ಮಹಾರಾಷ್ಟ್ರ; ಕೋವಿಡ್ ನಿಯಮಗಳಲ್ಲಿ ಮತ್ತೆ ಸಡಿಲಿಕೆ
ಮುಂಬೈ, ಅಕ್ಟೋಬರ್ 19: ದಿನ ಕಳೆದಂತೆ ದೇಶಾದ್ಯಂತ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿದ್ದು ಕೊರೊನಾ ನಿಯಮಗಳನ್ನು ಸಡಿಲಗೊಳಿಸಲಾಗುತ್ತಿದೆ. ಮಂಗಳವಾರ ಮಹಾರಾಷ್ಟ್ರದಲ್ಲಿ ಕೊರೊನಾ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ.
ಮಹಾರಾಷ್ಟ್ರದಲ್ಲಿ ರೆಸ್ಟೋರೆಂಟ್ಗಳು ಮಧ್ಯರಾತ್ರಿಯವರೆಗೆ ಮತ್ತು ಅಂಗಡಿಗಳು ರಾತ್ರಿ 11 ಗಂಟೆಯವರೆಗೆ ತೆರೆದಿರುತ್ತವೆ. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರ ಕೋವಿಡ್ ಸಂದರ್ಭದಲ್ಲಿ ಹೇರಿದ್ದ ನಿರ್ಬಂಧಗಳನ್ನು ಸಡಿಲಗೊಳಿಸಿದೆ.
ಈ ಹಿಂದೆ ರೆಸ್ಟೋರೆಂಟ್ಗಳಿಗೆ ಮತ್ತು ಅಂಗಡಿಗಳು ರಾತ್ರಿ 10 ರವರೆಗೆ ತೆರೆದಿರಲು ಮಾತ್ರ ಅವಕಾಶವಿತ್ತು. ಹೊಸ ಮಾರ್ಗಸೂಚಿಗಳ ಅನ್ವಯ ಕೆಲವು ಷರತ್ತುಗಳೊಂದಿಗೆ ಕೋವಿಡ್ ನಿರ್ಬಂಧಗಳನ್ನು ಸಡಿಲಗೊಳಿಸಿ ಆದೇಶ ಹೊರಡಿಸಲಾಗಿದೆ.
ರೆಸ್ಟೋರೆಂಟ್ ಸಿಬ್ಬಂದಿ ಸಂಪೂರ್ಣವಾಗಿ ಲಸಿಕೆ ಪಡೆದಿರುವುದು ಅತ್ಯಗತ್ಯವಾಗಿದೆ. ರೆಸ್ಟೋರೆಂಟ್ಗೆ ಪ್ರವೇಶ ಪಡೆಯುವ ಗ್ರಾಹಕರೂ ಸಹ ಲಸಿಕೆ ಹಾಕಿಸಿಕೊಂಡಿರಬೇಕು. ಈ ನಿಯಮವನ್ನು ಕಡ್ಡಾಯಗೊಳಿಸಲಾಗಿದೆ.
ಕೋವಿಡ್ ಹರಡುವುದನ್ನು ತಡೆಯಲು ಸಮಯ ನಿಯಂತ್ರಣ, ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಹಾಗೂ ಸಂದರ್ಶಕರು ಸಂಪೂರ್ಣ ಲಸಿಕೆ ಪಡೆದಿರುವುದು ಮುಂತಾದ ನಿರ್ಬಂಧಗಳನ್ನು ವಿಧಿಸಲಾಗಿದೆ ಎಂದು ಸರ್ಕಾರ ಹೇಳಿದೆ.
ಹೆಚ್ಚುವರಿ ಕ್ರಮವಾಗಿ ಸ್ಥಳೀಯ ಅಧಿಕಾರಿಗಳಿಗೆ ಅಗತ್ಯವಿರುವ ಸಮಯವನ್ನು ಕಡಿತಗೊಳಿಸಲು ಅವಕಾಶ ನೀಡಲಾಗಿದೆ. ಆದರೆ ಯಾವುದೇ ಹೆಚ್ಚುವರಿ ವಿಸ್ತರಣೆಯನ್ನು ವಿಶೇಷ ಅನುಮತಿಯಿಲ್ಲದೆ ಮಾಡಲು ಸಾಧ್ಯವಿಲ್ಲ ಎಂದು ಸರ್ಕಾರ ಹೇಳಿದೆ. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಕಚೇರಿಯು ಹೊಸ ಮಾರ್ಗಸೂಚಿಯನ್ನು ಟ್ವೀಟ್ ಮಾಡಿದೆ.
ಸೋಮವಾರ ಸಮಯವನ್ನು ವಿಸ್ತರಿಸುವ ನಿರ್ಧಾರವನ್ನು ಸರ್ಕಾರ ಕೈಗೊಂಡಿತ್ತು. ಆದರೂ ಆದೇಶದಲ್ಲಿ ಮುಂಬರುವ ಹಬ್ಬದ ದೃಷ್ಟಿಯಿಂದ, ಅಂಗಡಿಗಳು, ರೆಸ್ಟೋರೆಂಟ್ಗಳು ಮತ್ತು ಹೋಟೆಲ್ಗಳಿಗೆ ಸಮಯಕ್ಕೆ ನಿರ್ಬಂಧಗಳು ಹೇರುವ ಸಾಧ್ಯತೆ ಇದೆ.
ಕೋವಿಡ್ ಹೊಸ ಪ್ರಕರಣಗಳ ಸಂಖ್ಯೆ ರಾಜ್ಯದಲ್ಲಿ ನಿರಂತರ ಕುಸಿಯುತ್ತಿರುವುದರಿಂದ ರಾಜ್ಯ ಸರ್ಕಾರ ಮನೋರಂಜನಾ ಉದ್ಯಾನವನಗಳು ಮತ್ತು ಚಿತ್ರಮಂದಿರಗಳನ್ನು ಮತ್ತೆ ತೆರೆಯುವುದಾಗಿ ಘೋಷಿಸಿತ್ತು. ಮಾಲ್ ಮತ್ತು ಚಿತ್ರಮಂದಿರಗಳು ಅಕ್ಟೋಬರ್ 22 ರಿಂದ ತೆರೆದಿರುತ್ತವೆ ಎಂದು ತಿಳಿಸಲಾಗಿದೆ.
ಕಳೆದ ತಿಂಗಳು ಮಹಾರಾಷ್ಟ್ರದ ಅತಿದೊಡ್ಡ ಹಬ್ಬವಾದ ಗಣೇಶ ಚತುರ್ಥಿ ಸಮಯದಲ್ಲಿ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಿತ್ತು. ಹೆಚ್ಚು ಜನರು ಸೇರದಂತೆ ತಡೆಯಲು ಹಲವಾರು ನಿಯಮಗಳನ್ನು ಜಾರಿಗೊಳಿಸಿತ್ತು. ಗಣಪತಿ ಪೆಂಡೆಲ್ಗಳಲ್ಲಿ ಕೋವಿಡ್ ಸುರಕ್ಷತಾ ಕ್ರಮಗಳನ್ನು ಪಾಲಿಸುವಂತೆ ಹೇಳಿತ್ತು. ಆನ್ಲೈನ್ ದರ್ಶನ ವ್ಯವಸ್ಥೆ ಮಾಡಲು ಅವಕಾಶ ನೀಡಿತ್ತು.
ಮಹಾರಾಷ್ಟ್ರದಲ್ಲಿ ಸೋಮವಾರ 1,485 ಹೊಸ ಕೋವಿಡ್ ಪ್ರಕರಣ ವರದಿಯಾಗಿದೆ. 27 ಜನರು ಸಾವನ್ನಪ್ಪಿದ್ದಾರೆ. ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 65,93,182ಕ್ಕೆ ತಲುಪಿದೆ. ಹಲವು ಜಿಲ್ಲೆಗಳಲ್ಲಿ ಯಾವುದೇ ಹೊಸ ಪ್ರಕರಣಗಳು ವರದಿಯಾಗಿಲ್ಲ. ರಾಜ್ಯದ ಸಕ್ರಿಯ ಪ್ರಕರಣಗಳ ಸಂಖ್ಯೆ 28,000.
ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಆದ್ದರಿಂದ ಸರ್ಕಾರ ಕೋವಿಡ್ ನಿರ್ಬಂಧಗಳನ್ನು ಸಡಿಲಗೊಳಿಸುತ್ತಿದೆ. ರಾಜ್ಯದ ಅಮ್ಯೂಸ್ಮೆಂಟ್ ಪಾರ್ಕ್ಗಳು, ಆಡಿಟೋರಿಯಂಗಳು ಮತ್ತು ಚಿತ್ರಮಂದಿರಗಳನ್ನು ಅಕ್ಟೋಬರ್ 22 ರಿಂದ ತೆರೆಯಲಾಗುವುದು ಎಂದು ತಿಳಿಸಲಾಗಿದೆ.ಮುಂದಿನ ವಾರ ಚಿತ್ರ ಮಂದಿರಗಳು ಓಪನ್ ಮಾಡಲು ಆದೇಶ ಹೊರಡಿಸುತ್ತಿದ್ದಂತೆ ಚಿತ್ರ ಮಂದಿರ ಮಾಲೀಕರು ಥಿಯೇಟರ್ ಗಳ ಸ್ಸಚ್ಚತಾ ಕಾರ್ಯವನ್ನು ಆರಂಭಿಸಿದ್ದಾರೆ. ಈಗಾಗಲೇ ಕರ್ನಾಟಕ ಸೇರಿದಂತೆ ಹಲವೆಡೆ ಚಿತ್ರಮಂದಿರಗಳನ್ನು ತೆರೆಯಲು ಅವಕಾಶ ಸಿಕ್ಕಿದ್ದು, ದೇಶಾದ್ಯಂತ ಕೊರೊನಾ ಪ್ರಕರಣಗಳು ಇಳಿಮುಖವಾಗುತ್ತಿರುವ ರಾಜ್ಯಗಳಲ್ಲಿ ಥಿಯೇಟರ್ ಮಾತ್ರವಲ್ಲದೇ ಕೆಲವು ಕ್ಷೇತ್ರಗಳಿಗೆ ಷರತ್ತುಬದ್ಧ ಸಡಿಲಿಕೆ ನೀಡಲಾಗಿದೆ.
ಈ ಮಧ್ಯೆ ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೋಪೆ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ,"ಸಾಂಕ್ರಾಮಿಕ ರೋಗದ ಎರಡನೇ ಅಲೆ ಇನ್ನೂ ಮುಗಿದಿಲ್ಲ. ಆದರೆ ಈಗಿನಂತೆ ಮೂರನೇ ಅಲೆಗೆ ಯಾವುದೇ ಅನುಕೂಲಕರ ಸ್ಥಿತಿ ಇಲ್ಲ. ದೀಪಾವಳಿಯ ನಂತರ ಮೂರನೇ ಅಲೆಯ ಬಗ್ಗೆ ಕೋವಿಡ್ ಟಾಸ್ಕ್ ಫೋರ್ಸ್ ಎಚ್ಚರಿಕೆ ನೀಡಿದೆ. ನಾವು ಪರಿಸ್ಥಿತಿಯನ್ನು ಮೌಲ್ಯಮಾಪನ ಮಾಡುತ್ತಿದ್ದೇವೆ" ಎಂದು ಹೇಳಿದ್ದಾರೆ.
ಕಾಲೇಜು ವಿದ್ಯಾರ್ಥಿಗಳಿಗೆ ಕೋವಿಡ್ -19 ವಿರುದ್ಧ ಲಸಿಕೆ ಹಾಕುವುದು ರಾಜ್ಯ ಆಡಳಿತದ ಮುಂದಿರುವ ಹೊಸ ಸವಾಲಾಗಿದೆ ಎಂದು ಟೋಪ್ ಹೇಳಿದರು. ವ್ಯಾಕ್ಸಿನೇಷನ್ ಮಾಡಲು ಸಹೋದ್ಯೋಗಿಗಳು ಮುಂದೆ ಬರಬೇಕೆಂದು ಅವರು ಮನವಿ ಮಾಡಿದರು.