ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿ ಶಿವಸೇನೆಯವರು: ಸಾಮ್ನಾ ಘೋಷಣೆ
ಮುಂಬೈ, ಜೂನ್ 19: ಲೋಕಸಭೆ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಶಿವಸೇನೆಯ ನಡುವೆ ಇದ್ದ ವೈಮನಸ್ಯ ಚುನಾವಣೆಯ ಫಲಿತಾಮಶದ ನಂತರ ಕೊಂಚ ತಣ್ಣಗಾಗಿತ್ತು. ಆದರೆ ಕೆಲವೇ ತಿಂಗಳುಗಳಲ್ಲಿ ನಡೆಯಲಿರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಉಭಯ ಪಕ್ಷಗಳ ನಡುವಲ್ಲಿ ಮತ್ತೆ ಭಿನ್ನಾಭಿಪ್ರಾಯ ಏಳುವ ಎಲ್ಲಾ ಸೂಚನೆಗಳೂ ಕಾಣಿಸುತ್ತಿವೆ.
ಮಹಾ ಚುನಾವಣೆ : ಬಿಜೆಪಿ-ಶಿವಸೇನಾ ನಡುವೆ ಸೀಟು ಹಂಚಿಕೆ ಅಂತಿಮ
ಇತ್ತೀಚೆಗಷ್ಟೇ ಮಹಾರಾಷ್ಟ್ರದ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಉದ್ಧವ್ ಠಾಕ್ರೆ ಅವರ ಪುತ್ರ ಆದಿತ್ಯ ಠಾಕ್ರೆ ಅವರನ್ನು ಬಿಂಬಿಸಬೇಕು ಎಂಬ ಮಾತು ಕೇಳಿಬಂದಿತ್ತು. ಇದೀಗ ಶಿವಸೇನೆ ಮುಖವಾಣಿ 'ಸಾಮ್ನಾ' ಸಹ, "ಈ ಬಾರಿ ಮಹಾರಾಷ್ಟ್ರಕ್ಕೆ ಶಿವಸೇನೆ ಅಭ್ಯರ್ಥಿಯೇ ಮುಖ್ಯಮಂತ್ರಿಯಾಗಬೇಕು" ಎಂದು ಘೋಷಿಸಿದ್ದು, ಬಿಜೆಪಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಬಾಳಾ ಠಾಕ್ರೆ ಮೊಮ್ಮಗ, 29 ವರ್ಷದ ಆದಿತ್ಯ ಮಹಾರಾಷ್ಟ್ರ ಸಿಎಂ ಸ್ಥಾನಕ್ಕೆ
ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಶಿವಸೇನೆಯೊಂದಿಗೆ ಮೈತ್ರಿ ಮಾಡಿಕೊಳ್ಳದೆ ಚುನಾವಣೆಯಲ್ಲಿ ಗೆಲ್ಲುವುದು ಕಷ್ಟ. ಆದ್ದರಿಂದ ಈಗಾಗಲೇ ಮಹಾರಾಷ್ಟ್ರದ ಒಟ್ಟು 288 ಸ್ಥಾನಗಳ ಪೈಕಿ, ತಲಾ 135 ಸ್ಥಾನಗಳಲ್ಲಿ ಬಿಜೆಪಿ ಮತ್ತು ಶಿವಸೇನೆ ಸ್ಪರ್ಧಿಸಲಿವೆ. ಉಳಿದ 18 ಕ್ಷೇತ್ರಗಳಲ್ಲಿ ಎನ್ ಡಿಎ ಮೈತ್ರಿಕೂಟದ ಇತರ ಪಕ್ಷಗಳು ಸ್ಪರ್ಧಿಸಲಿವೆ.
ಉಭಯ ಪಕ್ಷಗಳೂ ಸಮಾನ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿರುವುದರಿಂದ ಮುಖ್ಯಮಂತ್ರಿ ಅಭ್ಯರ್ಥಿಯ ಬಗ್ಗೆ ಎರಡೂ ಪಕ್ಷಗಳಲ್ಲೂ ಸ್ಪರ್ಧೆ ಏರ್ಪಡುವುದು ಖಂಡಿತ.
ನಾವು ವಿಧಾನಸಭೆಯಲ್ಲಿ ಕೇಸರಿಯನ್ನು ಮೊಳಗಿಸಲು ಉತ್ಸುರಾಗಿದ್ದೇವೆ. ನಮ್ಮ ಪಕ್ಷದ ಸದಸ್ಯರೊಬ್ಬರು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಶಿವಸೇನೆ ಹೇಳಿದ್ದಾಗಿ ಸಾಮ್ನಾ ವರದಿ ಮಾಡಿದೆ.