ಸಚಿನ್ ತೆಂಡೂಲ್ಕರ್ ಭದ್ರತೆ ಹಿಂಪಡೆದ ಠಾಕ್ರೆ, ಮಗನಿಗೆ ಭದ್ರತೆ ಹೆಚ್ಚಳ
ಮುಂಬೈ, ಡಿಸೆಂಬರ್ 25: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರಿಗೆ ನೀಡಲಾಗಿದ್ದ ಭದ್ರತೆಯನ್ನು ಮಹಾರಾಷ್ಟ್ರ ಮೈತ್ರಿ ಸರ್ಕಾರ ಹಿಂಪಡೆದಿದ್ದು, ಸಿಎಂ ಉದ್ಧವ್ ಠಾಕ್ರೆ ಪುತ್ರ ಆದಿತ್ಯ ಠಾಕ್ರೆಗೆ ಭದ್ರತೆ ಹೆಚ್ಚು ಮಾಡಲಾಗಿದೆ.
ಸಚಿನ್ ತೆಂಡೂಲ್ಕರ್ ಗೆ ಎಕ್ಸ್ ಭದ್ರತೆ ಒದಗಿಸಲಾಗಿತ್ತು, ಅದನ್ನು ಹಿಂಪಡೆದಿರುವ ಮಹಾರಾಷ್ಟ್ರ ಸರ್ಕಾರ, ಸಿಎಂ ಪುತ್ರ ಶಿವಸೇನಾ ಶಾಸಕ ಆದಿತ್ಯ ಠಾಕ್ರೆಗೆ ನೀಡಲಾಗಿದ್ದ 'ವೈ ಪ್ಲಸ್' ಭದ್ರತೆಯನ್ನು ಹೆಚ್ಚು ಮಾಡಿ ಜೆಡ್ ಭದ್ರತೆ ಒದಗಿಸಿದೆ.
ರೈತರಿಗೆ ಭರ್ಜರಿ ಸಿಹಿಸುದ್ದಿ ನೀಡಿದ ಮಹಾರಾಷ್ಟ್ರ ಸರ್ಕಾರ
ಮಹಾರಾಷ್ಟ್ರದಲ್ಲಿ ನಲವತ್ತಕ್ಕೂ ಹೆಚ್ಚು ಮಂದಿ ವಿಐಪಿ ಗಳಿಗೆ ಭದ್ರತೆ ಹಿಂಪಡೆಯಲಾಗಿದೆ. ಕೆಲವರಿಗೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಇನ್ನು ಕೆಲವರಿಗೆ ಹೊಸದಾಗಿ ಭದ್ರತೆ ನೀಡಲಾಗಿದೆ.
ಸಚಿನ್ ಗೆ ಒಬ್ಬ ಕಾನ್ಸ್ಟೇಬಲ್ ಅನ್ನು ಭದ್ರತೆಗೆ ನೀಡಲಾಗಿತ್ತು. ಅದನ್ನು ಹಿಂಪಡೆಯಲಾಗಿದೆ. ಆದರೆ ಅವರಿಗೆ ಪೊಲೀಸ್ ಎಸ್ಕಾರ್ಟ್ ವ್ಯವಸ್ಥೆ ಮುಂದುವರೆಯಲಿದೆ ಎಂದು ಗೃಹ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಸಚಿನ್ ಜೊತೆಗೆ ಮಹಾರಾಷ್ಟ್ರ ಬಿಜೆಪಿ ನಾಯಕ ಏಕನಾಥ್ ಖಾಡಸೆ ಅವರಿಗೆ ನೀಡಲಾಗಿದ್ದ ಭದ್ರತೆಯನ್ನೂ ಕಡಿತಗೊಳಿಸಲಾಗಿದ್ದು, ಅವರಿಗೆ ನೀಡಲಾಗಿದ್ದ ಪೊಲೀಸ್ ಎಸ್ಕಾರ್ಟ್ ಅನ್ನು ಹಿಂಪಡೆಯಲಾಗಿದೆ.
ಹತ್ ರೂಪಾಯಿಗೊಂದ್, ಹತ್ತು ರೂಪಾಯಿಗೊಂದ್, ಇದು ಊಟದ ರೇಟ್!
ಉತ್ತರ ಪ್ರದೇಶ ಮಾಜಿ ರಾಜ್ಯಪಾಲ ರಾಮ ನಾಯಕ್ ಅವರಿಗೆ ನೀಡಲಾಗಿದ್ದ ಜೆಡ್ ಪ್ಲಸ್ ಭದ್ರತೆ ಹಿಂಪಡೆದು 'ಎಕ್ಸ್' ಹಂತದ ಭದ್ರತೆ ಇಳಿಸಲಾಗಿದೆ. ಖ್ಯಾತ ವಕೀಲ ಉಜ್ವಲ್ ನಿಕಮ್ ಅವರಿಗೆ ನೀಡಲಾಗಿದ್ದ ಜೆಡ್ ಪಲ್ಸ್ ಭದ್ರತೆಯಲ್ಲಿಯೂ ಕಡಿತಗೊಳಿಸಿ 'ವೈ' ಹಂತದ ಭದ್ರತೆ ನೀಡಲಾಗಿದೆ.
ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರಿಗೆ ನೀಡಲಾಗಿದ್ದ ಭದ್ರತೆ ಹೆಚ್ಚು ಮಾಡಿ 'ವೈ' ನಿಂದ 'ಜೆಡ್' ದರ್ಜೆಗೆ ಏರಿಸಲಾಗಿದೆ.
ಬೆದರಿಕೆ ಗ್ರಹಿಕೆ ಸಮಿತಿ ಸಭೆಯ ನಂತರ ಈ ತೀರ್ಮಾನವನ್ನು ಮಹಾರಾಷ್ಟ್ರ ಸರ್ಕಾರ ತೆಗೆದುಕೊಂಡಿದೆ. 'ಗುಪ್ತಚರ ಇಲಾಖೆ, ಪೊಲೀಸ್ ಇಲಾಖೆ ಮತ್ತು ಇತರ ಇಲಾಖೆಗಳ ಮಾಹಿತಿ ಆಧರಿಸಿ ಸೂಕ್ಷ್ಮ ವರದಿ ತಯಾರಿಸಿದ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ' ಎಂದು ಅಧಿಕಾರಿಗಳು ಹೇಳಿದ್ದಾರೆ.