ಮುಂಬೈನಲ್ಲಿ ಬೆಳ್ಳಂಬೆಳಿಗ್ಗೆ ಹೈಡ್ರಾಮಾ: ಅರ್ನಬ್ ಗೋಸ್ವಾಮಿ ಬಂಧನ
ಮುಂಬೈ, ನವೆಂಬರ್ 4: ಮಹಾರಾಷ್ಟ್ರ ಸರ್ಕಾರ ಮತ್ತು ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ನಡುವಿನ ಸಮರ ತಾರಕಕ್ಕೇರಿದೆ. ಬುಧವಾರ ಬೆಳಿಗ್ಗೆ ಅರ್ನಬ್ ಗೋಸ್ವಾಮಿ ಅವರ ಮನೆಗೆ ನುಗ್ಗಿದ ಪೊಲೀಸರು ಅವರನ್ನು ಬಂಧಿಸಿ ಕರೆದೊಯ್ದಿದ್ದಾರೆ. ಬಂಧನದ ವೇಳೆ ಪೊಲೀಸರು ತಮ್ಮ ಮೇಲೆ ಹಾಗೂ ಮಗನ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾರೆ ಎಂದು ಅರ್ನಬ್ ಆರೋಪಿಸಿದ್ದಾರೆ.
ಮುಂಬೈನಲ್ಲಿರುವ ಅರ್ನಬ್ ಮನೆಗೆ ತೆರಳಿದ್ದ ಪೊಲೀಸರು ಅವರನ್ನು ತಮ್ಮ ಜೊತೆ ಬರುವಂತೆ ಸೂಚಿಸಿದ್ದಾರೆ. ಅವರು ನಿರಾಕರಿಸಿದಾಗ ಅಕ್ಷರಶಃ ಎಳೆದೊಯ್ದಿದ್ದಾರೆ. ಅವರನ್ನು ಪೊಲೀಸ್ ವ್ಯಾನ್ಗೆ ಬಲವಂತವಾಗಿ ತಳ್ಳುತ್ತಿರುವ ದೃಶ್ಯಗಳು ವಿಡಿಯೋದಲ್ಲಿ ದಾಖಲಾಗಿದೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಹಲ್ಲೆ. ಮಹಾರಾಷ್ಟ್ರ ಸರ್ಕಾರ ಉದ್ದೇಶಪೂರ್ವಕವಾಗಿ ಈ ದಾಳಿ ಮಾಡಿದೆ ಎಂದು ರಿಪಬ್ಲಿಕ್ ಟಿವಿ ಆರೋಪಿಸಿದೆ.
2018ರ ಆತ್ಮಹತ್ಯೆಗೆ ಕುಮ್ಮಕ್ಕು ಆರೋಪ ಪ್ರಕರಣವೊಂದನ್ನು ಪುನಃ ತೆರೆದಿರುವ ಪೊಲೀಸರು, ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ನಬ್ ಅವರನ್ನು ಬಂಧಿಸಿದ್ದಾರೆ ಎಂದು ಹೇಳಲಾಗಿದೆ. ಎರಡು ವರ್ಷಗಳ ಹಿಂದಿನ ಅರ್ನಬ್ ಗೋಸ್ವಾಮಿ ವಿರುದ್ಧದ ಪ್ರಕರಣವನ್ನು ಪೊಲೀಸರು ಸ್ಥಗಿತಗೊಳಿಸಿದ್ದರು. ಈಗ ಅದನ್ನು ಮತ್ತೆ ತೆರೆಯಲಾಗಿದೆ.
ಅರ್ನಬ್ ಮನೆಗೆ ನುಗ್ಗಿದ ಸುಮಾರು ಹತ್ತು ಪೊಲೀಸರು ಅವರನ್ನು ಬಲವಂತವಾಗಿ ಎಳೆದೊಯ್ದಿದ್ದಾರೆ. ಈ ವೇಳೆ ಅರ್ನಬ್ ಮನೆಗೆ ಪ್ರವೇಶಿಸಲು ಪ್ರಯತ್ನಿಸಿದ ರಿಪಬ್ಲಿಕ್ ಟಿವಿಯ ಕಾರ್ಯನಿರ್ವಾಹಕ ಸಂಪಾದಕ ನಿರಂಜನ್ ನಾರಾಯಣಸ್ವಾಮಿ ಮತ್ತು ಹಿರಿಯ ಸಹ ಸಂಪಾದಕ ಅಂಜಯ್ ಪಾಠಕ್ ಅವರಿಗೆ ಪೊಲೀಸರು ತಡೆಯೊಡ್ಡಿದ್ದಾರೆ. ಮುಂದೆ ಓದಿ.
ಎಂಟು ವ್ಯಾನ್ಗಳಲ್ಲಿ ಪೊಲೀಸರು
ಸುಮಾರು ಎಂಟು ಪೊಲೀಸ್ ವಾಹನಗಳು, ಕನಿಷ್ಠ 40-50 ಪೊಲೀಸ್ ಸಿಬ್ಬಂದಿ ಅರ್ನಬ್ ಅವರ ಮನೆಯ ಸುತ್ತಲೂ ನೆರೆದಿದ್ದರು. ಅವರಲ್ಲಿ ಹೆಚ್ಚಿನವರು ಶಸ್ತ್ರಸಜ್ಜಿತರಾಗಿದ್ದರು. ಪತ್ರಕರ್ತನ ಬಂಧನಕ್ಕೆ ಇಷ್ಟೆಲ್ಲ ತಯಾರಿ ಮಾಡಿರುವುದು ಮತ್ತು ಅವರನ್ನು ಭಯೋತ್ಪಾದಕನಂತೆ ನಡೆಸಿಕೊಂಡಿರುವುದು ಮಹಾರಾಷ್ಟ್ರ ಸರ್ಕಾರ ಹಾಗೂ ಪೊಲೀಸರ ದೌರ್ಜನ್ಯದ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ವಾಹಿನಿ ಆರೋಪಿಸಿದೆ.
|
ವರದಿಗಾರಿಕೆಗೂ ಬಿಡಲಿಲ್ಲ
ವರದಿಗಾರಿಕೆ ಮಾಡುವುದು ತಮ್ಮ ಹಕ್ಕು. ಆದರೆ ಅದಕ್ಕೆಂದು ತೆರಳಿದ್ದಾಗ ಅರ್ನಬ್ ನಿವಾಸದಿಂದ ತಮ್ಮನ್ನು ಹೊರಗೆ ದಬ್ಬಲಾಯಿತು ಎಂದು ನಿರಂಜನ್ ಆರೋಪಿಸಿದ್ದಾರೆ. ಜತೆಗೆ ತಮ್ಮ ಫೋನ್ ಕಿತ್ತುಕೊಳ್ಳಲು ಸಹ ಮುಂಬೈ ಪೊಲೀಸರು ಪ್ರಯತ್ನಿಸಿದರು ಎಂದು ದೂರಿದ್ದಾರೆ.
ಪರಮ್ ಬೀರ್ ಸಿಂಗ್-ಅರ್ನಬ್ ಕಿತ್ತಾಟ
ಮುಂಬೈ ನಗರದಲ್ಲಿ ಅತ್ಯಂತ ದೊಡ್ಡ ಹವಾಲಾ ಆಪರೇಟರ್ ಎಂದು ಅರ್ನಬ್ ಗೋಸ್ವಾಮಿ ವಿರುದ್ಧ ಮುಂಬೈ ಪೊಲೀಸ್ ಕಮಿಷನರ್ ಪರಮ್ ಬೀರ್ ಸಿಂಗ್ ಆರೋಪ ಮಾಡಿದ್ದರು. ಸುಶಾಂತ್ ಸಿಂಗ್ ಪ್ರಕರಣದಲ್ಲಿ ಮುಂಬೈ ಪೊಲೀಸರ ವೈಫಲ್ಯದ ಕುರಿತಾಗಿ ಪರಮ್ ಬೀರ್ ಸಿಂಗ್ ರಾಜೀನಾಮೆಗೆ ಅರ್ನಬ್ ಆಗ್ರಹಿಸಿದ್ದರು. ಹೀಗಾಗಿ ಇದು ದ್ವೇಷದ ಕಾರಣದಿಂದ ಮಾಡಿರುವ ಬಂಧನ ಎಂದು ರಿಪಬ್ಲಿಕ್ ಟಿವಿ ಪರ ಅನೇಕರು ಸಾಮಾಜಿಕ ಜಾಲತಾಣದಲ್ಲಿ ಆರೋಪಿಸಿದ್ದಾರೆ.
ನಕಲಿ ಟಿಆರ್ಪಿ ಹಗರಣ
ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ಮುಂಬೈ ಪೊಲೀಸ್, ಬಾಲಿವುಡ್ ಮತ್ತು ಮಹಾರಾಷ್ಟ್ರ ಸರ್ಕಾರದ ವಿರುದ್ಧ ಅರ್ನಬ್ ನಿರಂತರ ವರದಿಗಳನ್ನು ಬಿತ್ತರಿಸಿದ್ದರು. ಈ ಸಂಬಂಧ ಅರ್ನಬ್ ವಿರುದ್ಧ ಅನೇಕ ಪ್ರಕರಣಗಳು ದಾಖಲಾಗಿದ್ದವು. ಜತೆಗೆ ನಕಲಿ ಟಿಆರ್ಪಿ ಹಗರಣದಲ್ಲಿಯೂ ಅವರ ಹೆಸರು ಕೇಳಿಬಂದಿತ್ತು.