ದೇಶದೆಲ್ಲೆಡೆ ಕ್ರಿಕೆಟ್ ದೇವರ ಗುಣಗಾನ, ಉಳಿದಿದ್ದೆಲ್ಲ ಗೌಣ
ಮುಂಬೈ, ನ. 15 : ಭಾರತದಲ್ಲಿ ಶುಕ್ರವಾರ ಕೇಳಿ ಬರುತ್ತಿದ್ದ ಮಾತು ಕೇವಲ ಸಚಿನ್...ಸಚಿನ್...ಸಚಿನ್. ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ತಮ್ಮ ವೃತ್ತಿ ಜೀವನದ ಕೊನೆಯ ಪಂದ್ಯವಾಡುತ್ತಿದ್ದ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಮೇಲೆ ಎಲ್ಲರ ಕಣ್ಣು ನೆಟ್ಟಿತ್ತು. ಶುಕ್ರವಾರ ಅರ್ಧಶತಕ ಬಾರಿಸಿ ಅಭಿಮಾನಿಗಳನ್ನು ರಂಜಿಸಿದ ಸಚಿನ್, 74 ರನ್ ಗಳಿಸಿದಾಗ ಔಟ್ ಆಗಿ ಪೆವಿಲಿಯನ್ನತ್ತ ಮರಳುತ್ತಿದ್ದಾಗ ಇಡೀ ಕ್ರೀಡಾಂಗಣದಲ್ಲಿ ಎಲ್ಲರೂ ಎದ್ದು ನಿಂತು ಅವರಿಗೆ ಗೌರವ ಸಲ್ಲಿಸಿದರು.
ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆಯುತ್ತಿರುವ ಸಚಿನ್ ವೃತ್ತಿ ಜೀವನದ ಕೊನೆಯ ಪಂದ್ಯವನ್ನು ನೋಡಲು ವಾಂಖೇಡೆ ಕ್ರೀಡಾಂಗಣದಲ್ಲಿ ಸಾವಿರಾರು ಅಭಿಮಾನಿಗಳು ಸೇರಿದ್ದರು. ಗುರುವಾರದ 38 ರನ್ನುಗಳೊಂದಿಗೆ ಆಟ ಮುಂದುವರಿಸಿದ ಸಚಿನ್, ನರಸಿಂಗ್ ದೇವನಾರಾಯಣ್ ಎಸೆತದಲ್ಲಿ ಮೊದಲ ಸ್ಲಿಪ್ನಲ್ಲಿದ್ದ ಡರೆನ್ ಸ್ಯಾಮಿ ಅವರಿಗೆ ಕ್ಯಾಚ್ ನೀಡಿ ಔಟ್ ಆದರು. ಸಚಿನ್ ಶತಕ ಸಿಡಿಸುತ್ತಾರೆ ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ ಇದು ನಿರಾಸೆ ಉಂಟು ಮಾಡಿತು.
ವಾಂಖೇಡೆ ಸ್ಟೇಡಿಯಂನಲ್ಲಿ ಶುಕ್ರವಾರ ಅಭಿಮಾನಿಗಳ ಜೊತೆ ಸಚಿನ್ ಕೊನೆಯ ಪಂದ್ಯ ವೀಕ್ಷಿಸಲು ಗಣ್ಯರ ದಂಡೇ ಆಗಮಿಸಿತ್ತು. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಬಾಲಿವುಡ್ ನಟ ಅಮೀರ್ ಖಾನ್, ಹೃತಿಕ್ ರೋಷನ್, ಸಚಿನ್ ಕುಟುಂಬದವರು ಕ್ರಿಕೆಟ್ ದೇವರ ಕಡೆಯ ಪಂದ್ಯ ವೀಕ್ಷಿಸಿದರು. ಶುಕ್ರವಾರ ಆಕರ್ಷಕ ಅರ್ಧ ಶತಕ ಬಾರಿಸಿದ ಸಚಿನ್ ದೇಶದ ಕೋಟ್ಯಾಂತರ ಅಭಿಮಾನಿಗಳಿಗೆ ಕಡೆಯ ಪಂದ್ಯದ ಉಡುಗೊರೆ ನೀಡಿದರು. ಚಿತ್ರಗಳಲ್ಲಿ ನೋಡಿ ವಾಂಖೇಡೆ ಸ್ಟೇಡಿಯಂ ಸಂಭ್ರಮ
ಶುಕ್ರವಾರ ದೇವರ ಆಗಮನ
ವಾಂಖೇಡೆ ಸ್ಟೇಡಿಯಂನಲ್ಲಿ ಸಾವಿರಾರು ಅಭಿಮಾನಿಗಳ ಚಪ್ಪಾಳೆಯ ಸ್ವಾಗತದೊಂದಿಗೆ, ಕೊನೆಯ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯವಾಡುತ್ತಿರುವ ಸಚಿನ್, ಶುಕ್ರವಾರ 38 ರನ್ನುಗಳೊಂದಿಗೆ ಆಟವನ್ನು ಮುಂದುವರೆಸಲು ಆಗಮಿಸಿದರು.
ಸಿಡಿಯಲಿಲ್ಲ ಶತಕ
ಬ್ಯಾಟಿಂಗ್ ಮಾತ್ರಿಂಕ ವಿದಾಯದ ಪಂದ್ಯದಲ್ಲಿ ಮತ್ತೊಂದು ಶತಕ ಸಿಡಿಸುತ್ತಾರೆಂಬ ಅಭಿಮಾನಿಗಳ ನಿರೀಕ್ಷೆ ಹುಸಿಯಾಯಿತು. ಒಟ್ಟು 118 ಎಸೆತಗಳನ್ನು ಎದುರಿಸಿದ ಸಚಿನ್ 12 ಬೌಂಡರಿಗಳೊಂದಿಗೆ 74 ರನ್ ಬಾರಿಸಿ ಔಟಾದರು.
ಅರ್ಧ ಶತಕವೇ ಉಡುಗೊರೆ
ಗುರುವಾರದ 38 ರನ್ನುಗಳೊಂದಿಗೆ ಶುಕ್ರವಾರ ಆಟ ಮುಂದುವರಿಸಿದ ಸಚಿನ್ ನರಸಿಂಗ್ ದೇವನಾರಾಯಣ್ ಎಸೆತದಲ್ಲಿ ಮೊದಲ ಸ್ಲಿಪ್ನಲ್ಲಿದ್ದ ಡರೆನ್ ಸ್ಯಾಮಿ ಅವರಿಗೆ ಕ್ಯಾಚ್ ನೀಡಿ ಔಟ್ ಆದರು. ಅರ್ಧ ಶತಕ ಸಿಡಿಸಿದ ಸಚಿನ್ ಅದನ್ನೇ ಅಭಿಮಾನಿಗಳಿಗೆ ಕೊಡುಗೆಯಾಗಿ ನೀಡಿದರು.
ಗೌರವ ಪೂರ್ವಕ ವಿದಾಯ
ಕ್ರಿಕೆಟ್ ದೇವರು 74 ರನ್ ಬಾರಿಸಿದ್ದಾಗ ಔಟ್ ಆಗಿ ಪೆವಿಲಿಯನ್ನತ್ತ ಹೆಜ್ಜೆ ಹಾಕಿತ್ತಿದ್ದಾಗ, ನೆರೆದಿದ್ದ ಪ್ರೇಕ್ಷಕ ವರ್ಗವು ಅಭಿಮಾನದಿಂದಲೇ ಅವರಿಗೆ ಎದ್ದು ನಿಂತು ಗೌರವ ನೀಡಿತು. ಜಯ ಘೋಷ ಮುಗಿಲುಮುಟ್ಟಿತ್ತು.
ಅಭಿಮಾನಕ್ಕೆ ಸಲಾಂ
ಭಾರತದ ಕ್ರಿಕೆಟ್ ದೇವರು ಇನ್ನು ಟೆಸ್ಟ್ ಆಡಲಾರರು ಎಂಬುದನ್ನು ನೆನಪಿಸಿಕೊಂಡ ಅಭಿಮಾನಿಗಳಲ್ಲಿ ದುಖಃ ತುಂಬಿತ್ತು. ಆದರೆ, ಕೊನೆಯ ಪಂದ್ಯದಲ್ಲಿ ಫೆಲಿಲಿಯನ್ ಗೆ ಮರಳುವಾಗ ಬ್ಯಾಟ್ ಎತ್ತಿ ಅಭಿಮಾನಿಗಳಿಗೆ ಸಚಿನ್ ವಂದನೆ ಸಲ್ಲಿಸಿದರು.
ಹೃತಿಕ್ ಬಂದ್ದಿದ್ರು
ಕ್ರಿಶ್ 3 ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಬಾಲಿವುಡ್ ನಟ ಹೃತಿಕ್ ರೋಷನ್ ಸಚಿನ್ ಆಟ ನೋಡಲು ವಾಂಖೇಡೆ ಸ್ಟೇಡಿಯಂಗೆ ಆಗಮಿಸಿದ್ದರು. ಸಚಿನ್ ತಾಯಿ ರಜನಿ ತೆಂಡೂಲ್ಕರ್ ಅವರ ಜೊತೆ ಮಾತುಕತೆ ನಡೆಸಿದರು.
ಏನೋ ಇದು
ಕ್ರಿಕೆಟಿಗ ಯುವರಾಜ್ ಸಿಂಗ್ ಸಹ ಮುಂಬೈನಲ್ಲಿ ಕ್ರಿಕೆಟ್ ದೇವರ ಕೊನೆಯ ಆಟಕ್ಕೆ ಸಾಕ್ಷಿಯಾಗಿದ್ದರು. ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ಗೆ ಅವರು ಕೀಟಲೆ ಮಾಡಿದರು.
ಅಪ್ಪಾ ನಾವು ಇದ್ದೇವೆ
ಸಚಿನ್ ಕೊನೆಯ ಪಂದ್ಯವನ್ನು ಕುಟುಂಬದವರು ವೀಕ್ಷಿಸಿದರು. ಸಚಿನ್ ಪುತ್ರಿ ಸಾರಾ ಮತ್ತು ಅರ್ಜುನ್ ಸ್ಟೇಡಿಯಂನಲ್ಲಿದ್ದರು.
ಮಿಸ್ಟರ್ ಪರ್ಫೆಕ್ಟ್ ಜೊತೆ
ಗುರುವಾರವೂ ಸಚಿನ್ ಆಟ ನೋಡಲು ಬಂದಿದ್ದ ಬಾಲಿವುಡ್ ನಟ ಅಮೀರ್ ಖಾನ್ ಶುಕ್ರವಾರವೂ ಸ್ಟೇಡಿಯಂನಲ್ಲಿ ಕಾಣಿಸಿಕೊಂಡರು. ಸಚಿನ್ ತಾಯಿ ರಚಿನ್ ತೆಂಡೂಲ್ಕರ್ ಅವರ ಜೊತೆ ಕುಶಲೋಪರಿ ನಡೆಸಿದರು.
ಯುವರಾಜನಿಂದಲೂ ವೀಕ್ಷಣೆ
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಐದು ರಾಜ್ಯಗಳ ಚುನಾವಣಾ ಪ್ರಚಾರ ಕಾರ್ಯವನ್ನು ಬದಿಗೊತ್ತಿ ಶುಕ್ರವಾರ ಮುಂಬೈಗೆ ಸಚಿನ್ ಆಟ ನೋಡಲು ಆಗಮಿಸಿದ್ದರು.
ಸಚಿನ್ ಪುತ್ರ ಬಾಲ್ ಬಾಯ್
ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ವಾಂಖೇಡೆ ಸ್ಟೇಡಿಯಂನಲ್ಲಿ ಎರಡನೇ ದಿನದಾಟದಲ್ಲಿ ಬಾಲ್ ಬಾಯ್ ಆಗಿ ಕೆಲಸ ಮಾಡಿದರು.