ಮಾರ್ಚ್ 18 ರಿಂದ ಯೆಸ್ ಬ್ಯಾಂಕ್ ಸೇವೆಗಳು ಪುನರಾರಂಭ- RBI ಗವರ್ನರ್
ಮುಂಬೈ, ಮಾರ್ಚ್ 16: ಮಾರ್ಚ್ 18 ರಿಂದ ಯೆಸ್ ಬ್ಯಾಂಕ್ ಎಲ್ಲಾ ಸೇವೆಗಳು ಪುನರಾರಂಭ ಆಗಲಿದೆ ಎಂದು ಆರ್ ಬಿ ಐ ಗವರ್ನರ್ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ. ಮುಂಬೈನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಈ ವಿಷಯವನ್ನು ಹೇಳಿದ್ದಾರೆ.
ಯೆಸ್ ಬ್ಯಾಂಕ್ ನಲ್ಲಿ ಖಾತೆ ಹೊಂದಿರುವ ಗ್ರಾಹಕರ ಹಣ ಸುರಕ್ಷಿತವಾಗಿದೆ. ಹೀಗಾಗಿ ಅವರು ಭಯಪಡುವ ಅಗತ್ಯ ಇಲ್ಲ ಎಂದು ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಯೆಸ್ ಬ್ಯಾಂಕ್ ಪುನಶ್ಚೇತನ, ಬ್ಯಾಂಕ್ ಮಂಡಳಿ ಪುನರ್ ರಚನೆ ಕಾರ್ಯ ಪ್ರಾರಂಭವಾಗಿದೆ.
ಯೆಸ್ ಬ್ಯಾಂಕ್ ಗ್ರಾಹಕರಿಗೆ ನೆಮ್ಮದಿಯ ಸುದ್ದಿ ಕೊಟ್ಟ ಸರ್ಕಾರ
ಕೊರೊನಾ ವೈರಸ್ ಮುನ್ನೆಚ್ಚರಿಕೆ ವಹಿಸಲು ಗ್ರಾಹಕರಿಗೆ ಕೆಲವೊಂದು ಸೂಚನೆ ನೀಡಿದ್ದಾರೆ. ನೋಟುಗಳ ಮೂಲಕ ವ್ಯವಹಾರ ಮಾಡದೆ, ಡಿಜಿಟಲ್ ಪೇಮೆಂಟ್ ಗಳ ವ್ಯವಹಾರ ಮಾಡುವಂತೆ ತಿಳಿಸಿದ್ದಾರೆ. ಹಳೆಯ ನೋಟುಗಳ ಮೂಲಕ ಕೊರೊನಾ ವೈರಸ್ ಹರಡುವ ಸಾಧ್ಯತೆ ಇದ್ದು, ಈ ನಿಯಮ ಪಾಲಿಸುವಂತೆ ಹೇಳಿದ್ದಾರೆ.
ಕೊರೊನಾ ವೈರಸ್ ಆರ್ಥಿಕ ಸ್ಥಿತಿಯ ಮೇಲೆ ಸಹ ಪರಿಣಾಮ ಬೀರುತ್ತದೆ. ದೇಶದ ಆರ್ಥಿಕ ಸ್ಥಿತಿ ಹದಗೆಡುವ ಭೀತಿ ಇದೆ. ಮುಂದೆ ಪರಿಸ್ಥಿತಿ ನಿಭಾಯಿಸಲು ಸಜ್ಜಾಗುವಂತೆ ಬ್ಯಾಂಕ್ ಗಳಿಗೆ ಮನವಿ ಮಾಡಿದ್ದಾರೆ.
ಕೇಂದ್ರ ಸರ್ಕಾರ ಯೆಸ್ ಬ್ಯಾಂಕ್ ವ್ಯವಹಾರದ ಮೇಲೆ ಹೇರಿದ್ದ ನಿರ್ಬಂಧವನ್ನು ಮಾರ್ಚ್ 18ರಿಂದ ತೆರವುಗೊಳಿಸಲಾಗುತ್ತದೆ. ಗೆಜೆಟ್ ನೋಟಿಫಿಕೇಷನ್ ಪ್ರಕಾರ, ಮಾರ್ಚ್ 13ರಿಂದ ಯೆಸ್ ಬ್ಯಾಂಕ್ ಪುನರ್ ರಚನೆ ಯೋಜನೆ 2020 ಜಾರಿಯಲ್ಲಿದೆ. ಹೊಸ ನಿರ್ದೇಶಕರ ಮಂಡಳಿ ರಚಿಸಲಾಗಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕಿನ ಮಾಜಿ ಅಧ್ಯಕ್ಷ ಸುನೀಲ್ ಮೆಹ್ತಾರನ್ನು ಹೊಸ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಹಾಲಿ ಆಡಳಿತಾಧಿಕಾರಿ ಪ್ರಶಾಂತ್ ಕುಮಾರ್ ಮುಂದಿನ ಸಿಇಒ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.