ಶಿವಸೇನೆ ಸರಕಾರದ ಬುಡವನ್ನೇ ಅಲುಗಾಡಿಸುತ್ತಿರುವ '100 ಕೋಟಿ ಹಫ್ತಾ'
ಮುಂಬೈ, ಮಾರ್ಚ್ 23: ಒಂದು ಕಾಲದ ಮಿತ್ರ ಬಿಜೆಪಿಯನ್ನು ಎದುರು ಹಾಕಿಕೊಂಡು, ಮೂರು ಪಕ್ಷಗಳ ಜೊತೆ ಸರಕಾರ ರಚಿಸಿರುವ ಉದ್ದವ್ ಠಾಕ್ರೆಗೆ ಇದುವರೆಗೆ ಕಾಂಗ್ರೆಸ್ ಮತ್ತು ಎನ್ಸಿಪಿಯಿಂದ ಉತ್ತಮವಾದ ಸಹಕಾರವೇನೋ ಸಿಕ್ಕಿದೆ.
ಆದರೆ, ರಿಲಯನ್ಸ್ ಮಾಲೀಕ ಮುಕೇಶ್ ಅಂಬಾನಿ ಮನೆ ಬಳಿ ಸ್ಪೋಟಕ ಪತ್ತೆಯಾದ ನಂತರ ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು, ಠಾಕ್ರೆ ಸರಕಾರವನ್ನು ಅಲುಗಾಡಿಸಲಾರಂಭಿಸಿದೆ.
ಅನಿಲ್ ದೇಶ್ಮುಖ್ ವಿರುದ್ಧ ತನಿಖೆ: ಸುಪ್ರೀಂಕೋರ್ಟ್ಗೆ ಪರಮ್ಬೀರ್ ಅರ್ಜಿ
ಒಂದು ಕಡೆ, ಸರಕಾರದ ಭವಿಷ್ಯ ಇನ್ನೊಂದು ಕಡೆ, ಶಿವಸೇನೆ ಮತ್ತು ಎನ್ಸಿಪಿ ನಡುವಿನ ಸಂಬಂಧ ಹಳಸಲು ಆರಂಭವಾಯಿತೇ ಎನ್ನುವ ಸಂಶಯ ಬರಲು ಕಾರಣ, ಒಂದೇ ದಿನದಲ್ಲಿ ಶರದ್ ಪವಾರ್ ಅವರ ಬದಲಾದ ನಿಲುವು.
ಪರಮ್ಬೀರ್ ಸಿಂಗ್ ದೆಹಲಿಯಲ್ಲಿ ಯಾರನ್ನು ಭೇಟಿಯಾಗಿದ್ದಾರೆಂದು ಗೊತ್ತು: ನವಾಬ್ ಮಲಿಕ್
ಅಲ್ಲಿನ ಗೃಹಸಚಿವ ಅನಿಲ್ ದೇಶ್ ಮುಖ್ ವಿರುದ್ದ ಸುಲಿಗೆ ಆರೋಪದ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಸುಲಿಗೆ ಆರೋಪ ಮಾಡಿರುವ ಐಪಿಎಸ್ ಅಧಿಕಾರಿ ಪರಂಬೀರ್ ಸಿಂಗ್, ನಿಷ್ಪಕ್ಷ ತನಿಖೆ ನಡೆಯಬೇಕೆಂದು ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಮುಂಬೈ ಮಹಾನಗರದ ಮಾಜಿ ಪೊಲೀಸ್ ಆಯುಕ್ತ ಪರಂ ಬೀರ್ ಸಿಂಗ್
ಮುಂಬೈ ಮಹಾನಗರದ ಮಾಜಿ ಪೊಲೀಸ್ ಆಯುಕ್ತ ಪರಂ ಬೀರ್ ಸಿಂಗ್, ರಾಜ್ಯದ ಗೃಹ ಸಚಿವ ದೇಶ್ ಮುಖ್ ವಿರುದ್ದ ಎಂಟು ಪುಟಗಳ ದೂರನ್ನು ಸಿಎಂ ಠಾಕ್ರೆಗೆ ನೀಡಿದ್ದರು. ಇದರಲ್ಲಿ, ಪ್ರತೀ ತಿಂಗಳು ನೂರು ಕೋಟಿ ಹಫ್ತಾ ವಸೂಲಿ ಮಾಡುವಂತೆ ದೇಶ್ ಮುಖ್ ಟಾರ್ಗೆಟ್ ನೀಡಿದ್ದರು. ಅದರಲ್ಲಿ 50-60 ಕೋಟಿ ಪಬ್/ಬಾರ್ ಗಳಿಂದ ಸಂಗ್ರಹಿಸಲು ದೇಶ್ ಮುಖ್ ಸೂಚಿಸಿದ್ದರು ಎಂದು ಪರಂ ಸಿಂಗ್, ಸಿಎಂಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಸಿಎಂ ಠಾಕ್ರೆ ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಲಿದ್ದಾರೆ ಎಂದಿದ್ದ ಪವಾರ್
"ಗೃಹ ಸಚಿವರ ವಿರುದ್ದ ಕೇಳಿ ಬಂದಿರುವ ಆರೋಪ ಗಂಭೀರ ಸ್ವರೂಪದ್ದಾಗಿರುವುದರಿಂದ, ಸಿಎಂ ಠಾಕ್ರೆ ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಲಿದ್ದಾರೆ"ಎಂದು ಒಂದು ದಿನದ ಹಿಂದೆ ಶರದ್ ಪವಾರ್ ಹೇಳಿಕೆಯನ್ನು ನೀಡಿದ್ದರು. ಒಂದು ಹಂತದಲ್ಲಿ ದೇಶ್ ಮುಖ್ ಅವರ ರಾಜೀನಾಮೆಯನ್ನು ಪಡೆದು ಅಜಿತ್ ಪವಾರ್ ಗೆ ಗೃಹಸಚಿವ ಸ್ಥಾನ ನೀಡುವ ಬಗ್ಗೆಯೂ ಮಾತುಕತೆ ನಡೆದಿತ್ತು. ಆದರೆ, ಪವಾರ್ ಈಗ ಉಲ್ಟಾ ಹೊಡೆದಿದ್ದಾರೆ.
ಅನಿಲ್ ದೇಶಮುಖ್ ರಾಜೀನಾಮೆ ನೀಡುವ ಪ್ರಮೇಯವೇ ಎದುರಾಗುವುದಿಲ್ಲ
ಈಗ ತಮ್ಮ ನಿಲುವು ಬದಲಾಯಿಸಿರುವ ಶರದ್ ಪವಾರ್, "ಪೊಲೀಸ್ ಆಯುಕ್ತರು ದೇಶ್ ಮುಖ್ ವಿರುದ್ದ ಆರೋಪ ಮಾಡಿದ್ದ ಅವಧಿಯಲ್ಲಿ ಅವರು ಮುಂಬೈನಲ್ಲಿ ಇರಲೇ ಇಲ್ಲ. ಫೆಬ್ರವರಿ 5-15ರ ವರೆಗೆ ಅವರು ನಾಗಪುರದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಇದಾದ ನಂತರ ಕ್ವಾರಂಟೈನ್ ನಲ್ಲಿದ್ದರು. ಸಿಎಂ ಕೂಡಾ ಇವರ ರಾಜೀನಾಮೆಯನ್ನು ಕೇಳಿಲ್ಲ. ಹಾಗಾಗಿ, ಅನಿಲ್ ದೇಶ್ ಮುಖ್ ರಾಜೀನಾಮೆ ನೀಡುವ ಪ್ರಮೇಯವೇ ಎದುರಾಗುವುದಿಲ್ಲ"ಎನ್ನುವ ಹೇಳಿಕೆಯನ್ನು ಶರದ್ ಪವಾರ್ ನೀಡಿದ್ದಾರೆ.
ಶಿವಸೇನೆಯಲ್ಲೂ ಈ ವಿಚಾರದಲ್ಲಿ ಭಿನ್ನಾಭಿಪ್ರಾಯ
ಆದರೆ, ಈ ವಿದ್ಯಮಾನ ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡುತ್ತಿರುವುದು ಒಂದು ಕಡೆಯಾದರೆ, ಸಂಸತ್ತಿನಲ್ಲೂ ಈ ವಿಚಾರವನ್ನು ಬಿಜೆಪಿ ಕೆದಕಿದೆ. ಇನ್ನು, ಶಿವಸೇನೆಯಲ್ಲೂ ಈ ವಿಚಾರದಲ್ಲಿ ಭಿನ್ನಾಭಿಪ್ರಾಯಗಳಿವೆ. ಪಕ್ಷದ ಹಲವು ಮುಖಂಡರು ಈ ವಿಚಾರ, ಸರಕಾರದ ಇಮೇಜಿಗೆ ಧಕ್ಕೆಯಾಗುವ ಸಾಧ್ಯತೆಯಿರುವುದರಿಂದ, ಅನಿಲ್ ದೇಶಮುಖ್ ರಾಜೀನಾಮೆ ನೀಡುವುದೇ ಸೂಕ್ತ ಎನ್ನುವ ಅಭಿಪ್ರಾಯವನ್ನು ಹೊಂದಿದ್ದಾರೆ ಎಂದು ವರದಿಯಾಗಿದೆ.