ಎಲ್ಲ ಭಾಷೆಗಳಲ್ಲೂ ಚಾನೆಲ್ ಮಾಡುತ್ತೇನೆ: ಅರ್ನಬ್ ಗೋಸ್ವಾಮಿ
ಮುಂಬೈ, ನವೆಂಬರ್ 11: ಸುಪ್ರೀಂಕೋರ್ಟ್ ಜಾಮೀನು ನೀಡಿದ ಬಳಿಕ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ಅವರನ್ನು ಬುಧವಾರ ರಾತ್ರಿ ತನೋಜಾ ಜೈಲಿನಿಂದ ಬಿಡುಗಡೆ ಮಾಡಲಾಯಿತು. ಜೈಲಿನ ಹೊರಗೆ ನೆರೆದಿದ್ದ ಜನರ ಕಡೆಗೆ ಕೈಬೀಸಿದ ಅರ್ನಬ್, ಮೈಕ್ ಹಿಡಿದ ಭಾರತ್ ಮಾತಾ ಕಿ ಜೈ ಎಂಬ ಘೋಷಣೆ ಕೂಗಿದರು.
ಬಳಿಕ ರಿಪಬ್ಲಿಕ್ ವಾಹಿನಿಯ ಕಚೇರಿಗೆ ಮರಳಿದ ಅರ್ನಬ್, ಸಹೋದ್ಯೋಗಿಗಳೊಂದಿಗೆ ಕೇಕ್ ಕತ್ತರಿಸಿ ಸಂಭ್ರಮಿಸಿದರು.
ಅರ್ನಬ್ ಗೋಸ್ವಾಮಿಗೆ ಸುಪ್ರೀಂಕೋರ್ಟ್ ಜಾಮೀನು: ಕೋರ್ಟ್ ಹೇಳಿದ್ದೇನು?
ಯಾವುದೇ ಶಕ್ತಿಯು ರಿಪಬ್ಲಿಕ್ ನೆಟ್ವರ್ಕ್ಅನ್ನು ಮುಗಿಸಲು ಸಾಧ್ಯವಿಲ್ಲ. ನಾವು ಇನ್ನು ಮುಂದಿನ 16-17 ತಿಂಗಳಲ್ಲಿ ಭಾರತದ ಪ್ರತಿ ಭಾಷೆಯಲ್ಲಿಯೂ ಸುದ್ದಿ ವಾಹಿನಿಯಲ್ಲಿ ಆರಂಭಿಸಲಿದ್ದೇವೆ. ಅಂತಾರಾಷ್ಟ್ರೀಯ ನೆಟ್ವರ್ಕ್ ಬೆಳೆಸಲಿದ್ದೇವೆ. ಉದ್ಧವ್ ಠಾಕ್ರೆ, ನಿಮಗೆ ಸಾಧ್ಯವಾದರೆ ತಡೆಯಿರಿ. ಜೈಲಿಗೆ ಇನ್ನೊಮ್ಮೆ ಕಳಿಸಿ. ಅಲ್ಲಿಯೇ ಚಾನೆಲ್ ಲಾಂಜ್ ಮಾಡುತ್ತೇನೆ ಎಂದು ಸವಾಲು ಹಾಕಿದರು.
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ವಾಗ್ದಾಳಿ ನಡೆಸಿದ ಅರ್ನಬ್, ಪ್ರಮಾಣವಚನ ಸ್ವೀಕಾರದ ವೇಳೆ ಏನೆಂದು ಪ್ರತಿಜ್ಞೆ ಮಾಡಿದ್ದೀರಿ ಎಂಬುದನ್ನು ನೆನಪಿಸಿಕೊಳ್ಳಿ. ನಾನು ಇದರಿಂದ ಎದೆಗುಂದುವುದಿಲ್ಲ. ಇದರಿಂದ ಮತ್ತಷ್ಟು ಬಲಗೊಂಡಿದ್ದೇನೆ. ನಮಗೆ ದೇಶ ಮುಖ್ಯ. ಇದರಲ್ಲಿ ಯಾವ ರಾಜಿಯೂ ಆಗುವುದಿಲ್ಲ ಎಂದರು.
ನಾವು ಅರ್ನಬ್ ಚಾನೆಲ್ ನೋಡುವುದಿಲ್ಲ, ಆದರೆ.. :ಸುಪ್ರೀಂ ಹೇಳಿದ್ದೇನು?
ಆಟ ಈಗಿನ್ನೂ ಶುರುವಾಗಿದೆ. ಇದು ಭಾರತದ ಜನರ ವಿಜಯ. ನಾನು ಸುಪ್ರೀಂಕೋರ್ಟ್ಗೆ ಆಭಾರಿಯಾಗಿರುತ್ತೇನೆ ಎಂದ ಅರ್ನಬ್, ಮಹಾರಾಷ್ಟ್ರದ ಜನತೆ ನನ್ನೊಂದಿಗೆ ಇದ್ದಾರೆ, 'ಜೈ ಮಹಾರಾಷ್ಟ್ರ' ಎಂದು ಘೋಷಣೆ ಕೂಗಿದರು.