ಸಚಿನ್,ಶಾರುಖ್, ಸಲ್ಮಾನ್ ಖಾತೆಗೆ ಕನ್ನ
ಮುಂಬೈ, ಸೆ.26: ಖ್ಯಾತ ಉದ್ಯಮಿ ಅನಿಲ್ ಅಂಬಾನಿ ಅವರ ಆದಾಯ ತೆರಿಗೆ ಇ ಖಾತೆಗೆ ವಿದ್ಯಾರ್ಥಿಯೊಬ್ಬ ಕನ್ನ ಹಾಕಿದ ಬೆನ್ನಲ್ಲೇ ಸಚಿನ್ ಸೇರಿದಂತೆ ಗಣ್ಯಾತಿಗಣ್ಯರ ಖಾತೆಗೆ ಕನ್ನ ಕೊರೆದ ಪ್ರಕರಣ ಬೆಳಕಿಗೆ ಬಂದಿದೆ.
ಹೈದರಾಬಾದಿನ ಸಿಎ ವಿದ್ಯಾರ್ಥಿಯೊಬ್ಬ ಅನಿಲ್ ಅಂಬಾನಿ ಖಾತೆಗೆ ಕನ್ನ ಹಾಕಿದ್ದ ಇದಾದ ಸುಮಾರು ಹದಿನೈದು ದಿನಗಳ ನಂತರ ಮುಂಬೈ ಕ್ರೈಂ ಬ್ರ್ಯಾಂಚ್ ಪೊಲೀಸರು ಇಂಥದ್ದೇ ಪ್ರಕರಣವನ್ನು ಬೇಧಿಸಿದ್ದಾರೆ.
ಸಚಿನ್ ತೆಂಡೂಲ್ಕರ್, ಶಾರುಖ್ ಖಾನ್, ಸಲ್ಮಾನ್ ಖಾನ್ ಹಾಗೂ ಮಹೇಂದ್ರ ಸಿಂಗ್ ಧೋನಿ ಅವರ ಆದಾಯ ತೆರಿಗೆ ಇಲಾಖೆ ಪಾವತಿ ಖಾತೆಗೆ ನೋಯ್ಡಾ ಮೂಲದ ಸಿಎ ವಿದ್ಯಾರ್ಥಿಯೊಬ್ಬ ಕನ್ನ ಹಾಕಿದ್ದನ್ನು ಪೊಲೀಸರು ಪತ್ತೆ ಹಚ್ಚಿ ಆತನನ್ನು ಬಂಧಿಸಿದ್ದಾರೆ.
22 ವರ್ಷ ವಯಸ್ಸಿನ ಸಂಚಿತ್ ಕೆ ಎಂಬ ನೋಯ್ಡಾ ವಿದ್ಯಾರ್ಥಿಯೇ ಹೈದರಾಬಾದಿನ ವಿದ್ಯಾರ್ಥಿಯಂತೆ ಅಂಬಾನಿ ಖಾತೆಗೆ ಕನ್ನ ಹಾಕಿದ್ದ ಎನ್ನಲಾಗಿದೆ.
ಹೈದರಾಬಾದ್ ಹಾಗೂ ನೋಯ್ಡಾ ಎರಡು ಕಡೆಗಳಿಂದ ಖಾತೆಗಳಿಗೆ ಕನ್ನ ಹಾಕಲಾಗಿದೆ.ಈ ಬಗ್ಗೆ ತನಿಖೆ ನಡೆಸಿದ ಪೊಲೀಸರಿಗೆ ಹೈದಾಬಾದ್ ಸಮೀಪದ ಚಿಕ್ಕಡ್ ಪಲ್ಲಿ ಬಳಿ ಯುವತಿಯೊಬ್ಬಳ ಮೇಲೆ ಶಂಕೆ ಉಂಟಾಗಿದೆ.
ವಿಚಾರಣೆ ನಡೆಸಿದಾಗ ನಾನು ಯಾವುದೇ ಖಾತೆಗೆ ಕನ್ನ ಹಾಕಿಲ್ಲ ಅಥವಾ ನೋಯ್ಡಾದಲ್ಲಿ ನನಗೆ ಯಾರೂ ಗೊತ್ತಿಲ್ಲ ಎಂದಿದ್ದಾಳೆ. ಅಲ್ಲಿಗೆ ಇನ್ನೊಬ್ಬರು ಈ ಖಾತೆಗಳಿಗೆ ಕನ್ನ ಹಾಕಿರುವ ಬಗ್ಗೆ ಸೈಬರ್ ಕ್ರೈಂ ಸೆಲ್ ನ ಹಿರಿಯ ಅಧಿಕಾರಿ ಮುಕುಂದ ಪವಾರ್ ಅವರಿಗೆ ಸುಳಿವು ಸಿಕ್ಕಿದೆ.
ಅಲ್ಲಿಂದ ನೋಯ್ಡಾಗೆ ತೆರಳಿದ ಅಧಿಕಾರಿಗಳಿಗೆ ಸಣ್ಣ ಉದ್ಯಮಿಯೊಬ್ಬರ ಮಗ ಸಂಚಿತ್ ಸಿಕ್ಕಿಬಿದ್ದಿದ್ದಾನೆ. ಅಂಬಾನಿ ಪ್ರಕರಣದಲ್ಲಿ ಆ ವಿದ್ಯಾರ್ಥಿ ಐಟಿ ರಿಟರ್ನ್ಸ್ ವಿವರ ಕದ್ದಿದ್ದರೆ, ಈ ಪ್ರಕರಣದಲ್ಲಿ ಸಲ್ಮಾನ್, ಸಚಿನ್, ಶಾರುಖ್ ಖಾತೆಗಳನ್ನು ಸಂಚಿನ್ ಸ್ಕಿಮ್ (what is skimming) ಮಾಡಿದ್ದಾನೆ.
ಆದಾಯ ತೆರಿಗೆ ಇಲಾಖೆ ವೆಬ್ ಸೈಟ್ ನ ಹುಳುಕು ಈ ಎರಡು ಪ್ರಕರಣಗಳಿಂದ ತಿಳಿದು ಬಂದಿದೆ. ಸಂಚಿತ್ ಮನೆ ಮೇಲೆ ದಾಳಿ ನಡೆಸಿ ಕಂಪ್ಯೂಟರ್, ಹಾರ್ಡ್ ಡಿಸ್ಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.ವಿಶೇಷವೆಂದರೆ ಸಂಚಿತ್ ನನ್ನು ಬಂಧಿಸಿ ನಂತರ ಬಿಡುಗಡೆ ಮಾಡಲಾಗಿದೆ.
ಜೂ 22 ಹಾಗೂ 26 ರಂದು ಅಂಬಾನಿ ಐಟಿ ಖಾತೆಗೆ ಹೊಸ ಪಾಸ್ ವರ್ಡ್ ಬಯಸಿ ಸಂಚಿತ್ ಮನವಿ ಸಲ್ಲಿಸಿದ್ದಾನೆ. ಶಾರುಖ್ ಖಾತೆಗೆ ಜೂ 22 ರಂದು ಕನ್ನ ಹಾಕಲು ಯತ್ನಿಸಿದ್ದಾನೆ. ಧೋನಿ ಖಾತೆಗೆ ಜೂ 24 ಹಾಗೂ 28 ರಂದು ಹಾಗೂ ಸಚಿನ್ ಜುಲೈ 4 ಕನ್ನ ಹಾಕಲಾಗಿದೆ.
ಆದಾಯ ತೆರಿಗೆ ಇಲಾಖೆಯ ದೋಷ ಇದೆ ಎಂದು ಕ್ರೈಂ ಬ್ರ್ಯಾಂಚ್ ಅವರಿಗೆ ಸಮನ್ಸ್ ನೀಡಲಾಗಿದೆ. ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಅಂಗವಾಗಿ ಈ ಕೃತ್ಯ ಎಸಗಿದ್ದಾರೆ. ಆದರೆ, ಈ ರೀತಿ ಹ್ಯಾಕ್ ಮಾಡುವ ಮುನ್ನ ಪೊಲೀಸರ ಅನುಮತಿ ಅಗತ್ಯವಿರುತ್ತದೆ. ಖಾಸಗಿ ಮಾಹಿತಿ ಕದಿಯುವುದು ಅಪರಾಧವಾಗಿದೆ.