಗೃಹ ಸಚಿವರು ನನಗೆ ಹೇಳಿದ್ದರು. ಆದರೆ ಅದಕ್ಕಾಗಿ ನಾನು ಅವರಿಗೆ 2 ಕೋಟಿ ರೂ ನೀಡಬೇಕಿತ್ತು. ಅಷ್ಟು ದೊಡ್ಡ ಮೊತ್ತ ನೀಡಲು ನನಗೆ ಸಾಮರ್ಥ್ಯವಿಲ್ಲ ಎಂದು ನಾನು ವಿವರಿಸಿದ್ದೆ. ಹಾಗಾದರೆ ಹುದ್ದೆಗೆ ಸೇರಿಕೊಂಡ ಬಳಿಕ ಹಣ ಪಾವತಿಸಬಹುದು ಎಂದು ಗೃಹ ಸಚಿವರು ತಿಳಿಸಿದ್ದರು' ಎಂದು ವಾಜೆ ಬರೆದಿದ್ದಾರೆ.
2020ರ ಅಕ್ಟೋಬರ್ ತಿಂಗಳಲ್ಲಿ ತಮ್ಮ ಸಹ್ಯಾದ್ರಿ ಅತಿಥಿ ಗೃಹಕ್ಕೆ ಕರೆಸಿಕೊಂಡಿದ್ದ ಅನಿಲ್ ದೇಶ್ಮುಖ್, ಮುಂಬೈನ 1,650 ಬಾರ್ಗಳು ಮತ್ತು ರೆಸ್ಟೋರೆಂಟ್ಗಳಿಂದ ಹಣ ಸಂಗ್ರಹಿಸುವಂತೆ ಸೂಚಿಸಿದ್ದರು. ಅದು ತಮ್ಮಿಂದ ಸಾಧ್ಯವಿಲ್ಲ ಎಂದು ತಿಳಿಸಿದ್ದಾಗಿ ಹೇಳಿದ್ದಾರೆ.
2021ರ ಜನವರಿಯಲ್ಲಿ ದೇಶ್ಮುಖ್ ಅವರ ಅಧಿಕೃತ ಬಂಗಲೆಯಲ್ಲಿ ಭೇಟಿ ಮಾಡಿದ ಸಂದರ್ಭದಲ್ಲಿ ಅವರು ಮತ್ತೆ ಇದೇ ಬೇಡಿಕೆ ಇರಿಸಿದ್ದರು. ಮುಂಬೈನ 1650 ಬಾರ್ ಮತ್ತು ರೆಸ್ಟೋರೆಂಟ್ಗಳಿಂದ ತಲಾ 3-3.50 ಲಕ್ಷ ರೂ ಸಂಗ್ರಹಿಸುವಂತೆ ಗೃಹ ಸಚಿವರು ಸೂಚಿಸಿದ್ದರು. ಆಗ ಅನಿಲ್ ದೇಶ್ಮುಖ್ ಅವರ ಪಿಎ ಕುಂದನ್ ಕೂಡ ಹಾಜರಿದ್ದರು ಎಂದಿದ್ದಾರೆ.
ಮಹಾರಾಷ್ಟ್ರ ಸಾರಿಗೆ ಸಚಿವ ಮತ್ತು ಶಿವಸೇನಾ ಮುಖಂಡ ಅನಿಲ್ ಪರಬ್ ಅವರೂ ತಮಗಾಗಿ ಹಣ ವಸೂಲಿ ನಡೆಸುವಂತೆ ಸೂಚಿಸಿದ್ದರು. 2020ರ ಜುಲೈ-ಆಗಸ್ಟ್ನಲ್ಲಿ ಭೇಟಿ ಮಾಡಿದ್ದ ಪರಬ್, ವಿಚಾರಣೆ ಎದುರಿಸುತ್ತಿರುವ ಸೈಫಿ ಬರ್ಹಾನಿ ಅಪ್ಲಿಫ್ಟ್ಮೆಂಟ್ ಟ್ರಸ್ಟ್ನಿಂದ 50 ಕೋಟಿ ರೂ ಸುಲಿಗೆ ಮಾಡುವಂತೆ ಹೇಳಿದ್ದರು. 2021ರ ಜನವರಿಯಲ್ಲಿ ಮತ್ತೊಮ್ಮೆ ಕರೆಸಿದ್ದ ಪರಬ್, ಮುಂಬೈ ಮಹಾನಗರ ಪಾಲಿಕೆಯ ಪಟ್ಟಿಯಲ್ಲಿರುವ ಸುಮಾರು 50 ಗುತ್ತಿಗೆದಾರರ ವಿರುದ್ಧ ಅನಾಮಧೇಯ ದೂರಿನ ಹೆಸರಿನಲ್ಲಿ ತನಿಖೆ ನಡೆಸಿ ಅವರಿಂದ ತಲಾ 2 ಕೋಟಿ ವಸೂಲಿ ಮಾಡಲು ಸೂಚಿಸಿದ್ದರು ಎಂಬುದಾಗಿ ವಿವರಿಸಿದ್ದಾರೆ.