ಸಿದ್ದರಾಮಯ್ಯ ಈ ಮಟ್ಟಕ್ಕೆ ಇಳಿಯಬಾರದಿತ್ತು: ರಮೇಶ್ ಜಾರಕಿಹೊಳಿ
ಮುಂಬೈ, ಜುಲೈ 10: ನಾವು ಹತ್ತು ಮಂದಿ ಮಾತ್ರವಲ್ಲ, ಇನ್ನೂ ನಾಲ್ವರು ಅತೃಪ್ತ ಶಾಸಕರು ಮುಂಬೈಗೆ ಬರಲಿದ್ದಾರೆ ಎಂದು ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.
ಮುಂಬೈ ರೆನೈಸಾನ್ಸ್ ಹೋಟೆಲ್ನಿಂದ ಖಾಸಗಿ ಸುದ್ದಿ ವಾಹಿನಿಯೊಂದಿಗೆ ಮಾತನಾಡಿದ ಅವರು, ತಾವು ತಂಗಿರುವ ಹೋಟೆಲ್ಗೆ ಒಳ ಪ್ರವೇಶಿಸಲು ಪ್ರಯತ್ನಿಸುತ್ತಿರುವ ಡಿಕೆ ಶಿವಕುಮಾರ್ ವಿರುದ್ಧ ಹರಿಹಾಯ್ದರು.
ನಾವು ಕಾಂಗ್ರೆಸ್ ಬಿಟ್ಟಿಲ್ಲ. ಶಾಸಕ ಸ್ಥಾನಕ್ಕೆ ಮಾತ್ರ ರಾಜೀನಾಮೆ ಕೊಟ್ಟಿದ್ದೇವೆ. ನಾನು ಐದು ಸಲ ಗೆದ್ದಿದ್ದೇನೆ. ಹಿರಿಯ ಶಾಸಕನಿದ್ದೇನೆ. ನಮ್ಮ ಅಹವಾಲುಗಳನ್ನು ಸರ್ಕಾರ ಆಲಿಸಿಲ್ಲ. ಕಳೆದ ಒಂದು ವರ್ಷದಿಂದ ನಾವು ಇದನ್ನು ಮಾಡಿ ಒಂದು ಮಟ್ಟಕ್ಕೆ ತಂದಿದ್ದೇವೆ. ನಾವು ಡಿಕೆ ಶಿವಕುಮಾರ್ ಅವರೊಂದಿಗೆ ಹೋಗುವುದಿಲ್ಲ. ಅವರನ್ನು ಭೇಟಿಯಾಗೊಲ್ಲ. ಇಂದು ಮತ್ತೆ ನಾಲ್ಕು ಜನ ಶಾಸಕರು ನಮ್ಮ ಜತೆ ಸೇರಿಕೊಳ್ಳಲಿದ್ದಾರೆ ಎಂದರು.
ಹೋಟೆಲ್ ರೂಮ್ ಕ್ಯಾನ್ಸಲ್ ಆದ್ಮೇಲೆ 'ಐ ಲವ್ ಮುಂಬೈ' ಎಂದ ಡಿಕೆಶಿ
ಡಿಕೆ ಶಿವಕುಮಾರ್ ಅವರಿಂದ ಸಾಕಷ್ಟು ತೊಂದರೆಗಳಾಗಿವೆ. ಅವರು ಒಂದು ವರ್ಷದ ಹಿಂದೆ ನಮ್ಮ ಸ್ನೇಹಿತರಾಗಿದ್ದರು. ಈಗ ಆ ಗೆಳೆತನ ಇಲ್ಲ. ಅವರು ಮತ್ತಷ್ಟು ತೊಂದರೆ ಕೊಡುವುದು ಬೇಡ. ಅವರಿಗೆ ದೇವರು ಒಳ್ಳೆಯದನ್ನು ಮಾಡಲಿ. ಅವರ ಬಗ್ಗೆ ಹೇಳುವುದು ಸಾಕಷ್ಟಿದೆ. ಎಲ್ಲ ಡ್ರಾಮಾ ಮುಗಿದ ಬಳಿಕ ಮಾಧ್ಯಮಗಳ ಮುಂದೆ ಇದೆಲ್ಲ ಯಾಕೆ ಹೇಗೆ ಆಯ್ತು ಎಂದು ಹೇಳುತ್ತೇವೆ.
ಬಿಜೆಪಿಯವರು ಕರೆಸಿದ್ದಲ್ಲ
ನಮ್ಮನ್ನು ಬಿಜೆಪಿಯವರು ಕರೆಸಿದ್ದಲ್ಲ. ಅವರ ಸಂಪರ್ಕದಲ್ಲಿಯೂ ಇಲ್ಲ. ಇಲ್ಲಿಗೆ ನಾವೇ ಬಂದಿದ್ದೇವೆ. ಇಲ್ಲಿನ ಪ್ರತಿಯೊಂದು ಖರ್ಚನ್ನೂ ನಾವೇ ಭರಿಸಿದ್ದೇವೆ. ರಾಜೀನಾಮೆ ವಿಚಾರದಲ್ಲಿ ನಾವು ದೃಢ ನಿರ್ಧಾರ ಮಾಡಿದ್ದೇವೆ ಅದನ್ನು ಬದಲಿಸುವುದಿಲ್ಲ. ರಾಜೀನಾಮೆ ಸ್ವೀಕರಿಸಿದ ಬಳಿಕ ವಾಪಸ್ ಬರುತ್ತೇವೆ ಎಂದು ರಮೇಶ್ ಜಾರಕಿಹೊಳಿ ತಿಳಿಸಿದರು.
ಸಿದ್ದರಾಮಯ್ಯ ಈ ಮಟ್ಟಕ್ಕೆ ಇಳಿಯಬಾರದಿತ್ತು
ಸಿದ್ದರಾಮಯ್ಯ ಅವರು ನಮ್ಮ ನಾಯಕರು. ಅವರು ಈ ಮಟ್ಟಕ್ಕೆ ಇಳಿಯಬಾರದಿತ್ತು. ಅವರು ಸುಳ್ಳು ಹೇಳುವುದಿಲ್ಲ. ಆದರೆ, ಯಾವ ಒತ್ತಡದಿಂದ ಹೀಗೆ ಮಾಡಿದ್ದಾರೆಯೋ ಗೊತ್ತಿಲ್ಲ. ಯಾವುದೇ ಕಾರಣಕ್ಕೂ ವಾಪಸ್ ಬರೊಲ್ಲ. ರಾಜೀನಾಮೆ ಹಿಂದಕ್ಕೆ ಪಡೆಯುವುದಿಲ್ಲ. ಇವರೆಲ್ಲ ಮಾಡುತ್ತಿರುವುದು ನಾಟಕ. ಸ್ಪೀಕರ್ ಅವರ ಮೇಲೆ ನಮಗೆ ಗೌರವವಿದೆ. ನಮ್ಮ ರಾಜೀನಾಮೆ ಅಂಗೀಕರಿಸಲಿ. ನನ್ನ ವೈಯಕ್ತಿಕ ಜೀವನ ಕೂಡ ಸಾಗಿಸುತ್ತೇನೆ. ನನಗೆ ಶಾಸಕನಾಗಲೂ ಇಷ್ಟವಿಲ್ಲ ಎಂದರು.
ಸ್ಪೀಕರ್ ವಿರುದ್ಧ ಅತೃಪ್ತ ಶಾಸಕರು ಸುಪ್ರೀಂಗೆ Live Updates
ಡಿಕೆಶಿ ಅವರಿಗೆ ಅವಮಾನವಾದರೆ ಸಹಿಸೊಲ್ಲ
ಡಿಕೆ ಶಿವಕುಮಾರ್ ನನ್ನ ರಾಜಕೀಯ ಗುರು. ರಾಜಕೀಯದಲ್ಲಿ ನನಗೆ ಎಲ್ಲ ರೀತಿ ಸಹಕಾರ ನೀಡಿದವರು. ಇಷ್ಟು ಉನ್ನತ ಸ್ಥಾನಕ್ಕೆ ತರಲು ಅವರು ನೆರವಾಗಿದ್ದವರು. ಅವರಿಗೆ ಅವಮಾನ ಮಾಡುವ ಉದ್ದೇಶ ನಮಗಿಲ್ಲ. ಅವರಿಗೆ ಅವಮಾನವಾದರೆ ನಾವೂ ಸಹಿಸೊಲ್ಲ. ಆದರೆ, ರಾಜಕಾರಣದ ವಿಚಾರದಲ್ಲಿ ಅವರನ್ನು ಭೇಟಿ ಮಾಡುವುದು ಆಗುವುದಿಲ್ಲ. ಬೆಂಗಳೂರಿಗೆ ಬಂದ ಬಳಿಕ ಮೊದಲು ಅವರನ್ನು ಭೇಟಿ ಮಾಡಿ ವಸ್ತುಸ್ಥಿತಿ ವಿವರಿಸುತ್ತೇವೆ ಎಂದು ಎಸ್ ಟಿ ಸೋಮಶೇಖರ್ ತಿಳಿಸಿದರು.
ಕ್ಷಮಿಸಿ, ಭೇಟಿಯಾಗಲು ಸಾಧ್ಯವಿಲ್ಲ
ಶಿವಕುಮಾರ್ ಸೇರಿದಂತೆ ಯಾರನ್ನೂ ರಾಜಕಾರಣದ ವಿಚಾರದಲ್ಲಿ ಭೇಟಿ ಮಾಡುವುದಿಲ್ಲ. ಇಂದಿನ ಪರಿಸ್ಥಿತಿಯಲ್ಲಿ ರಾಜಕಾರಣದ ವಿಚಾರದಲ್ಲಿ ನಾವು ಮುಂದಕ್ಕೆ ಹೋಗಿದ್ದೇವೆ. ಅವರನ್ನು ಭೇಟಿ ಮಾಡಲು ಆಗುವುದಿಲ್ಲ. ಅವರು ಹೆದರಿಸುವವರು, ಬ್ಲ್ಯಾಕ್ಮೇಲ್ ಮಾಡುವವರು ಅಲ್ಲ. ಕ್ಷಮಿಸಿ. ಪ್ರೀತಿಯಿಂದಲೇ ಹೇಳುತ್ತೇವೆ.
ರಾಜಕಾರಣದಲ್ಲಿ ಸರಿಯೋ ತಪ್ಪೋ ಒಂದು ಹೆಜ್ಜೆ ಮುಂದೆ ಇಟ್ಟಿದ್ದೇವೆ ಎಂದು ಸೋಮಶೇಖರ್ ತಿಳಿಸಿದರು.
ಎಲ್ಲರೂ ಮನನೊಂದಿದ್ದೇವೆ
ಬಂದಿರುವ ಎಲ್ಲ ಸ್ನೇಹಿತರು ಹಿರಿಯರಲ್ಲಿ ಮನವಿ ಮಾಡುತ್ತೇವೆ. ನಾವು ಮಾತನಾಡುವ ಮನಸ್ಥಿತಿಯಲ್ಲಿಲ್ಲ. ನಾವು ಮಾತನಾಡಲು ಸಿದ್ಧರಿಲ್ಲ. ಎಲ್ಲರೂ ಮನನೊಂದಿದ್ದೇವೆ, ದಯವಿಟ್ಟು ವಾಪಸ್ ಹೋಗಿ ಎಂದು ಭೈರತಿ ಬಸವರಾಜು ಮನವಿ ಮಾಡಿದರು.