ಶ್ರೀದೇವಿಯನ್ನು 'ಪಾರ್ಥಿವ ಶರೀರ' ಎಂದಿದ್ದಕ್ಕೆ ಹರಿಹಾಯ್ದ ರಿಷಿ ಕಪೂರ್!
ನವದೆಹಲಿ, ಫೆಬ್ರವರಿ 26: ಸಿನಿರಸಿಕರ ಹೃದಯದಲ್ಲಿ ನಿರಂತರವಾಗಿ ಕಚಗುಳಿಯಿಡುತ್ತಿದ್ದ ಶ್ರೀದೇವಿ ಇನ್ನಿಲ್ಲ ಎಂಬುದನ್ನು ಅರಗಿಸಿಕೊಳ್ಳಲು ಇನ್ನೂ ಹಲವು ವರ್ಷಗಳೇ ಬೇಕಾಗಬಹುದು. 54 ರ ಹರೆಯದಲ್ಲೂ ಪಾದರಸದಂತೆ ಓಡಾಡುತ್ತಿದ್ದ ಶ್ರೀದೇವಿ ಇಹಲೋಕತ್ಯಜಿಸಿದ್ದಾರೆ ಎಂದರೆ ಏನೋ ಕಸಿವಿಸಿ. ಹೇಳಲಾರದ ತಳಮಳ.
"ಅಯ್ಯೋ, ಮೊನ್ನೆ ತಾನೇ ಮಗಳ ಜೊತೆ ದುಬೈಯಲ್ಲಿ ಮದುವೆ ಸಮಾರಂಭವೊಂದರಲ್ಲಿ ಮಿಂಚುತ್ತಿದ್ದ ಬಾಲಿವುಡ್ ರಾಣಿಯನ್ನು ಕಂಡು, ಈಕೆಗೆ ವಯಸ್ಸೇ ಆಗಲ್ವಾ' ಎಂದುಕೊಂಡಿದ್ದೇವೆ. ಆದ್ರೆ ಈಗ ಆಕೆ ಭೂಮಿ ಮೇಲೆ ಇಲ್ಲ ಅಂದ್ರೆ ನಂಬೋದು ಹೇಗೆ?" ಎಂದು ಹಲವರು ಹಲುಬಿಕೊಂಡಿದ್ದಾರೆ. ಆದರೆ ಸತ್ಯ ಸತ್ಯವೇ. ಶ್ರೀದೇವಿ ಇನ್ನಿಲ್ಲ. ಆದರೆ ಕೋಟ್ಯಂತರ ಅಭಿಮಾನಿಗಳ ಹೃದಯ ಸಾಮ್ರಾಜ್ಯದಲ್ಲಿ ಆಕೆ ಎಂದಿಗೂ ಪಟ್ಟದ ರಾಣಿಯೇ!
ಶ್ರೀದೇವಿಯವರ ಸಾವಿಗೆ ನಿಜವಾದ ಕಾರಣವಾದರೂ ಏನು?
ಶ್ರೀದೇವಿ ಅಗಲಿಕೆ ಬಾಲಿವುಡ್ ರಂಗವನ್ನು ಸ್ತಬ್ದವಾಗಿಸಿದೆ. ಹಲವರ ಪಾಲಿಗೆ ರೋಲ್ ಮಾಡೆಲ್ ಎನ್ನಿಸಿದ್ದ ಶ್ರೀದೇವಿ ಅವರ ಕುರಿತು ಬಾಲಿವುಡ್ ನ ಗಣ್ಯಾರಿಗಣ್ಯರು ಟ್ವೀಟ್ ಮಾಡಿದ್ದಾರೆ. ಅವರೊಂದಿಗಿನ ತಮ್ಮ ಅನುಭವವನ್ನು ಹಂಚಿಕೊಂಡು ಕಂಬನಿ ಮಿಡಿದಿದ್ದಾರೆ. ಆದರೆ ಶ್ರಿದೇವಿ ಅವರೊಂದಿಗೆ ಹಲವು ಚಿತ್ರಗಳಲ್ಲಿ ನಟಿಸಿದ ಬಾಲಿವುಡ್ ನಟ ರಿಷಿ ಕಪೂರ್, ಶ್ರೀದೇವಿಯವರನ್ನು 'ಪಾರ್ಥಿವ ಶರೀರ' ಎಂದಿದ್ದಕ್ಕಾಗಿ ಮಾಧ್ಯಮಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅವರ ಪ್ರಕಾರ ಶ್ರೀದೇವಿ ಇನ್ನೂ ಸತ್ತಿಲ್ಲ..!
ಜೇನು ತೊಟ್ಟಿಕ್ಕುವಂಥ ಧ್ವನಿ, ಶ್ರೀದೇವಿ ಎಂಬ ಕೋಮಲ ಸೌಗಂಧಿಕಾ ಪುಷ್ಪ
|
ಶ್ರೀದೇವಿ ಎಂದರೆ ಕೇವಲ ದೇಹ ಮಾತ್ರವೇ..?
ಶ್ರೀದೇವಿ ಇದ್ದಕ್ಕಿದ್ದಂತೆ 'ಪಾರ್ಥಿವ ಶರೀರ'ವಾಗಿಬಿಟ್ತಿದ್ದು ಹೇಗೆ? ಎಲ್ಲ ಟಿವಿ ಚಾನೆಲ್ ಗಳೂ, 'ಶ್ರೀದೇವಿ ಪಾರ್ಥಿವ ಶರೀರವನ್ನು ಮುಂಬೈಗೆ ತರಲಾಗುತ್ತಿದೆ' ಎನ್ನುತ್ತಿವೆ. ಶ್ರೀದೇವಿ ಎಂಬ ದೈತ್ಯ ಪ್ರತಿಭೆ, ಇದ್ದಕ್ಕಿದ್ದಂತೆ ಕೇವಲ 'ದೇಹ' ವಷ್ಟೇ ಎಂದುಕೊಂಡರೆ ಅದು ಸರಿಯೇ? ಎಂದು ಅವರು ಭಾವುಕರಾಗಿ ಪ್ರಶ್ನಿಸಿದ್ದಾರೆ.
|
ಆಕಾಶದಲ್ಲಿ ಬೆಳದಿಂಗಳಿಲ್ಲ!
ಇನ್ನು ಮೇಲೆ ರಾತ್ರಿ ಆಕಾಶದಲ್ಲಿ ಬೆಳದಿಂಗಳಿರೋಲ್ಲ... ಯಾಕಂದ್ರೆ ಚಾಂದಿನಿ ನಮ್ಮನ್ನೆಲ್ಲ ಬಿಟ್ಟು ಹಿಂತಿರುಗಿ ಬರಲಾರದ ಲೋಕಕ್ಕೆ ಹೋಗಿದ್ದಾರೆ ಎಂದು ಸಹ ರಿಷಿ ಕಪೂರ್ ಟ್ವೀಟ್ ಮೂಲಕ ಕಂಬನಿ ಮಿಡಿದಿದ್ದಾರೆ.
ಶ್ರೀದೇವಿಯೊಂದಿಗೆ ರಿಷಿ ನಟಿಸಿದ ಪ್ರಮುಖ ಚಿತ್ರಗಳು
ರಿಷಿ ಕಪೂರ್ ಅವರು ಶ್ರೀದೇವಿಯೊಂದಿಗೆ ಚಾಂದಿನಿ, ನಾಗಿನ, ಗುರುದೇವ್, ಬಂಜರನ್, ಕೌನ್ ಸಚ್ಚಾ, ಕೌನ್ ಜೂಟಾ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದರು.
ಮದುವೆ ಸಂಭ್ರಮದಲ್ಲಿ ಸ್ಮಶಾನ ಮೌನ
ದುಬೈಯಲ್ಲಿ ನಡೆಯುತ್ತಿದ್ದ ಸಂಬಂಧಿ ಮೋಹಿತ್ ಮರ್ವಾ ಮದುವೆ ಸಂಭ್ರಮದಲ್ಲಿ ತಮ್ಮ ಮಗಳು ಖುಷಿ, ಪತಿ ಬೋನಿ ಕಪೂರ್ ಜೊತೆ ಶ್ರೀದೇವಿ ಪಾಲ್ಗೊಂಡಿದ್ದರು. ಫೆ.24 ರ ರಾತ್ರಿ ಸುಮಾರು 11 ರಿಂದ 11: 30 ರ ಸುಮಾರಿಗೆ ಹೊಟೇಲ್ ನಲ್ಲಿ ಕುಸಿದು ಬಿದ್ದ ಅವರು ತೀವ್ರ ಹೃದಯಾಘಾತದಿಂದ ಕೊನೆಯುಸಿರೆಳೆದರು. ಅವರ ಪಾರ್ಥಿವ ಶರೀರವನ್ನು ಇಂದು ದುಬೈನಿಂದ ಬಾಂಬೆಗೆ ತರಲಾಗುತ್ತಿದೆ.