ಪತ್ರಕರ್ತ ಅರ್ನಬ್ ದಂಪತಿ ಮೇಲೆ ಹಲ್ಲೆ: ಸೋನಿಯಾ ಮೇಲೆ ಆರೋಪ
ಮುಂಬೈ, ಏಪ್ರಿಲ್ 23: ಖ್ಯಾತ ಪತ್ರಕರ್ತ, ರಿಪಬ್ಲಿಕ್ ಸುದ್ದಿ ವಾಹಿನಿಯ ಸಂಪಾದಕ ಅರ್ನಬ್ ಗೋಸ್ವಾಮಿ ದಂಪತಿ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದೆ. ನಿನ್ನೆ (ಏಪ್ರಿಲ್ 23) ಮಧ್ಯರಾತ್ರಿ ಮುಂಬೈನಲ್ಲಿ ಈ ಘಟನೆ ಸಂಭವಿಸಿದೆ.
Recommended Video
ನಿನ್ನೆ ಮಧ್ಯರಾತ್ರಿ ಕೆಲಸ ಮುಗಿಸಿಕೊಂಡು ತಮ್ಮ ಸುದ್ದಿ ವಾಹಿನಿಯಿಂದ ಪತ್ನಿ ಸಾಮಿಯಾ ಗೋಸ್ವಾಮಿ ಜೊತೆಗೆ ಕಾರ್ನಲ್ಲಿ ಅರ್ನಬ್ ಹೋಗುತ್ತಿದ್ದರು. ಈ ವೇಳೆ ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ನಂತರ ಅರ್ನಬ್ ಘಟನೆ ಬಗ್ಗೆ ಮುಂಬೈ ಪೊಲೀಸರಿಗೆ ತಿಳಿಸಿದ್ದು, ದೂರು ದಾಖಲು ಮಾಡಿದ್ದಾರೆ.
ರಿಪಬ್ಲಿಕ್ ವಾಹಿನಿಯಲ್ಲಿ ಅರ್ನಬ್ ಗೋಸ್ವಾಮಿಯವರದ್ದೇ ಸಿಂಹಪಾಲು ಹೂಡಿಕೆ
ಹಲ್ಲೆ ಘಟನೆ ನಡೆದ ನಂತರ ಈ ಬಗ್ಗೆ ಅರ್ನಬ್ ಗೋಸ್ವಾಮಿ ವಿಡಿಯೋ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಅಚ್ಚರಿ ಎಂದರೆ, ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಈ ಘಟನೆಗೆ ಅವರೇ ನೇರ ಹೊಣೆ ಎಂದು ಅರ್ನಬ್ ತಿಳಿಸಿದ್ದಾರೆ.
ಸೋನಿಯಾಗೆ ಪ್ರಶ್ನೆ ಹಾಕಿದ್ದ ಅರ್ನಬ್
ಮಹಾರಾಷ್ಟ್ರದ ಪಲ್ಘಾರ್ನಲ್ಲಿ ಆದ ಹಿಂದೂ ಸಾಧುಗಳ ಹತ್ಯೆ ಬಗ್ಗೆ ತಮ್ಮ ಸುದ್ದಿ ರಿಪಬ್ಲಿಕ್ ಸುದ್ದಿ ವಾಹಿನಿಯಲ್ಲಿ ಅರ್ನಬ್ ಚರ್ಚೆ ನಡೆಸಿದ್ದರು. ಈ ವೇಳೆ ಇದರ ಬಗ್ಗೆ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿಗೆ ಪ್ರಶ್ನೆ ಮಾಡಿದ್ದರು. ಈ ಘಟನೆ ಬಗ್ಗೆ ಏಕೆ ಮೌನವಾಗಿದ್ದೀರಾ..? ಎಂದು ಕೇಳಿದ್ದರು. ಮಾತಿನ ಬರದಲ್ಲಿ 'ಕ್ರಿಶ್ಚಿಯನ್ ಪಾದ್ರಿಗಳನ್ನು ಹೀಗೆ ಕೊಂದಿದ್ದರೆ ಇದೇ ರೀತಿ ಸುಮ್ಮನೆ ಇರುತ್ತಿದ್ದಿರಾ?' ಎಂದು ಪ್ರಶ್ನೆ ಮಾಡಿದ್ದರು.
ಹಲ್ಲೆಗೆ ಸೋನಿಯಾ ಕಾರಣ ಎಂದ ಅರ್ನಬ್
ಕೆಲವು ದಿನಗಳ ಹಿಂದೆ ವಾಹಿನಿಯ ಚರ್ಚಾ ಕಾರ್ಯಕ್ರಮದಲ್ಲಿ ಸೋನಿಯಾ ಗಾಂಧಿ ಮೇಲೆ ಅರ್ನಬ್ ಗರಂ ಆಗಿದ್ದರು. ಈಗ ತಮ್ಮ ಮೇಲೆ ಹಲ್ಲೆ ಮಾಡಿಸಿದ್ದು, ಸೋನಿಯಾ ಗಾಂಧಿ ಎಂದು ಹೇಳಿದ್ದಾರೆ. ಟ್ವಿಟ್ಟರ್ನಲ್ಲಿ ಅರ್ನಬ್ ಘಟನೆಯ ಬಗ್ಗೆ ಮಾತನಾಡಿರುವ ವಿಡಿಯೋ ಹರಿದಾಡುತ್ತಿದೆ. ತನಗೆ ಏನಾದರೂ ಸಂಬವಿಸಿದರೆ, ಅದಕ್ಕೆ ಸೋನಿಯಾ ಗಾಂಧಿ ಕಾರಣ ಎಂದು ಅವರು ಹೇಳಿದ್ದಾರೆ.
ಅರ್ನಬ್ ವಿರುದ್ಧ ಎಫ್ಐಆರ್
ಹಲ್ಲೆ ಘಟನೆ ನಡೆಯುವುದಕ್ಕೂ ಮುಂಚೆ ಛತ್ತೀಸ್ಗಢದ ರಾಯಪುರದಲ್ಲಿ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಮೋಹನ್ ಮಾರ್ಕಮ್ ಅರ್ನಬ್ ವಿರುದ್ಧ ದೂರು ದಾಖಲಿಸಿದ್ದರು. ಅರ್ನಬ್ ಅಪರಾಧಕ್ಕೆ ಪ್ರಚೋದನೆ ನೀಡಿದ್ದಾರೆ. ಎರಡು ಧರ್ಮಗಳ ನಡುವೆ ದ್ವೇಷ ಹುಟ್ಟುವಂತೆ ಮಾಡಿದ್ದಾರೆ. ಕೋಮು ಸೌಹಾರ್ದಕ್ಕೆ ಧಕ್ಕೆ ತಂದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು. ಈ ದೂರಿನ ಆಧಾರದ ಮೇಲೆ ಅರ್ನಬ್ ಮೇಲೆ ಪೊಲೀಸರು ಎಫ್ಐಆರ್ ದಾಖಲು ಮಾಡಿದ್ದಾರೆ.
ಅರ್ನಬ್ ಮೇಲೆ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ
ಪಾಲ್ಗರ್ನಲ್ಲಿ ನಡೆದ ಹಿಂದೂ ಸಾಧುಗಳ ಹತ್ಯೆಯ ವಿಷಯದಲ್ಲಿ ಸೋನಿಯಾ ಗಾಂಧಿ ಹೆಸರನ್ನು ಅರ್ನಬ್ ತೆಗೆದುಕೊಂಡು ಬಂದಿದ್ದು, ದೊಡ್ಡ ಚರ್ಚೆಗೆ ಕಾರಣವಾಗಿದೆ. ಕಾಂಗ್ರೆಸ್ ಕಾರ್ಯಕರ್ತರು ಅರ್ನಬ್ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಅನೇಕರು ಟ್ವಿಟ್ಟರ್ನಲ್ಲಿ #ArrestAntiIndiaArnab ಹಾಗೂ #arrestarnabgoswami ಎಂಬ ಹ್ಯಾಶ್ ಟ್ಯಾಗ್ಗಳ ಮೂಲಕ ಅರ್ನಬ್ ಬಂಧನಕ್ಕೆ ಆಗ್ರಹಿಸಿದ್ದಾರೆ.