ಮಹಾ ಬಿಕ್ಕಟ್ಟು: ಇನ್ನೊಬ್ಬ ಶಾಸಕ ಸಿಕ್ಕರೆ, ಏಕನಾಥ್ ಶಿಂಧೆ ರೂಟ್ ಕ್ಲಿಯರ್!
ಮುಂಬೈ, ಜೂನ್ 23: ಮಹಾರಾಷ್ಟ್ರದಲ್ಲಿ ರಾಜಕೀಯದ ಬಿಕ್ಕಟ್ಟು ಶಿವಸೇನೆ ಪಾಲಿಗೆ ಉರುಳಾಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ಶಿವಸೇವೆ ವಿರುದ್ಧ ಸಿಡಿದೆದ್ದ ಏಕನಾಥ್ ಶಿಂಧೆ ಪರವಾಗಿ ನಿಲ್ಲುವ ಶಾಸಕರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಆಗುತ್ತಿದೆ.
ಶಿವಸೇನೆಯ ಇನ್ನೂ ಮೂವರು ಶಾಸಕರು ಮುಂಬೈ ಕಡೆಗೆ ಪ್ರಯಾಣ ಬೆಳೆಸಿದ್ದು, ಶಿಂಧೆ ಪರವಾಗಿ ನಿಂತ ಶಾಸಕರ ಸಂಖ್ಯೆಯು 36ಕ್ಕೆ ಏರಿಕೆ ಆಗಿದೆ. ಪಕ್ಷದ ಒಟ್ಟು 55 ಶಾಸಕರಲ್ಲಿ 36 ಶಾಸಕರ ಬೆಂಬಲವನ್ನು ಶಿಂಧೆ ಹೊಂದಿದ್ದು, ಮುಖ್ಯಮಂತ್ರಿ ಉದ್ಧವ್ ಠಾಕ್ರೆಯನ್ನು ಮಣಿಸುವುದಕ್ಕೆ ಇನ್ನೊಂದು ಸ್ಥಾನವಷ್ಟೇ ಬಾಕಿ ಉಳಿದಿದೆ.
Explained: ಮಹಾರಾಷ್ಟ್ರದಲ್ಲಿ ಆ 40 ಶಾಸಕರ ಸಹಿ ಸರ್ಕಾರಕ್ಕೆ ಆಗುತ್ತಾ ಕಹಿ!?
ಮಹಾರಾಷ್ಟ್ರದಲ್ಲಿ ಇನ್ನೊಬ್ಬ ಶಾಸಕ ಏಕನಾಥ್ ಶಿಂಧೆ ಪರವಾಗಿ ಬೆಂಬಲ ವ್ಯಕ್ತಪಡಿಸಿದರೆ ಕಥೆ ಮುಗಿಯುತ್ತೆ. ಸಮ್ಮಿಶ್ರ ಸರ್ಕಾರದ ವಿರುದ್ಧ ತೊಡೆ ತಟ್ಟಿರುವ ಬಂಡಾಯ ಶಾಸಕರು ಬಿಜೆಪಿಯ ಜೊತೆಗೆ ಸೇರಿಕೊಂಡು ಹೊಸ ಸರ್ಕಾರವನ್ನು ರಚಿಸುವುದಕ್ಕೆ ಎಲ್ಲ ದಾರಿಗಳು ಸುಗಮವಾಗುತ್ತವೆ. ಈ ಹಂತದಲ್ಲಿ ಮಹಾರಾಷ್ಟ್ರದಲ್ಲಿ ನಡೆದ ರಾಜಕೀಯ ಬೆಳವಣಿಗೆಗಳನ್ನು ಈ ವರದಿಯಲ್ಲಿ ತಿಳಿದುಕೊಳ್ಳಬೇಕಿದೆ.
ಮುಂಬೈ To ಗುವಾಹಟಿ ವಿಮಾನ ಏರಿದ 3 ಬಂಡಾಯ ಶಾಸಕರು
ಶಿವಸೇನೆ ವಿರುದ್ಧ ಕೆರಳಿದ ಸಾವಂತವಾಡಿ ಶಾಸಕ ದೀಪಕ್ ಕೇಸಕರ್, ಚೆಂಬೂರ್ ಶಾಸಕ ಮಂಗೇಶ್ ಕುಡಾಲ್ಕರ್ ಮತ್ತು ದಾದರ್ ಶಾಸಕ ಸದಾ ಸರ್ವಾಂಕರ್ ಗುರುವಾರ ಬೆಳಗ್ಗೆ ಮುಂಬೈನಿಂದ ಗುವಾಹಟಿ ಜಿಗಿದಿದ್ದಾರೆ. ಪಕ್ಷಾಂತರ ವಿರೋಧಿ ಕಾನೂನಿನ ಅಡಿಯಲ್ಲಿ ಅನರ್ಹತೆ ಶಿಕ್ಷೆಯನ್ನು ಎದುರಿಸದೇ ಇಡೀ ಪಕ್ಷವನ್ನು ವಿಭಜಿಸುವುದಕ್ಕೆ ಶಿಂಧೆ ಪಾಳಯಕ್ಕೆ ಇನ್ನೊಬ್ಬ ಶಾಸಕರ ಕೊರತೆಯಿದೆ. ಒಬ್ಬ ಶಿವಸೇನೆ ಶಾಸಕರು ಈ ತಂಡದೊಂದಿಗೆ ಕೈ ಜೋಡಿಸಿದರೆ, 37 ಶಾಸಕರ ಬೆಂಬಲದೊಂದಿಗೆ ಪಕ್ಷಾಂತರದ ಪ್ಲ್ಯಾನ್ ಯಶಸ್ವಿ ಆಗಲಿದೆ. ಈಗಾಗಲೇ ಐವರು ಪಕ್ಷೇತರ ಶಾಸಕರು ಏಕನಾಥ್ ಶಿಂಧೆ ತಂಡದ ಜೊತೆಗೆ ಗುರುತಿಸಿಕೊಂಡಿದ್ದಾರೆ.
ಮಹಾ ಮುಖ್ಯಮಂತ್ರಿ ಆಗುತ್ತಾರಾ ಏಕನಾಥ್ ಶಿಂಧೆ
ಮಹಾರಾಷ್ಟ್ರದಲ್ಲಿ ಶಿವಸೇವೆಯ ಜೊತೆ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್ ಮತ್ತು ಶರದ್ ಪವಾರ್ ನೇತೃತ್ವದ ಎನ್ಸಿಪಿ ಹೊಸ ಲೆಕ್ಕಾಚಾರವನ್ನು ಹಾಕಿಕೊಳ್ಳುತ್ತಿದೆ. ಈ ರಾಜಕೀಯ ಬಿಕ್ಕಟ್ಟಿನಿಂದ ಬಚಾವ್ ಆಗುವುದಕ್ಕೆ ಬಂಡಾಯ ನಾಯಕ ಏಕನಾಥ್ ಶಿಂಧೆಗೆ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟು ಕೊಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಸಮ್ಮಿಶ್ರ ಸರ್ಕಾರದ ಮಿತ್ರಪಕ್ಷಗಳು ಈ ರೀತಿಯ ಸಲಹೆಯನ್ನು ನೀಡಿವೆ ಎಂದೂ ಮೂಲಗಳು ತಿಳಿಸಿವೆ. ಆದರೆ ಕಾಂಗ್ರೆಸ್ ಮತ್ತು ಎನ್ಸಿಪಿ ಆಫರ್ ಅನ್ನು ಏಕನಾಥ್ ಶಿಂಧೆ ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ಎದುರು ನೋಡಲಾಗುತ್ತಿದೆ.
ರಾಜೀನಾಮೆ ಸಲ್ಲಿಸಲು ಸದಾ ಸಿದ್ಧ ಎಂದ ಉದ್ಧವ್ ಠಾಕ್ರೆ
ಮಹಾರಾಷ್ಟ್ರದಲ್ಲಿ ಎರಡೂವರೆ ವರ್ಷಗಳಿಂದಲೂ ಸಮ್ಮಿಶ್ರ ಸರ್ಕಾರವು ಅಪಾಯದಲ್ಲಿ ಸಿಲುಕಿದೆ. ಶಿವಸೇನೆ ಸಂಸ್ಥಾಪಕ ಹಾಗೂ ತಮ್ಮ ತಂದೆ ಬಾಳಾಸಾಹೇಬ್ ಠಾಕ್ರೆ ಹೆಸರು ಉಲ್ಲೇಖಿಸಿ ಬಂಡಾಯ ಶಾಸಕರನ್ನು ಉದ್ದೇಶಿಸಿ ಭಾವನಾತ್ಮಕ ಭಾಷಣ ಮಾಡಿದರು. ಕೋವಿಡ್-19 ಸೋಂಕು ತಗುಲಿದ ಹಿನ್ನೆಲೆ ಫೇಸ್ ಬುಕ್ ಮೂಲಕ ಲೈವ್ ವಿಡಿಯೋದಲ್ಲಿ ಮಾತನಾಡಿದರು. "ನಮ್ಮದೇ ಜನರಿಗೆ ನಾನು ಮುಖ್ಯಮಂತ್ರಿ ಆಗಿರುವುದು ಇಷ್ಟವಿಲ್ಲದಿದ್ದರೆ, ನೇರವಾಗಿ ನನ್ನ ಬಳಿಗೆ ಬಂದು ಹೇಳಲಿ, ನಾನು ರಾಜೀನಾಮೆ ನೀಡುವುದಕ್ಕೆ ಸಿದ್ಧವಾಗಿದ್ದೇನೆ. ನಾನು ಬಾಳಾಸಾಹೇಬ್ ಪುತ್ರನಾಗಿದ್ದು, ಯಾವುದೇ ಹುದ್ದೆಗೆ ಅಂಟಿಕೊಂಡಿರುವವನು ಅಲ್ಲ," ಎಂದು ಹೇಳಿದ್ದರು.
ಏಕನಾಥ್ ಶಿಂಧೆ ಜೊತೆಗೆ ಯಾವುದೇ ರೀತಿ ಮಾತಾಡಿಲ್ಲ
ಮಹಾರಾಷ್ಟ್ರದಲ್ಲಿನ ರಾಜಕೀಯ ಬಿಕ್ಕಟ್ಟು ಶಿವಸೇನೆಯ ಆಂತರಿಕ ವಿಷಯವಾಗಿದ್ದು, ರಾಜ್ಯದಲ್ಲಿ ಸರ್ಕಾರ ರಚಿಸಲು ಯಾವುದೇ ರೀತಿ ಪ್ರಸ್ತಾಪವನ್ನು ಸಲ್ಲಿಸಿಲ್ಲ ಎಂದು ಬಿಜೆಪಿ ಹೇಳಿದೆ. "ನಾವು ಏಕನಾಥ್ ಶಿಂಧೆ ಜೊತೆಗೆ ಮಾತನಾಡಿಲ್ಲ. ಇದು ಶಿವಸೇನೆಯ ಆಂತರಿಕ ವಿಷಯ. ಬಿಜೆಪಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ನಾವು ಸರ್ಕಾರ ರಚನೆಗೆ ಹಕ್ಕು ಮಂಡಿಸುತ್ತಿಲ್ಲ," ಎಂದು ಪಕ್ಷದ ನಾಯಕ ದೇವೇಂದ್ರ ಫಡ್ನವಿಸ್ ಅನ್ನು ಭೇಟಿ ಮಾಡಿದ ಕೇಂದ್ರ ಸಚಿವ ರಾವ್ ಸಾಹೇಬ್ ಪಾಟೀಲ್ ದಾನ್ವೆ ಹೇಳಿದ್ದಾರೆ.