ಸಂಜು ಚಿತ್ರದ ವಿರುದ್ಧ ಕಿಡಿಕಾರಿದ ಆರೆಸ್ಸೆಸ್ ಮುಖವಾಣಿ
ಮುಂಬೈ, ಜುಲೈ 12: ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರೆಸ್ಸೆಸ್) ನ ಮುಖವಾಣಿ 'ಪಾಂಚಜನ್ಯ'ದಲ್ಲಿ ಹಿಂದಿ ಸಿನಿಮಾ 'ಸಂಜು' ಬಗ್ಗೆ ಕಟು ಶಬ್ದಗಳಿಂದ ಟೀಕಾಪ್ರಹಾರ ಮಾಡಲಾಗಿದೆ.
ನಟ ಸಂಜಯ್ ದತ್ ಅವರ ಜೀವನ ಆಧಾರಿತ ಈ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟ ರಣಬೀರ್ ಕಪೂರ್, ಪರೇಶ್ ರಾವಲ್, ಮನಿಷಾ ಕೊಯಿರಾಲಾ, ಸೋನಂ ಕಪೂರ್ ಮುಂತಾದವರು ಅಭಿನಯಿಸಿದ್ದು, ರಾಜ್ ಕುಮಾರ್ ಹಿರಾನಿ ನಿರ್ದೇಶನವಿದೆ. ಜೂನ್ 29ರಂದು ತೆರೆ ಕಂಡ ಚಿತ್ರ, ಭರ್ಜರಿ ಯಶಸ್ಸು ಕಂಡಿದೆ.
ಕೇಂದ್ರ ಸಚಿವ ನಿತಿನ್ ಗಡ್ಕರಿ ಕೂಡಾ ಚಿತ್ರವನ್ನು ನೋಡಿ ಅದ್ಭುತ ಎಂದಿದ್ದಾರೆ. ಆದರೆ, ಸಂಜು ಚಿತ್ರ ಸೇರಿದಂತೆ ಬಾಲಿವುಡ್ ನಲ್ಲಿ ಖಳಪಾತ್ರಗಳನ್ನು ವಿಜೃಂಭಿಸುವಂತೆ ಚಿತ್ರಗಳು ಬರುತ್ತಿರುವುದನ್ನು ಆಕ್ಷೇಪಿಸಿ, ಪಾಂಚಜನ್ಯದಲ್ಲಿ ಕವರ್ ಸ್ಟೋರಿ ಮಾಡಲಾಗಿದೆ.
ಸಂಜು ಚಿತ್ರದ ಡೈಲಾಗ್ : ರಣ್ಬೀರ್ -ಅನುಷ್ಕಾ ವಿರುದ್ಧ ದೂರು
ರಾಜಕುಮಾರ್ ಹಿರಾನಿಗೆ ಪ್ರಶ್ನೆಗಳ ಸುರಿಮಳೆಗೈದು, ಸಂಜಯ್ ದತ್ ಚಿತ್ರವನ್ನು ಮಾಡಿರುವ ಉದ್ದೇಶವೇನು? ಈ ಚಿತ್ರದಿಂದ ಯುವಜನತೆಗೆ ಯಾವ ಸಂದೇಶ ನೀಡುತ್ತಿದ್ದೀರಿ? ಖಳಪಾತ್ರವನ್ನು ಮಾದರಿಯಾಗಿ ಯುವ ಜನತೆ ಸ್ವೀಕರಿಸುವುದಿಲ್ಲವೇ? ಅಪರಾಧ, ದೇಶದ್ರೋಹ ಕೃತ್ಯಗಳ ವೈಭವೀಕರಣ ಎಷ್ಟು ಸರಿ? ಸಂಜಯ್ ಅವರನ್ನು ಸಾಚಾ ಎಂದು ತೋರಿಸಲು ಅವರ ಪರ ಪ್ರಚಾರಕ್ಕಾಗಿ ಈ ಚಿತ್ರವನ್ನು ಬಳಸಿದ್ದು ಸರಿಯೇ ಎಂದು ಕೇಳಲಾಗಿದೆ.