ಶಾಸಕರ 'ಹೈಜಾಕ್' ಭಯ: ಶುರುವಾಯ್ತು ರೆಸಾರ್ಟ್ ರಾಜಕೀಯ
ಮುಂಬೈ, ನವೆಂಬರ್ 23: ಮಹಾರಾಷ್ಟ್ರದಲ್ಲಿ ಶುಕ್ರವಾರ ಸಂಜೆವರೆಗೆ ನಡೆಯುತ್ತಿದ್ದ ರಾಜಕೀಯ ಬೆಳೆವಣಿಗೆಯೇ ಒಂದು, ಶನಿವಾರ ಬೆಳಿಗ್ಗೆ ನಿದ್ದೆಯಿಂದ ಎದ್ದು ಕಣ್ಣುಜ್ಜಿಕೊಳ್ಳುತ್ತಾ ಟಿವಿ ಹಾಕಿದವರಿಗೆ ಕಂಡಿದ್ದೇ ಇನ್ನೊಂದು. ರಾತ್ರಿ ಬೆಳಗಾಗುವುದರೊಳಗೆ ನಡೆದ ಕ್ಷಿಪ್ರ ಬೆಳವಣಿಗೆಯಲ್ಲಿ ಬಿಜೆಪಿಯ ದೇವೇಂದ್ರ ಫಡ್ನವಿಸ್, ಎನ್ಸಿಪಿಯ ಬಂಡಾಯ ಶಾಸಕರ ಬೆಂಬಲದೊಂದಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು.
1978ರಲ್ಲಿ ಶರದ್ ಪವಾರ್ ಮಾಡಿದ್ದೇನು?: 'ಕರ್ಮ' ವಾಪಸ್!
ನವೆಂಬರ್ 30ರಂದು ಫಡ್ನವಿಸ್ ಅವರು ವಿಶ್ವಾಸಮತ ಸಾಬೀತುಪಡಿಸಿಕೊಳ್ಳಬೇಕಿದೆ. ಆ ಅವಧಿಯ ಒಳಗೆ ಮಹಾರಾಷ್ಟ್ರದಲ್ಲಿ ಮತ್ತಷ್ಟು ರಾಜಕೀಯ ಬೆಳವಣಿಗೆಗಳು ನಡೆಯುವ ಸಾಧ್ಯತೆ ಇದೆ. ಹೀಗಾಗಿ ತಮ್ಮ ಶಾಸಕರು ಬೇರೆ ಪಕ್ಷದವರ ಪ್ರಭಾವಕ್ಕೆ ಒಳಗಾಗಿ ಅವರ ಕಡೆಗೆ ಸೇರಿಕೊಳ್ಳುವ ಸಾಧ್ಯತೆ ಇರುವುದರಿಂದ ಎಲ್ಲರೂ ತಮ್ಮ ತಮ್ಮ ಶಾಸಕರನ್ನು ರಕ್ಷಿಸುವ ಅನಿವಾರ್ಯತೆಗೆ ಒಳಗಾಗಿದ್ದಾರೆ.
ಹೀಗಾಗಿ ಕಾಂಗ್ರೆಸ್, ಎನ್ಸಿಪಿ, ಶಿವಸೇನಾ ಮಾತ್ರವಲ್ಲದೆ ಬಿಜೆಪಿ ಕೂಡ ರೆಸಾರ್ಟ್ ರಾಜಕಾರಣಕ್ಕೆ ಮುಮದಾಗುವ ಸೂಚನೆ ದೊರೆತಿದೆ. ಕಾಂಗ್ರೆಸ್ ತನ್ನ ಶಾಸಕರು 'ಆಪರೇಷನ್'ಗೆ ಒಳಗಾಗುವುದನ್ನು ತಡೆಯಲು ಎಲ್ಲ 44 ಶಾಸಕರನ್ನು ರಾಜ್ಯದಿಂದ ಹೊರಗಿನ ಸುರಕ್ಷಿತ ಸ್ಥಳಕ್ಕೆ ಸಾಗಿಸಲು ಮುಂದಾಗಿದೆ. ಮೂಲಗಳ ಪ್ರಕಾರ ಪಕ್ಷವು ಮಧ್ಯಪ್ರದೇಶದ ಭೋಪಾಲ್ನ ರೆಸಾರ್ಟ್ ಒಂದಕ್ಕೆ ರವಾನಿಸಲು ನಿರ್ಧರಿಸಿತ್ತು. ಈಗ ತಂತ್ರ ಬದಲಿಸಿ ರಾಜಸ್ಥಾನ ಜೈಪುರಕ್ಕೆ ಕರೆದೊಯ್ಯಲು ಮುಂದಾಗಿದೆ. ಈ ಎರಡೂ ರಾಜ್ಯಗಳಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸುತ್ತಿದೆ.
ಎನ್ಸಿಪಿ ಕೂಡ ತನ್ನ ಶಾಸಕರನ್ನು ಬೇರೆಡೆ ಸ್ಥಳಾಂತರಿಸಲು ಸಿದ್ಧತೆ ನಡೆಸಿದೆ. ಆದರ ಶರದ್ ಪವಾರ ಅವರ ಬಣದಲ್ಲಿ ಮತ್ತು ಅಜಿತ್ ಪವಾರ್ ಅವರ ಬಣದಲ್ಲಿ ಎಷ್ಟು ಶಾಸಕರಿದ್ದಾರೆ, ಯಾರು ಯಾರ ಸಂಪರ್ಕದಲ್ಲಿದ್ದಾರೆ ಎನ್ನುವುದು ಸ್ಪಷ್ಟವಾಗಿಲ್ಲ.
ರಾತ್ರಿಯಿಂದ ಬೆಳಗಾಗುವುದರಲ್ಲಿ ಏನೇನಾಯ್ತು?: ಮಹಾರಾಷ್ಟ್ರ 'ಕ್ಷಿಪ್ರ ಕ್ರಾಂತಿ'ಯ ಟೈಮ್ಲೈನ್
ಈ ನಡುವೆ ಶಿವಸೇನಾದ ಶಾಸಕರು ಈಗಾಗಲೇ ಮುಂಬೈನ ಹೋಟೆಲ್ ಒಂದರಲ್ಲಿ ಸೇರಿಕೊಂಡಿದ್ದಾರೆ. ಪಕ್ಷದ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರನ್ನು ಸೇರಿಕೊಳ್ಳಲಿದ್ದು, ಮುಂದಿನ ನಡೆಯ ಬಗ್ಗೆ ತೀರ್ಮಾನಿಸಲಿದ್ದಾರೆ.
ಬಹುಮತ ಸಾಬೀತುಪಡಿಸಿಕೊಳ್ಳಬೇಕಾದ ಒತ್ತಡದಲ್ಲಿರುವ ಮುಖ್ಯಮಂತ್ರಿ ದೇವೇಂಡ್ರ ಫಡ್ನವಿಸ್, ತಮ್ಮ ಶಾಸಕರ ಜತೆ ನಿರಂತರ ಸಂಪರ್ಕದಲ್ಲಿರಬೇಕಾಗಿದೆ. ಇದಕ್ಕಾಗಿ ಬಿಜೆಪಿ ಕೂಡ ರೆಸಾರ್ಟ್ಗೆ ತನ್ನ ಶಾಸಕರನ್ನು ಸ್ಥಳಾಂತರಿಸುವ ಸಾಧ್ಯತೆ ಇದೆ.