ಗೆರಿಲ್ಲಾ ತಂತ್ರ ಬಳಸಿ ಶಬರಿಮಲೆ ಪ್ರವೇಶ: ತೃಪ್ತಿ ದೇಸಾಯಿ ಹೇಳಿಕೆ
ಮುಂಬೈ, ನವೆಂಬರ್ 17: ಶಬರಿಮಲೆ ದೇವಸ್ಥಾನದೊಳಗೆ ಪ್ರವೇಶಿಸುವ ಪ್ರಯತ್ನದಲ್ಲಿ ವಿಫಲರಾಗಿರುವ ಮಹಿಳಾ ಪರ ಹೋರಾಟಗಾರ್ತಿ ತೃಪ್ತಿ ದೇಸಾಯಿ, ಗೆರಿಲ್ಲಾ ತಂತ್ರ ಬಳಸಿ ದೇವಸ್ಥಾನಕ್ಕೆ ಪ್ರವೇಶಿಸುವುದಾಗಿ ಹೇಳಿದ್ದಾರೆ.
ಭೂಮಾತಾ ಬ್ರಿಗೇಡ್ನ ತೃಪ್ತಿ ದೇಸಾಯಿ ಮತ್ತು ಇತರೆ ಸದಸ್ಯೆಯರು ಶಬರಿಮಲೆ ದೇವಸ್ಥಾನದೊಳಗೆ ಪ್ರವೇಶ ಮಾಡುವ ಸಲುವಾಗಿ ಕೇರಳದ ಕೊಚ್ಚಿಗೆ ಶುಕ್ರವಾರ ತೆರಳಿದ್ದರು.
ಅವರು ಮುಂಜಾನೆ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆಯೇ ಹೊರಗೆ ಅಯ್ಯಪ್ಪ ಭಕ್ತರು ಪ್ರತಿಭಟನೆ ಆರಂಭಿಸಿದ್ದರು. ಇದರಿಂದಾಗಿ ಸಂಜೆಯಾದರೂ ತೃಪ್ತಿ ಮತ್ತು ಅವರ ಬೆಂಬಲಿಗರಿಗೆ ವಿಮಾನ ನಿಲ್ದಾಣದಿಂದ ಹೊರಬರಲು ಸಾಧ್ಯವಾಗರಲಿಲ್ಲ. ಹೀಗಾಗಿ ಪೊಲೀಸರು ಅಲ್ಲಿಂದ ವಾಪಸ್ ತೆರಳುವಂತೆ ತೃಪ್ತಿ ಅವರಿಗೆ ಸಲಹೆ ನೀಡಿದ್ದರು.
ಶಬರಿಮಲೆ ಪ್ರವೇಶಿಸುವ ತೃಪ್ತಿ ದೇಸಾಯಿ ಪ್ರಯತ್ನ ವಿಫಲ
ಹೀಗಾಗಿ ತೃಪ್ತಿ ಬಂದ ದಾರಿಗೆ ಸುಂಕವಿಲ್ಲದೆ ಅನಿವಾರ್ಯವಾಗಿ ಮುಂಬೈಗೆ ಮರಳಿದ್ದರು. ಅಯ್ಯಪ್ಪ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಮಾಡಿಯೇ ಸಿದ್ಧ ಎಂದು ಪಟ್ಟು ಹಿಡಿದಿರುವ ತೃಪ್ತಿ, ತಮ್ಮ ಪ್ರಯತ್ನದಲ್ಲಿ ಹಿನ್ನಡೆ ಅನುಭವಿಸಿದ್ದರೂ ಮತ್ತೆ ಹೋಗಿಯೇ ತೀರುವುದಾಗಿ ಹೇಳಿಕೊಂಡಿದ್ದಾರೆ. ಇದು ಅಯ್ಯಪ್ಪ ಭಕ್ತರು ಮತ್ತು ಬಲಪಂಥೀಯ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.
ನಿಂದಿಸಿದ ಪ್ರತಿಭಟನಾಕಾರರು
ನಾವು ಕೊಚ್ಚಿ ವಿಮಾನ ನಿಲ್ದಾಣದೊಳಗೆ ಕಾಲಿಡುತ್ತಿದ್ದಂತೆಯೇ ಅಲ್ಲಿ ಸೇರಿಕೊಂಡಿದ್ದ ಪ್ರತಿಭಟನಾಕಾರರು ನಮ್ಮನ್ನು ನಿಂದಿಸತೊಡಗಿದರು. ಮರಳಿ ಹೋಗುವಂತೆ ಬೆದರಿಕೆ ಹಾಕಿದರು.
ಬೇರೆ ಏನಾದರೂ ಸಮಸ್ಯೆ ಆಗಬಹುದು ಎಂದು ಪೊಲೀಸರೂ ನಮಗೆ ವಾಪಸ್ ಹೋಗುವಂತೆ ಮನವಿ ಮಾಡಿದರು. ರಾಜ್ಯದ ಜನರಿಗೆ ಏನೂ ಸಮಸ್ಯೆಯಾಗುವುದನ್ನು ನಾವು ಇಷ್ಟಪಡುವುದಿಲ್ಲ. ಹೀಗಾಗಿ ಮರಳಲು ನಾವು ನಿರ್ಧರಿಸಿದೆವು.
ಶಬರಿಮಲೆ ಬದಲು ಹಳ್ಳಿಗಳಿಗೆ ಹೋಗಿ: ಕಾರ್ಯಕರ್ತೆಯರಿಗೆ ತಸ್ಲೀಮಾ ಸಲಹೆ
ಗೆರಿಲ್ಲಾ ತಂತ್ರದಲ್ಲಿ ಪ್ರವೇಶ
ಮುಂದಿನ ಬಾರಿ ನಾವು ಬಂದಾಗ ಭದ್ರತೆ ಒದಗಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಬಾರಿ ನಾವು ಮೊದಲೇ ಘೋಷಣೆ ಮಾಡಿ ಬಂದಿದ್ದೆವು. ಆದರೆ, ಮುಂದಿನ ಬಾರಿ ನಾವು ಹೀಗೆ ಬರುತ್ತೇವೆ ಎಂದು ಬಹಿರಂಗವಾಗಿ ಪ್ರಕಟಿಸುವುದಿಲ್ಲ. ಆದರೆ, ಗೆರಿಲ್ಲಾ ತಂತ್ರ ಅನುಸರಿಸಲಿದ್ದೇವೆ ಎಂದು ತೃಪ್ತಿ ದೇಸಾಯಿ ಹೇಳಿದ್ದಾರೆ.
ಮಂಡಲ ಪೂಜೆಗಾಗಿ ಬಾಗಿಲು ತೆರೆದ ಶಬರಿಮಲೆ ದೇವಾಲಯ
ಹಲ್ಲೆ ಮಾಡುವ ಬೆದರಿಕೆ
ನಮ್ಮನ್ನು ಕರೆದೊಯ್ಯಲು ಬಂದ ಕ್ಯಾಬ್ ಚಾಲಕರು ನಮ್ಮ ಏಳು ಸದಸ್ಯರ ತಂಡವನ್ನು ಶಬರಿಮಲೆಗೆ ಕರೆದೊಯ್ಯಲು ನಿರಾಕರಿಸಿದರು. ಎರಡು ಟ್ಯಾಕ್ಸಿಗಳು ವಿಮಾನ ನಿಲ್ದಾಣಕ್ಕೆ ಬಂದಿದ್ದವು. ಆದರೆ, ಟ್ಯಾಕ್ಸಿಗಳನ್ನು ಪುಡಿ ಮಾಡಿ ನಮ್ಮ ಮೇಲೆ ಹಲ್ಲೆ ನಡೆಸುವುದಾಗಿ ಬೆದರಿಕೆ ಹಾಕಲಾಯಿತು. ಹೀಗಾಗಿ ಅವರು ಶಬರಿಮಲೆಗೆ ಕರೆದುಕೊಂಡು ಹೋಗಲು ನಿರಾಕರಿಸಿದರು ಎಂದು ತೃಪ್ತಿ ಹೇಳಿದ್ದಾರೆ.
ಅವರು ಭಕ್ತರಾಗಲು ಸಾಧ್ಯವಿಲ್ಲ
ಪ್ರತಿಭಟನಾಕಾರರು ಹಿಂಸಾಚಾರ ಮತ್ತು ಗೂಂಡಾಗಿರಿ ನಡೆಸಲು ಸಿದ್ಧರಾಗಿದ್ದರು. ಅವರು ಹಾಗೆ ಮಾಡಬಾರದಾಗಿತ್ತು. ಅವರು ತಮ್ಮನ್ನು ಅಯ್ಯಪ್ಪ ಸ್ವಾಮಿಯ ಭಕ್ತರು ಎಂದು ಕರೆದುಕೊಳ್ಳುತ್ತಾರೆ. ಆದರೆ, ಅವರು ಭಕ್ತರಾಗಲು ಸಾಧ್ಯ ಎಂದು ಅನಿಸುತ್ತಿಲ್ಲ. ಅವರು ನಮ್ಮನ್ನು ಅವಾಚ್ಯವಾಗಿ ನಿಂದಿಸುತ್ತಿದ್ದರು ಮತ್ತು ಬೆದರಿಸುತ್ತಿದ್ದರು.
ಭಯದಿಂದ ತಡೆದರು
ಅವರು ನಮ್ಮನ್ನು ವಿರೋಧಿಸಲು ಬಯಸಿದ್ದರೆ, ನಿಲಕ್ಕಲ್ನಲ್ಲಿ ಪ್ರತಿಭಟನೆ ನಡೆಸಬೇಕಿತ್ತು. ಆದರೆ, ನಾವು ನಿಲಕ್ಕಲ್ ತಲುಪಿದರೆ ನಾವು ಅಲ್ಲಿಂದ ಪಂಬಾಕ್ಕೆ ತೆರಳಿ ದರ್ಶನ ಮುಗಿಸಿಯೇ ಹಿಂದಿರುಗುತ್ತಿದ್ದೆವು ಎನ್ನುವುದು ಅವರಿಗೆ ತಿಳಿದಿತ್ತು. ಹೀಗಾಗಿ ಅವರು ಹೆದರಿ ನಮ್ಮನ್ನು ವಿಮಾನ ನಿಲ್ದಾಣದಲ್ಲಿಯೇ ತಡೆದರು ಎಂದು ಹೇಳಿದ್ದಾರೆ.
|
ಪೊಲೀಸರ ಬಿಗಿ ಭದ್ರತೆ
ಸುಪ್ರೀಂಕೋರ್ಟ್ ಆದೇಶದ ಬಳಿಕ ತೃಪ್ತಿ ದೇಸಾಯಿ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯ ಪ್ರವೇಶಿಸಲು ಬಯಸಿದ್ದರು. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಪತ್ರ ಬರೆದು ಶುಕ್ರವಾರ ಕೇರಳಕ್ಕೆ ಆಗಮಿಸುವುದಾಗಿ ಹೇಳಿದ್ದರು. ಸೂಕ್ತ ರಕ್ಷಣೆ ನೀಡಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದರು.
ಅಲ್ಲದೆ, ಅಲ್ಲಿ ಪ್ರಯಾಣದ ಖರ್ಚು ವೆಚ್ಚಗಳನ್ನು ಸರ್ಕಾರವೇ ಭರಿಸಬೇಕು ಎಂಬ ಕೋರಿಕೆಯನ್ನೂ ಸಲ್ಲಿಸಿದ್ದರು. ಅವರು ಕೊಚ್ಚಿ ವಿಮಾನ ನಿಲ್ದಾಣಕ್ಕೆ ಆಗಮಿಸುವ ವಿಷಯ ತಿಳಿದ ಪೊಲೀಸರು ನಿಲ್ದಾಣಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಿದ್ದರು. ಆದರೆ, ಪ್ರತಿಭಟನಾಕಾರರೂ ಭಾರಿ ಸಂಖ್ಯೆಯಲ್ಲಿ ನಿಲ್ದಾಣದ ಹೊರಗೆ ಸೇರಿದ್ದರು.